ರಾಜ್ಯ ಸರ್ಕಾರದಿಂದ ವಿಶ್ವವಿದ್ಯಾಲಯ ಮುಚ್ಚುವ ಭಾಗ್ಯ; ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
ಮಾರಿ ಕಣ್ಣು ಹೋರಿ ಮೇಲೆ ಎಂಬಂತೆ, ಸಿಎಂ ಸಿದ್ದರಾಮಯ್ಯ ಅವರ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದಾರೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ನಿಲ್ಲಿಸಿದೆ. ಮಾರಿ ಕಣ್ಣು ಹೋರಿ ಮೇಲೆ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೇರೆ ರಾಜ್ಯ, ದೇಶದ ವಿದ್ಯಾರ್ಥಿಗಳು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಮಂಡ್ಯದ ವಿಶ್ವವಿದ್ಯಾಲಯ ಮುಚ್ಚಿ, ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲು ಸರ್ಕಾರ ಹೊರಟಿದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಡ್ಯದಲ್ಲೇ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಈಗಾಗಲೇ ರಾಜ್ಯದ ವಿವಿಗಳಲ್ಲಿ ಉಪನ್ಯಾಸಕರನ್ನು ನೇಮಕ ಮಾಡಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ನೀಡುತ್ತಿಲ್ಲ. ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ಥಿಗೆ ಹಣವಿಲ್ಲ, ಪಠ್ಯಪುಸ್ತಕ-ಸಮವಸ್ತ್ರ ನೀಡಲು ಕಾಸಿಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ. 4 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸುವಾಗ ಅದರಲ್ಲಿ 342 ಕೋಟಿ ರೂ. ಕೊಟ್ಟರೆ ಸಾಕು. ಇಷ್ಟು ಹಣ ಕೊಡಲಾಗದೇ ಇದ್ದಲ್ಲಿ ಬಜೆಟ್ ಏಕೆ ಮಂಡಿಸಬೇಕು ಎಂದು ಕಿಡಿಕಾರಿದ್ದಾರೆ.
ಉದಯಗಿರಿ ಘಟನೆ ಪೂರ್ವ ನಿಯೋಜಿತ
ಮೈಸೂರಿನಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯ. ಮೂಟೆಗಳಲ್ಲಿ ಕಲ್ಲುಗಳನ್ನು ತಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇಷ್ಟೊಂದು ಮೂಟೆಗಳನ್ನು ತರಲು ಸಾಕಷ್ಟು ಸಮಯ ಬೇಕು. ಆದರೆ, ಸಚಿವ ರಾಜಣ್ಣ ಅವರು ಪೊಲೀಸರನ್ನು ನಿಂದಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಪೊಲೀಸರನ್ನು ಶ್ಲಾಘಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಿರ್ಲಿಪ್ತ ಮನಸ್ಥಿತಿ ಹೊಂದಿದ್ದಾರೆ ಎಂದು ದೂರಿದ್ದಾರೆ.
ಹುಬ್ಬಳ್ಳಿಯಲ್ಲಾದ ಗಲಭೆಯ ಪ್ರಕರಣವನ್ನು ಕೈ ಬಿಡಲಾಗಿದೆ. ಭಗವಾನ್ ಎಂಬ ಚಿಂತಕ ಶ್ರೀರಾಮನ ಬಗ್ಗೆ ಹೀನಾಯವಾಗಿ ಮಾತನಾಡಿದರೂ ಹಿಂದೂಗಳು ಎಂದೂ ಕಲ್ಲು ಹೊಡೆದಿಲ್ಲ. ಕಾನೂನು ಕಾಪಾಡಬೇಕಾದ ಪೊಲೀಸರ ಕೈಯನ್ನು ಸರ್ಕಾರವೇ ಕಟ್ಟಿ ಹಾಕಿದೆ. ಪೊಲೀಸರನ್ನೇ ತಪ್ಪಿತಸ್ಥರನ್ನಾಗಿ ಮಾಡಿದ್ದು, ಅವರ ಆತ್ಮಸ್ಥೈರ್ಯ ಕುಗ್ಗಿಸಲಾಗಿದೆ ಎಂದು ಟೀಕಿಸಿದ್ದಾರೆ.
