Save Karnataka Tigers | ಎಂ.ಎಂ. ಹಿಲ್ಸ್‌ : ಐದು ಹುಲಿಗಳ ಸಾವಿಗೆ ಮಾನವ - ಪ್ರಾಣಿ ಸಂಘರ್ಷ ಕಾರಣವೇ?

ರಾಜ್ಯದಲ್ಲಿ 2020-21 ರಲ್ಲಿ ಹುಲಿ ದಾಳಿಯಿಂದ ನಾಲ್ವರು ಮೃತಪಟ್ಟಿದ್ದು, 2021-22 ರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2022-23ರಲ್ಲಿ 5 ಮಂದಿ ಮೃತಪಟ್ಟಿದ್ದಾರೆ.;

Update: 2025-06-27 12:03 GMT
ವಿಷ ಪ್ರಾಶನದಿಂದ ಸಾವನ್ನಪ್ಪಿದ ಐದು ಹುಲಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮಾದಪ್ಪನ ನೆಲದಲ್ಲಿ ಐದು ಹುಲಿಗಳ ಸಾವು ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದು, ವಿಷ ಪ್ರಾಶನ ಮಾಡಿರುವುದಕ್ಕೆ ಮಾನವ-ವನ್ಯಜೀವಿ ಸಂಘರ್ಷವೇ ಕಾರಣ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.  

ಒಂದು ಕಾಲದಲ್ಲಿ ಶಾಂತವಾಗಿದ್ದ ಚಾಮರಾಜನಗರ ಜಿಲ್ಲೆಯ ಕೃಷಿಭೂಮಿಗಳ ಮೇಲೆ ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿವೆ. ಇದರ ಪರಿಣಾಮ ಮನುಷ್ಯರು ಹುಲಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಈ ಪ್ರದೇಶದಲ್ಲಿ ಹುಲಿಗಳ ದಾಳಿ ಹೆಚ್ಚಾಗಿದ್ದರಿಂದ ವಿಷಪ್ರಾಶನದಂತಹ ಕ್ರೂರ ಕೃತ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 

ಹುಲಿ ದಾಳಿಗೆ ಬಲಿಯಾದವರು ಹಲವರು

ರಾಜ್ಯದಲ್ಲಿ 2020-21 ರಲ್ಲಿ 4 ಜನರು ಹುಲಿ ದಾಳಿಯಿಂದ ಮೃತಪಟ್ಟಿದ್ದು, 2021-22 ರಲ್ಲಿ ಇಬ್ಬರು ಮೃತಪಟ್ಟಿದ್ದರು. 2022-23ರಲ್ಲಿ 5 ಮಂದಿ ಮೃತಪಟ್ಟಿರುವುದು ಅರಣ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.  

ನಂಜನಗೂಡು ತಾಲ್ಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ 2023ರ ನವೆಂಬರ್‌ 24ರಂದು 52 ವರ್ಷದ ಮಹಿಳೆಯೊಬ್ಬರು ಹುಲಿ ದಾಳಿಯಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಅಭಯಾರಣ್ಯದ ಕಣಿವೆ ಗ್ರಾಮದಲ್ಲಿ 2023ರ ಡಿಸೆಂಬರ್ 10 ರಂದು ಬಸವ ಎಂಬ 54 ವರ್ಷದ ಬುಡಕಟ್ಟು ವ್ಯಕ್ತಿ ಮೃತಪಟ್ಟಿದ್ದರು. ಬಸವ ತನ್ನ ಮೇಕೆಗಳಿಗೆ ಮೇವು ತರಲು ಕಾಡಿಗೆ ಹೋದಾಗ ಹುಲಿ ದಾಳಿ ನಡೆಸಿತ್ತು. 

2024ರಲ್ಲಿ ಬಂಡೀಪುರ ಹುಲಿ ಅಭಯಾರಣ್ಯ ಬಳಿಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾಗ 42 ವರ್ಷದ ರೈತರೊಬ್ಬರು ಹುಲಿ ದಾಳಿಯಿಂದ ಮೃತಪಟ್ಟಿದ್ದರು.

ಚಾಮರಾಜನಗರ ಜಿಲ್ಲೆಯ ಮೊಳೆಯೂರು ವ್ಯಾಪ್ತಿಯ ಅರಣ್ಯದ ಸರಗೂರು ತಾಲ್ಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಬೇಗೂರು ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಾಲಾಜಿ ನಾಯ್ಕ ಎಂಬುವರು ಹುಲಿ ದಾಳಿಯಿಂದ ಮೃತಪಟ್ಟಿದ್ದರು.  

