ಎಚ್ಎಂಟಿ ಭೂಮಿ ವಿವಾದ; ಎಚ್ಡಿಕೆ ಜತೆ ಭೇಟಿ ಮಾಡಿ ಚರ್ಚಿಸಲು ಸಿದ್ಧ ಎಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ರಾಜ್ಯದಲ್ಲಿ ಅರಣ್ಯ ಭೂಮಿಯ ವಿಸ್ತರಣೆಗಾಗಿ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಸ್ತಾಪವನ್ನು ಸಚಿವ ಈಶ್ವರ್ ಖಂಡ್ರೆ ಮಂಡಿಸಿದ್ದಾರೆ. "ಅರಣ್ಯದ ಪಕ್ಕದಲ್ಲಿರುವ ಖಾಸಗಿ ಜಮೀನು ಮಾಲೀಕರು ಭೂಮಿಯನ್ನು ಮಾರಾಟಕ್ಕೆ ಸಿದ್ಧರಿದ್ದಾರೆ," ಎಂದಿದ್ದಾರೆ.;
ಎಚ್ಎಂಟಿ ಭೂಮಿ ಮತ್ತು ದೇವದಾರಿ ಗಣಿಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಭೇಟಿ ಮಾಡಿ ಚರ್ಚಿಸಲು ಸಿದ್ಧವಿರುವುದಾಗಿ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಈ ಮೂಲಕ ಈ ವಿಷಯದಲ್ಲಿ ಕುಮಾರಸ್ವಾಮಿ ಮತ್ತು ಖಂಡ್ರೆ ನಡುವೆ ನಡೆಯುತ್ತಿರುವ ವಾಕ್ಸಮರ ಅಂತ್ಯವಾಗುವ ಲಕ್ಷಣ ತೋರುತ್ತಿದ್ದು, ಸಮಸ್ಯೆಗೆ ಪರಿಹಾರವೊಂದು ಲಭಿಸಲಿದೆ.
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈಶ್ವರ್ ಖಂಡ್ರೆ ಈ ಕುರಿತು ಮಾತನಾಡಿದರು. ಎಚ್ಎಂಟಿ ಅರಣ್ಯ ಭೂಮಿ ಕಬಳಿಸಿದೆ ಎಂದು ಖಂಡ್ರೆ ಆರೋಪಿಸಿದ್ದು, ಇದು ಕುಮಾರಸ್ವಾಮಿ ಮತ್ತು ಖಂಡ್ರೆ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಈ ವಿವಾದ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿತ್ತು. ಮಾತುಕತೆಗೆ ಸಿದ್ದ ಎಂಬ ಹೇಳಿಕೆಯು ಪರಿಹಾರ ರೂಪದಲ್ಲಿ ಕಾಣಿಸಿದೆ.
"ನಾನು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ನಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅರಣ್ಯ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯದಲ್ಲಿ ತೊಡಗಿದ್ದೇನೆ. ಕುಮಾರಸ್ವಾಮಿ ಅವರು ಎಚ್ಎಂಟಿ ಭೂಮಿ ಅರಣ್ಯಕ್ಕೆ ಸೇರಿದ್ದಲ್ಲ ಎಂದು ದಾಖಲೆಗಳೊಂದಿಗೆ ಹೇಳುತ್ತಿದ್ದಾರೆ. ಆದರೆ, ದಾಖಲೆಗಳೊಂದಿಗೆ ಈ ವಿಷಯವನ್ನು ಚರ್ಚಿಸಲು ನಾನು ಸಿದ್ಧನಿದ್ದೇನೆ. ಅವರು ಕರೆದರೆ, ನಾನು ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ," ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ಅರಣ್ಯ ವಿಸ್ತರಣೆಗೆ ಖಾಸಗಿ ಭೂಮಿ ಖರೀದಿ ಪ್ರಸ್ತಾಪ
ರಾಜ್ಯದಲ್ಲಿ ಅರಣ್ಯ ಭೂಮಿಯ ವಿಸ್ತರಣೆಗಾಗಿ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಸ್ತಾಪವನ್ನು ಸಚಿವ ಈಶ್ವರ್ ಖಂಡ್ರೆ ಮಂಡಿಸಿದ್ದಾರೆ. "ಅರಣ್ಯದ ಪಕ್ಕದಲ್ಲಿರುವ ಖಾಸಗಿ ಜಮೀನು ಮಾಲೀಕರು ಭೂಮಿಯನ್ನು ಮಾರಾಟಕ್ಕೆ ಸಿದ್ಧರಿದ್ದಾರೆ. ರಾಜ್ಯಾದ್ಯಂತ ಸುಮಾರು 10,000 ಎಕರೆಗೂ ಹೆಚ್ಚು ಖಾಸಗಿ ಭೂಮಿಯನ್ನು ಅರಣ್ಯಕ್ಕೆ ಸೇರಿಸಲು ಒಪ್ಪಿಗೆ ಇದೆ. ಆದರೆ, ಇದಕ್ಕೆ ಹಣಕಾಸಿನ ಲಭ್ಯತೆ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ," ಎಂದು ಖಂಡ್ರೆ ಮಾಹಿತಿ ನೀಡಿದರು.
ಹುಲಿಗಳ ಸಾವಿನ ಬಗ್ಗೆ ಆತಂಕ
ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳು ಸಾವನ್ನಪ್ಪಿದ ಘಟನೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ಬಗ್ಗೆ ಸಂಪೂರ್ಣ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇದೇ ಸಂದರ್ಶನದಲ್ಲಿ ಭರವಸೆ ನೀಡಿದ್ದಾರೆ.
"ಹುಲಿಗಳ ಸಾವಿನ ಪ್ರಕರಣ ನನಗೆ ಆಘಾತ ತಂದಿದೆ. ಪ್ರಾಥಮಿಕ ತನಿಖೆಯಲ್ಲಿ ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳಿದ್ದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಅವರು ಮಾಹಿತಿ ನೀಡಿದರು.