Save Karnataka Tigers : ನಾಲ್ಕೂವರೆ ವರ್ಷಗಳಲ್ಲಿ 82 ಹುಲಿಗಳ ಸಾವು, ಮೂರು ಬಾರಿ ವಿಷಪ್ರಾಶನ

‌ಹುಲಿಗಳ ಅಸಹಜ ಸಾವು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಆದರೆ, ಒಂದೇ ಬಾರಿಗೆ ಐದು ಹುಲಿಗಳ ಸಾವು ಇದೇ ಮೊದಲು.;

Update: 2025-06-28 13:35 GMT

ಮೃತಪಟ್ಟಿರುವ ಹುಲಿಗಳು 

ಮಲೈ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟಿರುವ ಘಟನೆ ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದೆ. ಕರ್ನಾಟಕದ ಇತಿಹಾಸದಲ್ಲಿ ಒಂದೇ ಬಾರಿಗೆ ಐದು ಹುಲಿಗಳು ವಿಷಕ್ಕೆ ಬಲಿಯಾಗಿರುವುದು ಇದೇ ಮೊದಲಾಗಿದ್ದು, ಇದು ರಾಜ್ಯದಲ್ಲಿ ಹುಲಿಗಳ ಅಸಹಜ ಸಾವುಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಹುಲಿಗಳ ಅಸಹಜ ಸಾವುಗಳು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದ ಹುಲಿಗಳ ಸಾವುಗಳ ಸಂಖ್ಯೆ ಏರಿಕೆಯಾಗಿದೆ. 2020ರಲ್ಲಿ 14 ಹುಲಿಗಳು, 2021ರಲ್ಲಿ 15, 2022ರಲ್ಲಿ 19, 2023ರಲ್ಲಿ 12, 2024ರಲ್ಲಿ 13 ಮತ್ತು 2025ರಲ್ಲಿ ಇದುವರೆಗೆ 9 ಹುಲಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಹೀಗಾಗಿ, ಕಳೆದ ಐದು ವರ್ಷಗಳಲ್ಲಿ ಒಟ್ಟು 82 ಹುಲಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, 2012 ಮತ್ತು 2024ರ ನಡುವೆ ನೈಸರ್ಗಿಕ ಮತ್ತು ಅಸ್ವಾಭಾವಿಕ ಕಾರಣಗಳಿಂದ ರಾಜ್ಯದಲ್ಲಿ ಒಟ್ಟು 179 ಹುಲಿಗಳು ಸತ್ತಿವೆ.

ವಿಷಪ್ರಾಶನದಿಂದ ಹಿಂದಿನ ಸಾವುಗಳು

ರಾಜ್ಯದಲ್ಲಿ ವಿಷಪ್ರಾಶನದಿಂದ ಹುಲಿಗಳು ಮೃತಪಟ್ಟಿರುವ ಘಟನೆಗಳು ಈ ಹಿಂದೆ ಮೂರು ಬಾರಿ ವರದಿಯಾಗಿವೆ. 2019ರಲ್ಲಿ ನಾಗರಹೊಳೆ ಅಂಚಿನಲ್ಲಿ ಕಾಡು ಹಂದಿಗಾಗಿ ಇಟ್ಟಿದ್ದ ವಿಷಕ್ಕೆ ಹುಲಿಯೊಂದು ಬಲಿಯಾಗಿತ್ತು. ಅಂತೆಯೇ, 2021ರಲ್ಲಿ ಉಡುಪಿ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಇಟ್ಟಿದ್ದ ವಿಷ ಸೇವಿಸಿ ಒಂದು ಹುಲಿ ಮೃತಪಟ್ಟಿತ್ತು. 2023ರಲ್ಲಿ ಬಂಡೀಪುರದ ಕೆಬ್ಬೇಪುರದಲ್ಲಿ ಒಂದು ಹುಲಿಗೆ ವಿಷಪ್ರಾಶನ ಮಾಡಿ, ಅದರ ಅಂಗಗಳನ್ನು ಕಲ್ಲಿಗೆ ಕಟ್ಟಿ ಕೊಳಕ್ಕೆ ಎಸೆದ ಘಟನೆ ವರದಿಯಾಗಿತ್ತು. ಆದರೆ, ಒಂದೇ ಬಾರಿಗೆ ಐದು ಹುಲಿಗಳು ವಿಷಪ್ರಾಶನದಿಂದ ಸಾವನ್ನಪ್ಪಿರುವುದು ಇದೇ ಮೊದಲಾಗಿದ್ದು, ಇದು ಆತಂಕಕಾರಿ

ಈ ಹಿಂದೆ ಒಂದು ಅಥವಾ ಎರಡು ಹುಲಿಗಳು ಸಾವನ್ನಪ್ಪಿರುವ ನಿದರ್ಶನಗಳಿದ್ದವು. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡಿನ ಮಧುಮಲೈ ಅರಣ್ಯದಲ್ಲಿಯೂ ಇದೇ ರೀತಿಯ ಘಟನೆಯಲ್ಲಿ ಎರಡು ಹುಲಿಗಳು ವಿಷಕ್ಕೆ ಬಲಿಯಾಗಿದ್ದವು.

