ಅನ್ಯಧರ್ಮೀಯ ವಿವಾಹದಿಂದ ಅತಂತ್ರ; ಪಾಳು ಮಂಟಪದಲ್ಲೇ ಮಗುವಿಗೆ ಜನ್ಮ ನೀಡಿದ ಮುಸ್ಲಿಂ ಮಹಿಳೆ
ಮಹೇಂದ್ರ ಅವರ ಪತ್ನಿ ಹುಸೇನಿ ಎಂಬವರು ಮಂಗಳವಾರ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಬಳಿಯ ಮಂಟಪದಲ್ಲಿ ಮುಂಜಾನೆ 4ರ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.;
ಪ್ರೀತಿಸಿ ಮದುವೆಯಾದ ಕಾರಣ ಸಮಾಜದಿಂದ ಹೊರಹಾಕಿದ ಆ ದಂಪತಿಗೆ ಪಾಳು ಮಂಟಪವೇ ಅರಮನೆಯಾಗಿದೆ. ಇಂತಹ ಪಾಳು ಮಂಟಪದಲ್ಲಿ ಗೃಹಿಣಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಹಿಂದೂ ಧರ್ಮದ ಯುವಕ ಹಾಗೂ ಮುಸ್ಲಿಂ ಯುವತಿಯನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ. ಮದುವೆ ಬಳಿಕ ಎರಡೂ ಕಡೆಯ ಪೋಷಕರು ಇವರನ್ನು ಮನೆಗೆ ಸೇರಿಸಿರಲಿಲ್ಲ. ಸುಮಾರು ದಿನಗಳಿಂದ ದಂಪತಿಯು ಪಟ್ಟಣದ ಪಾಳು ಮಂಟಪದಲ್ಲಿ ತಂಗಿತ್ತು. ಈಗ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಳ್ಳಾರಿಯ ಇಂದಿರಾ ನಗರದ ಮಹೇಂದ್ರ ಅವರ ಪತ್ನಿ ಹುಸೇನಿ ಎಂಬುವರು ಮಂಗಳವಾರ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಸಮೀಪ ಮಂಟಪದಲ್ಲಿ ಮುಂಜಾನೆ 4ರ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹೇಂದ್ರ ಅವರೇ ತಮ್ಮ ಪತ್ನಿಗೆ ಹೆರಿಗೆ ಮಾಡಿಸಿದ್ದಾರೆ. ಬೆಳಕು ಮೂಡಿದ ಬಳಿಕ ಪತ್ನಿ ಮತ್ತು ನವಜಾತ ಶಿಶುವನ್ನು ಮಂಟಪದಿಂದ ಕಾವೇರಿ ನದಿ ಸ್ನಾನಘಟ್ಟದವರೆಗೆ ಕರೆ ತಂದಿದ್ದಾರೆ. ಸ್ನಾನಘಟ್ಟದ ಬಳಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡುವ ಶಿವಾಜಿಸಿಂಗ್ ಎಂಬುವರಿಗೆ ವಿಷಯ ತಿಳಿದಿದೆ. ಹುಸೇನಿ ಅವರಿಗೆ ಸ್ನಾನ ಮಾಡಲು ಬಿಸಿ ನೀರು ಮತ್ತು ಆಹಾರ ಕೊಟ್ಟು ಉಪಚರಿಸಿದ್ದಾರೆ. ಬಳಿಕ ಆಟೋದಲ್ಲಿ ನವಜಾತ ಶಿಶು ಮತ್ತು ದಂಪತಿಯನ್ನು ಶಿವಾಜಿಸಿಂಗ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಮಗು ಮತ್ತು ಬಾಣಂತಿ ಆಸ್ಪತ್ರೆಯಲ್ಲಿದ್ದು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
'ಗೌರಿಬಿದನೂರು ತಾಲೂಕಿನ ತೊಂಡೆಬಾವಿಯ ಗ್ರಾಮದ ಮುಸ್ಲಿಂ ಧರ್ಮದ ಹುಸೇನಿ ಮತ್ತು ಹಿಂದೂ ಧರ್ಮಕ್ಕೆ ಸೇರಿದ ನಾನು ಕಳೆದ ವರ್ಷ ದಸರಾ ಹಬ್ಬದ ಸಂದರ್ಭ ಇಷ್ಟಪಟ್ಟು ಮದುವೆಯಾಗಿದ್ದೆವು. ಎರಡೂ ಮನೆಯವರು ನಮ್ಮನ್ನು ಮನೆಗೆ ಸೇರಿಸಿರಲಿಲ್ಲ. ಹಾಗಾಗಿ ಮಂಡ್ಯಕ್ಕೆ ಬಂದು ಅಲ್ಲಿನ ರೈಲ್ವೆ ನಿಲ್ದಾಣದ ಬಳಿ ಚೋಪಡಿ ಕಟ್ಟಿಕೊಂಡು ವಾಸವಾಗಿದ್ದೆವು. ಹುಸೇನಿ ಪಾರ್ಶ್ವವಾಯು ಪೀಡಿತೆಯಾಗಿದ್ದು, ನಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಮಂಡ್ಯದಲ್ಲಿ ಇರಲು ಸಮಸ್ಯೆಯಾದ ಕಾರಣ ಎರಡು ದಿನಗಳ ಹಿಂದೆ ಈ ಊರಿಗೆ ಬಂದು ದೇವಾಲಯದ ಮಂಟಪದಲ್ಲಿ ಉಳಿದಿದ್ದೆವು. ಸೋಮವಾರ ಮುಂಜಾನೆ ಹುಸೇನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ರಾತ್ರಿ ಆಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ಆಗಲಿಲ್ಲ. ಮಂಟಪದಲ್ಲೇ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ' ಎಂದು ಮಹೇಂದ್ರ ವಿವರಿಸಿದ್ದಾರೆ.