Channarayapattana Farmers Protest| ಭೂಸ್ವಾಧೀನ; ರೈತರ ಮನವೊಲಿಕೆಗೆ ಸಿಎಂ ಕಸರತ್ತು
ಭೂ ಸ್ವಾಧೀನದ ವಿರುದ್ಧದ ನಿರ್ಣಾಯಕ ಪ್ರತಿಭಟನೆ ಮಾಡಲು ಸಂಜೆ ಐದು ಗಂಟೆ ನಂತರ ಪೊಲೀಸರು ಅವಕಾಶ ನೀಡದೆ ಹೋರಾಟಗಾರರನ್ನು ಬಂಧಿಸಿದ್ದು ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಹಿರಿಯ ಸಾಹಿತಿಗಳು ತಿಳಿಸಿದ್ದಾರೆ.;
ಜುಲೈ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತ ಹೋರಾಟಗಾರರು ಮತ್ತು ಸಂಯುಕ್ತ ಹೋರಾಟ ವೇದಿಕೆ ಮುಖಂಡರ ಜೊತೆ ಸಂಧಾನ ಸಭೆ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸ ಕಾವೇರಿಯಲ್ಲಿ ಗುರುವಾರ ಚನ್ನರಾಯಪಟ್ಟಣ ರೈತ ಮುಖಂಡರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜುಲೈ 4ರ ಬೆಳಿಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಭೆ ನಡೆಸಿ, ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರೈತರ ನಿರ್ಣಾಯಕ ಪ್ರತಿಭಟನೆ
ಭೂಸ್ವಾಧೀನದ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಬುಧವಾರ ನಿರ್ಣಾಯಕ ಪ್ರತಿಭಟನೆ ನಡೆಯಿತು. ಈ ವೇಳೆ ಹೋರಾಟಗಾರರು, ಹಿರಿಯ ಸಾಹಿತಿಗಳನ್ನು ಪೊಲೀಸರು ಬಂಧಿಸಿದರು. ಪೊಲೀಸರ ಈ ಕ್ರಮಕ್ಕೆ 'ಜಾಗೃತ ನಾಗರಿಕರು- ಕರ್ನಾಟಕ' ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ದೇವನಹಳ್ಳಿ ಪಟ್ಟಣದಲ್ಲಿ ಅಹೋರಾತ್ರಿ ಧರಣಿಗೆ ಮುಂದಾದ ರೈತರಿಗೆ ಪೊಲೀಸರು ಅನುಮತಿ ನೀಡಲಿಲ್ಲ. ಆದಾಗ್ಯೂ, ಪ್ರತಿಭಟನೆಗೆ ಮುಂದಾದ ಸಾಹಿತಿಗಳು ಹಾಗೂ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ ಎಂದು ಹಿರಿಯ ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಜಿ.ರಾಮಕೃಷ್ಣ, ವಿಜಯಾ, ವಿಮಲಾ.ಕೆ.ಎಸ್., ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ವಸುಂಧರಾ ಭೂಪತಿ, ಎನ್.ಗಾಯತ್ರಿ, ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ ಹಾಗೂ ಹೋರಾಟಗಾರ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1,181 ದಿನಗಳಿಂದ ಹೋರಾಟ
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,177 ಎಕರೆ ಜಮೀನು ಉಳಿಸಿಕೊಳ್ಳಲು 1,181 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದರು. ಈ ಹೋರಾಟ ಬೆಂಬಲಿಸಿ ಬುಧವಾರ(ಜೂ.25) ರಾಜ್ಯದ ವಿವಿಧೆಡೆಯ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸರ್ಕಾರ ಭೂ ಸ್ವಾಧೀನ ಕೈ ಬಿಡುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಿದ್ದರು. ಆದರೆ, ಪೊಲೀಸರು ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಅವಕಾಶವಿದೆ. ದೇವನಹಳ್ಳಿಯಲ್ಲಿ ಇಲ್ಲ ಎಂದು ತಿಳಿಸಿದರು. ಈ ಹೇಳಿಕೆ ವಿರೋಧಿಸಿದ್ದಕ್ಕಾಗಿ ಪ್ರತಿಭಟನಕಾರರನ್ನು ಬಂಧಿಸಲಾಗಿದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಪಿಎಂ ಖಂಡನೆ
ಭೂ ಸ್ವಾಧೀನ ವಿರೋಧಿ ಹೋರಾಟಗಾರರನ್ನು ಬಂಧಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಖಂಡಿಸಿದೆ. ಗುರುವಾರ ಜೂನ್ 26ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತ ವಿರೋಧಿ, ಸಂವಿಧಾನದ ಹಕ್ಕುಗಳ ವಿರೋಧಿ, ರೈತರಿಗೆ ಅನ್ಯಾಯ ಮಾಡುವ ಭೂಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಸಿಪಿಎಂ ಒತ್ತಾಯಿಸಿದೆ.
ರೈತರು ಹಾಗೂ ಹೋರಾಟಗಾರರ ಜತೆ ಅಮಾನುಷವಾಗಿ ವರ್ತಿಸಿದ ಡಿಎಸ್ಪಿ ಸಜಿತ್ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಕೈ ಬಿಡಬೇಕು. ಈ ಕುರಿತು ಸಿಎಂ ಪ್ರತಿಕ್ರಿಯೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.