ಕರ್ನಾಟಕದಲ್ಲಿ ʼಥಗ್ ಲೈಫ್ʼ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್; ಬೆದರಿಕೆಗೆ ಅವಕಾಶ ಇಲ್ಲ ಎಂದ ಸುಪ್ರೀಂಕೋರ್ಟ್
ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಜನರು ಘೆರಾವ್ ಹಾಕುತ್ತಾರೆ, ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತಾರೆ ಎಂಬ ಬೆದರಿಕೆಗಳಿಗೆ ಮಣಿದು ಚಿತ್ರ ಬಿಡುಗಡೆ ತಡೆಯಬಾರದು. ಯಾವುದೇ ಬೆದರಿಕೆಗಳಿಗೆ ಈ ನೆಲದ ಕಾನೂನನ್ನು ಒತ್ತೆ ಇಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಖಾರವಾಗಿ ಹೇಳಿದೆ.;

ಕರ್ನಾಟಕದಲ್ಲಿ ನಟ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಕರ್ನಾಟಕದಲ್ಲಿ ಥಗ್ಲೈಫ್ ಚಿತ್ರ ಬಿಡುಗಡೆಗೆ ಸರ್ಕಾರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದ್ದನ್ನು ಟೀಕಿಸಿರುವ ನ್ಯಾಯಮೂರ್ತಿಗಳಾದ ಮನಮೋಹನ್ ಹಾಗೂ ನ್ಯಾ. ಭುಯನ್ ನೇತೃತ್ವದ ಪೀಠ ಮಂಗಳವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಟನ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಜನರು ಬಂದು ಘೆರಾವ್ ಹಾಕುತ್ತಾರೆ, ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತಾರೆ ಎಂಬ ಬೆದರಿಕೆಗಳಿಗೆ ಮಣಿದು ಚಿತ್ರ ಬಿಡುಗಡೆ ತಡೆಯಬಾರದು. ಯಾವುದೇ ಬೆದರಿಕೆಗಳಿಗೆ ಈ ನೆಲದ ಕಾನೂನನ್ನು ಒತ್ತೆ ಇಡಲಾಗುವುದಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕು. ಏನು ಪ್ರದರ್ಶಿಸಬಾರದು ಎಂದು ನಿರ್ಧರಿಸಲು ಬೆದರಿಕೆಯೊಡ್ಡುವ ಗುಂಪುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
"ಯಾರಾದರೂ ಒಂದು ಹೇಳಿಕೆ ನೀಡಿದ್ದರೆ, ನೀವು ಅವರಿಗೆ ಮತ್ತೊಂದು ಹೇಳಿಕೆ ಮೂಲಕ ತಿರುಗೇಟು ನೀಡಬಹುದು. ಅದನ್ನು ಬಿಟ್ಟು ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದರೆ ನ್ಯಾಯಾಲಯ ಸಹಿಸುವುದಿಲ್ಲ " ಎಂದು ಎಚ್ಚರಿಕೆ ನೀಡಿದೆ. ಆ ಮೂಲಕ ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು
ಕರ್ನಾಟಕ ರಾಜ್ಯದ ಜನತೆ ಕಮಲ್ ಹಾಸನ್ ಅವರ ಹೇಳಿಕೆಗೆ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು, ಆದರೆ, ಇದರ ಜೊತೆಗೆ ಮೂಲಭೂತ ಹಕ್ಕಿನ ರಕ್ಷಣೆಯೂ ಆಗಬೇಕು. ಕರ್ನಾಟಕ ಮತ್ತು ಬೆಂಗಳೂರಿನ ಜನರು ಪ್ರಬುದ್ಧರು. ಕಮಲ್ ಹಾಸನ್ ಹೇಳಿಕೆ ತಪ್ಪು ಎಂದು ಅನಿಸಿದರೆ, ನೀವೂ ಕೂಡ ಅವರ ಹಾಗೆಯೇ ಹೇಳಿಕೆ ನೀಡಬಹುದು. ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದು ಏಕೆ ಎಂದು ಪ್ರಶ್ನಿಸಿದೆ.
ಕರ್ನಾಟಕ ಹೈಕೋರ್ಟ್ಗೆ ಚಿತ್ರ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯನ್ನು ತನಗೆ ( ಸುಪ್ರೀಂಕೋರ್ಟ್) ವರ್ಗಾಯಿಸಿ ರಾಜ್ಯ ಸರ್ಕಾರ ಸಮರ್ಪಕ ಉತ್ತರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೇ ಇದೇ ಪ್ರಕರಣದಲ್ಲಿ ಕಮಲ್ ಹಾಸನ್ ಕ್ಷಮೆಗೆ ಸಲಹೆ ನೀಡಿದ ಹೈಕೋರ್ಟ್ ಪಾತ್ರವನ್ನೂ ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಥಗ್ ಲೈಫ್ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅನುಮೋದಿಸಿದ ನಂತರ, ಬಿಡುಗಡೆ ಮಾಡಲು ಅನುಮತಿಸಬೇಕು. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯನ್ನು ತಡೆಯಬಾರದು. ಚಿತ್ರವನ್ನು ನೋಡುವುದು, ಬಿಡುವುದು ಜನರಿಗೆ ಬಿಟ್ಟ ವಿಚಾರ. ಆದರೆ, ಚಲನಚಿತ್ರ ಬಿಡುಗಡೆಯಾಗಬೇಕೇ, ಬೇಡವೇ ಎಂದು ನಿರ್ಧರಿಸುವ ಬೆದರಿಕೆಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಪೀಠವು ಮಿ.ನಾಥುರಾಮ್ ಬೋಲ್ಟಾಯ್ ನಾಟಕ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ಇಮ್ರಾನ್ ಪ್ರತಾಪ್ಗಢ ತೀರ್ಪುಗಳನ್ನು ಉಲ್ಲೇಖಿಸಿ ಈ ಆದೇಶ ನೀಡಿದೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ಕರ್ನಾಟಕದಲ್ಲಿ ಕನ್ನಡಪರ ಸಂಘಟಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರ್ಕಾರವು ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಗೆ ನಿಷೇಧ ಹೇರಿತ್ತು.