ಕಾರಣಗಳೇನು?

ಮಲೈ ಮಹದೇಶ್ವರ ಬೆಟ್ಟದ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ದನಗಾಹಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದ ಸತ್ಯಾಂಶ ಹೊರಬರಬೇಕಿದೆ. ವನ್ಯಜೀವಿ ತಜ್ಞ ಗಿರಿ ವಾಲ್ಮೀಕಿ ಅವರ ಪ್ರಕಾರ, ದನದ ಮಾಂಸಕ್ಕೆ ವಿಷ ಬೆರೆಸಿ ಹಾಕಲಾಗಿದೆ ಎಂಬುದು ಖಚಿತ. ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂಬುದು ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ. ಹುಲಿಗಳ ದಾಳಿ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂಬ ಊಹಾಪೋಹಗಳಿದ್ದರೂ,ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ.

Full View

ಹುಲಿ ಬೇಟೆ, ಅಂತರರಾಷ್ಟ್ರೀಯ ಬೇಡಿಕೆ

ಹುಲಿಗಳ ಅಸಹಜ ಸಾವಿಗೆ ಕಳ್ಳಬೇಟೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಹುಲಿ ಚರ್ಮ ಮತ್ತು ಅದರ ಅಂಗಗಳಿಗೆ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಅಪಾರ ಬೇಡಿಕೆಯಿದೆ. ಹುಲಿ ಚರ್ಮಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 20 ಕೋಟಿ ಡಾಲರ್​ಗೂ ಅಧಿಕ ಮೌಲ್ಯವಿದೆ ಎನ್ನಲಾಗಿದೆ. ಚೀನಾ, ಕಾಂಬೋಡಿಯಾ, ಬರ್ಮಾ, ಯುಎಇ ರಾಷ್ಟ್ರಗಳಲ್ಲಿ ಹುಲಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಶ್ರೀಮಂತಿಕೆಯ ಸಂಕೇತವಾಗಿ ಅಕ್ರಮವಾಗಿ ಇವುಗಳನ್ನು ಖರೀದಿಸಲಾಗುತ್ತದೆ. ಹುಲಿಯ ಮೂಗಿನಿಂದ ಬಾಲದವರೆಗಿನ ಚರ್ಮಕ್ಕೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ವ್ಯಕ್ತಿಗಳಿದ್ದು, ಇದೇ ಕಾರಣಕ್ಕಾಗಿ ಹುಲಿಗಳ ಹತ್ಯೆಗಳು ನಡೆಯುತ್ತವೆ.

ನೆರೆ ರಾಜ್ಯ ತಮಿಳುನಾಡಿನಲ್ಲಿ ಹುಲಿ ಬೇಟೆ ಹೆಚ್ಚಾಗಿ ನಡೆಯುತ್ತದೆ ಎಂಬ ಆರೋಪಗಳಿವೆ. ರಾಜ್ಯದ ಅರಣ್ಯ ಪ್ರದೇಶಗಳು ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ, ಅಲ್ಲಿನ ಹುಲಿ ಬೇಟೆಗಾರರು ಚಾಮರಾಜನಗರ ಗಡಿ ಭಾಗದ ಅರಣ್ಯಗಳಲ್ಲಿ ಬೇಟೆಯಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲವೊಮ್ಮೆ ಸ್ಥಳೀಯರ ಸಹಾಯವನ್ನೂ ಅವರು ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ.

ದೇಶದಲ್ಲಿ ಹುಲಿಗಳ ಸಾವುಗಳ ಸ್ಥಿತಿಗತಿ

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 750 ಹುಲಿಗಳು ಕಳ್ಳಬೇಟೆ ಮತ್ತು ಇತರ ಕಾರಣಗಳಿಂದ ಮೃತಪಟ್ಟಿವೆ. ಇದರಲ್ಲಿ ಮಧ್ಯಪ್ರದೇಶ ಒಂದರಲ್ಲೇ 173 ಹುಲಿಗಳು ಸಾವನ್ನಪ್ಪಿವೆ. 2019ರಲ್ಲಿ 96 ಹುಲಿಗಳು, 2020ರಲ್ಲಿ 106, 2021ರಲ್ಲಿ 127, 2022ರಲ್ಲಿ 121 ಮತ್ತು 2023ರಲ್ಲಿ 178 ಹುಲಿಗಳು ಸಾವನ್ನಪ್ಪಿವೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ. ಇದೇ ಅವಧಿಯಲ್ಲಿ, ಕಳೆದ ಐದು ವರ್ಷಗಳಲ್ಲಿ ಹುಲಿ ದಾಳಿಯಿಂದ 349 ಜನರು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಾನವ ಸಾವುಗಳು ವರದಿಯಾಗಿವೆ. 2022ರಲ್ಲಿ ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟರೆ, ಮಧ್ಯಪ್ರದೇಶದಲ್ಲಿ 34 ಹುಲಿಗಳು ಮೃತಪಟ್ಟಿವೆ ಎಂದು ವರದಿ ಹೇಳಿದೆ. 

Tags:    

Similar News