ಇತ್ತೀಚೆಗೆ ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ (55) ಮೃತಪಟ್ಟಿದ್ದರು. ಬಳಿಕ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಅಭಯಾರಣ್ಯ ವ್ಯಾಪ್ತಿಯ ಓಂಕಾರ್ ಶ್ರೇಣಿ ಬಳಿ ಪುಟ್ಟಮ್ಮ (32) ಎಂಬ ಮಹಿಳೆಯೊಬ್ಬರು ಹುಲಿ ದಾಳಿಗೆ ಬಲಿಯಾದರು.

ಹೀಗೆ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಮಾನವ ಸಂಘರ್ಷವು ಸಾವು-ನೋವುಗಳ ಹಾದಿಯನ್ನು ಹಿಡಿದಿವೆ. ಈ ಸಂಘರ್ಷವು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿ ತಿಂಗಳು ಅನೇಕ ಜಾನುವಾರುಗಳು ಮತ್ತು ನಾಯಿಗಳನ್ನು ಹುಲಿಗಳು ತಿನ್ನುತ್ತವೆ. ಇದೇ ಕಾರಣಕ್ಕಾಗಿ ದನದ ಮಾಂಸಕ್ಕೆ ವಿಷಪ್ರಾಶನ ಹಾಕಿ ಹುಲಿಗಳ ಹತ್ಯೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. 

ಪಶುಪಾಲಕರ ಸ್ವಚ್ಛಂದ ಪ್ರವೇಶ

ಮಲೆ ಮಹದೇಶ್ವರ ಹುಲಿ ಅಭಯಾರಣ್ಯದಲ್ಲಿ ಗುರುವಾರ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಅಸಹಜವಾಗಿ ಮೃತಪಟ್ಟಿರುವ ಘಟನೆ ನಡೆದಿತ್ತು. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಆದೇಶಿಸಿದ್ದರು. ಅರಣ್ಯಾಧಿಕಾರಿಗಳು ನೀಡಿದ ಪ್ರಾಥಮಿಕ ವರದಿಯ ಪ್ರಕಾರ ಹುಲಿಗಳಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂದು ಹೇಳಲಾಗಿತ್ತು. ಇದು ರಾಜ್ಯಾದ್ಯಂತ ಪ್ರಾಣಿ ಪ್ರಿಯರ ಕಳವಳಕ್ಕೆ ಕಾರಣವಾಗಿತ್ತು.

ಮಲೆ ಮಹದೇಶ್ವರ ಬೆಟ್ಟ ಹಾಗೂ ಗೋಪಿನಾಥಂ ಬೆಟ್ಟಗಳ ಗಡಿಯಲ್ಲಿ ಹೆಚ್ಚಾಗಿ ತಮಿಳುನಾಡಿನ ಭಾಗದವರು ಜಾನುವಾರುಗಳನ್ನು ಅರಣ್ಯಕ್ಕೆ ಕರೆತರುತ್ತಾರೆ. ಈ ವೇಳೆ ಜಾನುವಾರುಗಳ ಮೇಲೆ ಹುಲಿ ದಾಳಿ ಸಾಮಾನ್ಯವಾಗಿತ್ತು. ಜಾನುವಾರು ಕಳೆದುಕೊಂಡ ಮಾಲೀಕರೇ ಹತಾಶೆಯಿಂದ ಕೃತ್ಯ ಎಸಗಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. 

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಕಾಡಂಚಿನ ಗ್ರಾಮಗಳಲ್ಲಿ ಜನರ ಚಲನವಲನದ ಮೇಲೆ ಸರಿಯಾಗಿ ನಿಗಾ ವಹಿಸದ ಕಾರಣ ಪ್ರಾಣಿ ಹತ್ಯೆ ನಡೆಯುತ್ತಿದೆ. ಹಲವರು ಪ್ರಾಣಿ ಬೇಟೆಗಾಗಿ ಉರುಳು ಹಾಕುವುದರಿಂದ ಹುಲಿಗಳು ಸಿಲುಕಿ ಮೃತಪಟ್ಟಿರುವ ನಿದರ್ಶನಗಳೂ ಇವೆ. ಆದಾಗ್ಯೂ, ಅರಣ್ಯ ಇಲಾಖೆ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. 

Tags:    

Similar News