ಬೆಂಗಳೂರಿನಲ್ಲಿ ಘೋರ ದುರಂತ: ಕಾರು ಚಾಲಕನ ಅಜಾಗರೂಕತೆಗೆ ಬಲಿಯಾದ ಕಂದಮ್ಮ
ಮೃತಪಟ್ಟ ಮಗುವನ್ನು ಮಹಮ್ಮದ್ ಉಮರ್ ಫಾರೂಕ್ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಮನೆಯ ಮಾಲೀಕರಾದ ಸ್ವಾಮಿ ಎಂಬುವವರು ತಮ್ಮ ಕಾರನ್ನು ಮನೆಯಿಂದ ಹೊರತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ರಾಜಧಾನಿಯಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಮನೆ ಮಾಲೀಕರು ಕಾರು ರಿವರ್ಸ್ ತೆಗೆಯುತ್ತಿದ್ದಾಗ, ಅದರ ಅಡಿಗೆ ಸಿಲುಕಿ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಮಾಗಡಿ ರಸ್ತೆ ಬಳಿ ನಡೆದಿದೆ.
ಮೃತಪಟ್ಟ ಮಗುವನ್ನು ಮಹಮ್ಮದ್ ಉಮರ್ ಫಾರೂಕ್ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಮನೆಯ ಮಾಲೀಕರಾದ ಸ್ವಾಮಿ ಎಂಬುವವರು ತಮ್ಮ ಕಾರನ್ನು ಮನೆಯಿಂದ ಹೊರತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.
ಕುಣಿಗಲ್ ಮೂಲದ ಕುಟುಂಬವೊಂದು ಸ್ವಾಮಿ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿತ್ತು. ಅವರ ಸಂಬಂಧಿಕರು ತಮ್ಮ ಮಗು ಮಹಮ್ಮದ್ನೊಂದಿಗೆ ಇವರ ಮನೆಗೆ ಬಂದಿದ್ದರು. ಮನೆಯ ಹೊರಗೆ ಮಗು ಆಟವಾಡುತ್ತಿದ್ದಾಗ, ಸ್ವಾಮಿ ಅವರು ಕಾರನ್ನು ರಿವರ್ಸ್ ತೆಗೆದಿದ್ದಾರೆ. ಈ ವೇಳೆ ಕಾರಿನ ಕೆಳಗೆ ಮಗು ಇದ್ದದ್ದು ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ, ಕಾರು ಮಗುವಿನ ಮೇಲೆ ಹರಿದು ಅದು ಮೃತಪಟ್ಟಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.