ಘಟನೆಗೂ ಆರ್ಎಸ್ಎಸ್ಗೂ ಏನು ಸಂಬಂಧ?
ಸಿಸಿಟಿವಿ ಕ್ಯಾಮೆರಾ ನೋಡಿ ಆರ್ಎಸ್ಎಸ್ ನ ಯಾವ ಸ್ವಯಂಸೇವಕರು ಬಂದಿದ್ದಾರೆ ಎಂದು ತಿಳಿಸಲಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಪ್ರಚೋದನೆಯಿಂದಲೇ ಇಂತಹ ಘಟನೆಗಳು ನಡೆಯಲಿವೆ ಎಂದು ಅಶೋಕ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 80 ಕೋಟಿ ಜನರಿಗೆ ನೀಡುತ್ತಿರುವ ಆಹಾರ ಯೋಜನೆಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಟೀಕಿಸಿದ್ದಾರೆ. ಉಚಿತವಾಗಿ ಅಕ್ಕಿ ನೀಡಬಾರದು ಎನ್ನುತ್ತಾರೆ. ಇದೇ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಉಚಿತ ಗ್ಯಾರಂಟಿಗಳನ್ನು ನೀಡಿದ್ದಾರೆ. ಅಂದರೆ ಕಾಂಗ್ರೆಸ್ನದ್ದು ಕೇಂದ್ರದಲ್ಲಿ ಒಂದು, ರಾಜ್ಯದಲ್ಲಿ ಒಂದು ನಿಲುವು. ಮತ ಬೇಕಾದಾಗ ಉಚಿತಗಳು ಬೇಕು, ಚುನಾವಣೆ ಮುಗಿದ ನಂತರ ಉಚಿತಗಳು ಬೇಡ ಎನ್ನುತ್ತಾರೆ. ಇದು ಇವರ ದ್ವಿಮುಖ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ, ಕೊಪ್ಪಳ, ಮಂಡ್ಯ ಸೇರಿದಂತೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳನ್ನು ಮುಂದೆ ತರಲು ವಿವಿಗಳನ್ನು ಸ್ಥಾಪಿಸಲಾಗಿದೆ. ಈಗ ಈ ಜಿಲ್ಲೆಗಳ ಬಡವರು ಮಕ್ಕಳನ್ನು ಎಲ್ಲಿಗೆ ಕಳುಹಿಸಬೇಕು? ಈಗಾಗಲೇ ಮೈಕ್ರೋ ಫೈನಾನ್ಸ್ ಸಾಲ ಮಾಡಿ ಜನರು ಬಳಲಿದ್ದಾರೆ. ಈಗ ಶಿಕ್ಷಣಕ್ಕಾಗಿ ಸಾಲ ಮಾಡಿ ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕಿದೆ. ಇನ್ನು ಆಯಾ ಜಿಲ್ಲೆಗಳ ಜನರು ರೊಚ್ಚಿಗೆದ್ದು ಸರ್ಕಾರದ ವಿರುದ್ಧ ಪ್ರತಿಭಟಿಸಲಿದ್ದಾರೆ ಎಂದಿದ್ದಾರೆ.
ಹೊಸ ಹುದ್ದೆ ಸೃಷ್ಟಿಸಿಲ್ಲ
ಮಾಜಿ ಸಚಿವ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, 8 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರ ನಿರ್ಧಾರದಿಂದ ಪ್ರಗತಿಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್ನಿಂದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಈ ತೀರ್ಮಾನದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ವಿವಿಗಳನ್ನು ಮುಚ್ಚಲಾಗುತ್ತಿದೆ. ಯುವಜನರಿಗೆ ಸಮಾನ ಅವಕಾಶ ದೊರೆಯಲು ಗುಣಮಟ್ಟದ ಶಿಕ್ಷಣ ನೀಡಬೇಕು. ಜಿಲ್ಲೆಗಳು ರೂಪುಗೊಂಡು ಹಲವಾರು ವರ್ಷಗಳಾದರೂ ಅಲ್ಲಿ ಪ್ರತ್ಯೇಕ ವಿವಿಗಳಿಲ್ಲ. ಹಣ ಇಲ್ಲ ಎಂಬ ನೆಪವೊಡ್ಡಿ ವಿವಿಗಳನ್ನು ಮುಚ್ಚಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ವಿವಿಗಳನ್ನು ರೂಪಿಸುವಾಗ, ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ. ಇರುವ ಹುದ್ದೆಗಳನ್ನೇ ವರ್ಗಾಯಿಸಲಾಗಿದೆ ಎಂದು ವಿವರಿಸಿದ್ದಾರೆ.
