ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಅರ್ಜಿ ತಿರಸ್ಕೃತ: ಲಕ್ಷ್ಮೀ ಹೆಬ್ಬಾಳ್ಕರ್

Update: 2024-08-27 09:59 GMT

ʻಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆʼ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಈ ಹಿಂದೆಯೂ ನಾವು ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲ್ಲ ಎಂದು ಹೇಳಿದ್ದೇವೆ. ಆದರೆ ಜಿಎಸ್‌ಟಿ ಇದ್ದವರೂ ನಮ್ಮ ಪೋರ್ಟಲ್‌ಗೆ ಅರ್ಜಿ ಹಾಕಿದ್ದರು. ಅವುಗಳನ್ನು ತಿರಸ್ಕಾರ ಮಾಡಿದ್ದೇವೆʼʼ ಎಂದು ಹೇಳಿದರು.

ʻʻಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್‌ಟಿ ಇರುವ ಕಾರಣಕ್ಕೆ ತತಕ್ಷಣ ಅರ್ಜಿ ತಿರಸ್ಕಾರ ಮಾಡಿದ್ದೇವೆ. 1ಕೋಟಿ 23ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಕೊಡುವುದಾಗಿ ಹೇಳಿದ್ದೆವು, ಅದರಂತೆ ನಾವು ಹಣ ಕೊಡ್ತಾ ಇದ್ದೇವೆ. ಇಡೀ ರಾಜ್ಯದಲ್ಲಿ ಶ್ರೀಮಂತರು, ಜಿಎಸ್‌ಟಿ ಇದ್ದವರು ಸೇರಿ ಒಟ್ಟು 1ಕೋಟಿ 58ಲಕ್ಷ ಕುಟುಂಬಗಳಿವೆ. ಇಂದಿಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದುʼʼ ಎಂದು ತಿಳಿಸಿದರು.

ʻʻಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಜೂನ್ ತಿಂಗಳದ್ದು ಕೂಡ ಎಂಬತ್ತು ಸಾವಿರ ಜನರಿಗೆ ತಲುಪಿಲ್ಲ. ತಾಂತ್ರಿಕ ದೋಷವನ್ನು ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಸ್ಟ್‌ ತಿಂಗಳದ್ದು ಕೂಡ ಸಿಎಂ ಜೊತೆಗೆ ನಿನ್ನೆ ಚರ್ಚೆ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣ ಕೂಡ ಜಮಾ ಆಗಲಿದೆʼʼ ಎಂದು ಮಾಹಿತಿ ನೀಡಿದರು.

Tags:    

Similar News