ಕಾಲರಾ ಭೀತಿ | ಮುನ್ನೆಚ್ಚರಿಕೆ ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

ಕಾಲರಾ ನಿಯಂತ್ರಣಕ್ಕೆ ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

Update: 2024-04-25 06:59 GMT
ಕಾಲರಾ ರೋಗಕ್ಕೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಜಾರಿ
Click the Play button to listen to article

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಮುಂದಿನ ದಿನಗಳಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಕಾಲರಾ ಸೋಂಕು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಏ.12ರ ಸುತ್ತೋಲೆಯಲ್ಲಿ ಸೋಂಕು ತಡೆಯ ನಿಟ್ಟಿನಲ್ಲಿ ಅಧಿಕಾರಿಗಳು ಏನು ಮಾಡಬೇಕು ಎಂಬುದನ್ನು ವಿವರಿಸಲಾಗಿದೆ.

ಡಿ.ರಂದೀಪ್ ಅಧಿಕಾರಿಗಳಿಗೆ ತುರ್ತು ಪರಿಸ್ಥಿತಿಗನುಗುಣವಾಗಿ ಆಂಟಿಬಯೋಟಿಕ್ಸ್‌, ಐವಿ ದ್ರಾವಣ ಮತ್ತು ಓರಲ್‌ ರಿಹೈಡ್ರೇಶನ್‌, ಮತ್ತು 24x7 ತಾತ್ಕಾಲಿಕ ಕ್ಲಿನಿಕ್ಸ್‌ಗಳನ್ನು ಸ್ಥಾಪಿಸಲು ಸೂಚಿಸಿದ್ದಾರೆ. ನೀರಿನ ಮಾದರಿಗಳಲ್ಲಿ

ಕೋಲಿಫಾರ್ಮ್ ಬ್ಯಾಕ್ಟೀರಿಯಾ ಟೆಸ್ಟ್‌, ಮಲಮೂತ್ರ ಟೆಸ್ಟ್‌, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳಲ್ಲಿ ಸೂಕ್ಷ್ಮತೆಯ ಪರೀಕ್ಷೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಮಲ ಮಾದರಿಯ ಪರೀಕ್ಷೆಯು ಕಾಲರಾ ಪಾಸಿಟಿವ್‌ ಆಗಿ ಬಂದರೆ ಜಿಲ್ಲಾ ಕಣ್ಗಾವಲು ಅಧಿಕಾರಿಗಳು ತಕ್ಷಣವೇ ಸ್ಥಳೀಯ ಕಣ್ಗಾವಲು ಪ್ರಾರಂಭಿಸಬೇಕಾಗುತ್ತದೆ. ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ (IHIP) ನಲ್ಲಿ ಪ್ರತಿ ಪ್ರಕರಣವನ್ನು ವರದಿ ಮಾಡಿ ಮತ್ತು ರೋಗಿಗಳು ಗುಣಮುಖರಾಗುವ ತನಕ ಅಂತಹ ಪ್ರಕರಣಗಳ ಅನುಸರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನಿವಾಸಿಗಳಲ್ಲಿ ಅತಿಸಾರ ಮತ್ತು ಕಾಲರಾ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಬೇಕು. ಇದರೊಂದಿಗೆ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳಲು ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಕರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಕಾಯಿಲೆಯ ಹರಡುವಿಕೆಯನ್ನು ತಪ್ಪಿಸಲು ದೊಡ್ಡ ಸಮಾರಂಭಗಳಲ್ಲಿ ಸರಬರಾಜು ಮಾಡುವ ಆಹಾರ ಮತ್ತು ನೀರಿನ ಮಾದರಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಎರಡು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು, ರಾಮನಗರದಲ್ಲಿ ಒಂದು ಸೇರಿ ಈವರೆಗೆ ರಾಜ್ಯದಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. 

Tags:    

Similar News