2021 ರ ಪ್ರಕಾರ, ಕಾಲೇಜುಗಳ ಪ್ರವೇಶಾತಿ ಪ್ರಮಾಣ ಸರಾಸರಿ ಶೇ.33 ಇದೆ. ಚಾಮರಾಜನಗರದಲ್ಲಿ ಶೇ.10, ಮಂಡ್ಯದಲ್ಲಿ ಶೇ.15, ಬಾಗಲಕೋಟೆಯಲ್ಲಿ ಶೇ.16 ಇದೆ. ಇಂತಹ ಸ್ಥಿತಿಯಲ್ಲಿ ಯುವಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ. ವಿವಿಗಳಿಂದ ಆದಾಯ ಬರಲು ಇದು ಅಂಗಡಿಗಳಲ್ಲ. ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಕ್ರಮ ಕೈಗೊಳ್ಳುವ ಮುನ್ನ ಸರ್ಕಾರ ಯಾವುದೇ ಪರಿಶೀಲನೆ ಮಾಡಿ ವರದಿ ರೂಪಿಸಿಲ್ಲ. ಬಿಜೆಪಿ ಅವಧಿಯಲ್ಲಿ ರೂಸಾ ಯೋಜನೆಯಡಿ ಅನುದಾನ ಪಡೆದು ಮಹಾರಾಣಿ ಕ್ಲಸ್ಟರ್, ಮಂಡ್ಯ ವಿವಿ ರೂಪಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ.
ರಿಯಲ್ ಎಸ್ಟೇಟ್ ಸರ್ಕಾರ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲು ಒತ್ತು ನೀಡಿದ್ದು ಶಿಕ್ಷಣಕ್ಕೆ. ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡುವ ಮೊದಲು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸರ್ಕಾರಕ್ಕೆ 350 ಕೋಟಿ ರೂ. ಅನುದಾನ ನೀಡಲು ಆಗಲ್ಲ. ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣಕ್ಕಿಂತ ರಿಯಲ್ ಎಸ್ಟೇಟ್ ಮುಖ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ನೀಡಿದರೆ, ಅದನ್ನು ಕೂಡ ಸರ್ಕಾರ ಮುಚ್ಚುತ್ತಿದೆ. ಕೇಂದ್ರ ಸರ್ಕಾರದಿಂದ 40 ಸಾವಿರ ಕಿ.ಮೀ. ರೈಲ್ವೆ ಮಾರ್ಗ ಹೆಚ್ಚಾಗಿದೆ. ರೈಲುಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ಬಿಜೆಪಿಯಿಂದ ಹತ್ತು ವಿವಿಗಳನ್ನು ರೂಪಿಸಿದಾಗ, ಇನ್ನಷ್ಟು ಹೆಚ್ಚು ವಿವಿಗಳನ್ನು ಮಾಡುತ್ತೇವೆಂದು ಕಾಂಗ್ರೆಸ್ ಹೇಳಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಕಟ್ಟಿದ ಮನೆಯನ್ನು ಒಡೆದು ಹಾಕಲು ಕಾಂಗ್ರೆಸ್ ಮುಂದಾಗಿದೆ. ಶಿಕ್ಷಣ ಹಾಗೂ ಆರೋಗ್ಯ ವಲಯದಲ್ಲಿ ಆದಾಯವನ್ನು ನೋಡಬಾರದು ಎಂದು ಹೇಳಿದ್ದಾರೆ.