ಪ್ರತಿ ಕೆ.ಜಿ. ಮಾವಿಗೆ ನಾಲ್ಕು ರೂ. ನೀಡಲು ಸರ್ಕಾರ ನಿರ್ಧಾರ: ಸಚಿವ ಚಲುವರಾಯಸ್ವಾಮಿ

ನಾಲ್ಕು ಜಿಲ್ಲೆಗಳಲ್ಲಿ ಮ್ಯಾಂಗೋ ಬೋರ್ಡ್‌ನಿಂದ ಖರೀದಿ ಕಾರ್ಯ ನಡೆಯಲಿದ್ದು, ಒಬ್ಬ ರೈತ 100 ಕ್ವಿಂಟಲ್ ಮಾವು ಮಾರಬಹುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.;

Update: 2025-06-25 11:48 GMT

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ

ಈ ಬಾರಿ ಮಾವು ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ. 50 ಅನುಪಾತದಲ್ಲಿ ಪ್ರತಿ ಕೆ.ಜಿ. ಮಾವಿಗೆ ನಾಲ್ಕು ರೂಪಾಯಿ ಪ್ರೋತ್ಸಾಹಧನ ನೀಡಲು ನಿರ್ಧರಿಸಿವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬುಧವಾರ (ಜೂನ್ 25) ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಈ ನಿರ್ಧಾರದ ಪ್ರಕಾರ, ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಮ್ಯಾಂಗೋ ಬೋರ್ಡ್‌ನಿಂದ ಮಾವು ಖರೀದಿ ಕಾರ್ಯ ನಡೆಯಲಿದ್ದು, ಒಬ್ಬ ರೈತ ಗರಿಷ್ಠ 100 ಕ್ವಿಂಟಲ್ ಮಾವನ್ನು ಮಾರಾಟ ಮಾಡಬಹುದು ಎಂದು ಸಚಿವರು ಮಾಹಿತಿ ನೀಡಿದರು.

ಜೂನ್ 21ರಂದೇ ಬೆಂಬಲ ಬೆಲೆಯ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಮಾವಿಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಈ ರೀತಿಯ ಸಮಸ್ಯೆ ಮೊದಲ ಬಾರಿಗೆ ಎದುರಾಗಿದ್ದು, ಕೇಂದ್ರ ಸಚಿವರೊಂದಿಗೆ ಜೂನ್ 21ರಂದು ನಡೆಸಿದ ಸಭೆಯಲ್ಲಿಯೇ ಬೆಂಬಲ ಬೆಲೆ ನಿರ್ಧಾರವಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 23ರಂದು ಮಾವಿಗೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದನ್ನು ಉಲ್ಲೇಖಿಸಿದ ಚಲುವರಾಯಸ್ವಾಮಿ, ಅದಕ್ಕೂ ಮೊದಲೇ ತಾವು ಸಭೆ ನಡೆಸಿದ್ದೆವು ಎಂದು ಸ್ಪಷ್ಟಪಡಿಸಿದರು. "ಮುಂದೆಯೂ ಇದೇ ರೀತಿ ಹೆಚ್‌ಡಿಕೆ ಹಾಗೂ ಸಚಿವ ಪ್ರಲ್ಹಾದ್‌ ಜೋಷಿ ಅವರು ರಾಜ್ಯದ ಯೋಜನೆಗಳಿಗೆ ಒಟ್ಟಾಗಿ ಕೆಲಸ ಮಾಡಲಿ" ಎಂದು ವ್ಯಂಗ್ಯವಾಗಿ ನುಡಿದರು.

ಈ ಸಂದರ್ಭದಲ್ಲಿ ರಾಜಕೀಯ ವಾಗ್ದಾಳಿ ನಡೆಸಿದ ಸಚಿವ ಚಲುವರಾಯಸ್ವಾಮಿ, ಹೆಚ್.ಡಿ. ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು. "ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಸಚಿವ ಹೆಚ್‌ಡಿಕೆ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ರಾಜ್ಯದ ಪಾಲಿನ ತೆರಿಗೆ ಹಣವನ್ನು ಕೂಡಾ ಕೇಂದ್ರದಿಂದ ಕೊಡಿಸಲಿ," ಎಂದು ಅವರು ಸವಾಲು ಹಾಕಿದರು. ಮಾವಿನ ಬೆಲೆ ಕುಸಿತವಾಗಿದ್ದರಿಂದ ರಾಜ್ಯದಾದ್ಯಂತ ಮಾವು ಬೆಳೆಗಾರರು ತೀವ್ರ ಆಕ್ರೋಶಗೊಂಡಿದ್ದರು. ಕೋಲಾರದಲ್ಲಿ ರೈತರು ರಸ್ತೆಗೆ ಮಾವಿನ ಹಣ್ಣುಗಳನ್ನು ಸುರಿದು, ಶ್ರೀನಿವಾಸಪುರದಲ್ಲಿ ಬಂದ್ ಆಚರಿಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದ್ದರು. ಕೋಲಾರದ ಜೆಡಿಎಸ್ ಶಾಸಕರು ಸಹ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರ ಶೀಘ್ರವೇ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದ್ದರು. ರೈತರ ನಿರಂತರ ಒತ್ತಾಯ ಮತ್ತು ಹೋರಾಟದ ನಂತರ ಸರ್ಕಾರ ಬೆಂಬಲ ಬೆಲೆ ಘೋಷಿಸಲು ಮುಂದಾಗಿದೆ. 

Tags:    

Similar News