ಮೂರು ವರ್ಷಗಳಲ್ಲಿ 247 ಪ್ರಕರಣ| ಸುಳ್ಸುದ್ದಿಕೋರರಿಗೆ ಫೇಕ್ ನ್ಯೂಸ್ ಕಾಯಿದೆಯ ಮೂಗುದಾರ
2021 ರಿಂದ 2024 ವರೆಗೆ ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಬಗ್ಗೆ ಒಟ್ಟು 247 ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಾಗುತ್ತಿದೆ.;
ರಾಜ್ಯದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿರುವವರ ಮೇಲೆ ನಿಗಾ ಇಡುವುದೇ ಬಹುದೊಡ್ಡ ಸವಾಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜಕಾರಣಿಗಳು, ನಟ-ನಟಿಯರ ವಿರುದ್ಧ ಸೇರಿದಂತೆ ಹಲವರ ವಿರುದ್ಧ ಸುಳ್ಳುಸುದ್ದಿಗಳನ್ನು ಹರಡಿಸಲಾಗುತ್ತದೆ. ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲೋ ಅಥವಾ ವೈಯಕ್ತಿಕ ದ್ವೇಷದಿಂದಲೋ ಸುಳ್ಳು ಸುದ್ದಿ ಹರಡಿಸಲಾಗುತ್ತದೆ.
ಇತ್ತೀಚೆಗಿನ ದಿನದಲ್ಲಿ ಇದು ಹೆಚ್ಚಾಗಿ ಹರಡುತ್ತಿದೆ. ಸರ್ಕಾರದ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯಂತೂ ವ್ಯಾಪಕ ಹಬ್ಬುತ್ತಿದೆ. ಇದಕ್ಕೆ ನಿಯಂತ್ರಣ ತರಲು ಹಲವು ರೀತಿಯ ಚಿಂತನೆಗಳು ನಡೆಯುತ್ತಲೇ ಇದ್ದವು. ಇದೀಗ ಸರ್ಕಾರ ಕಾನೂನು ಜಾರಿಗೊಳಲು ಮುಂದಾಗಿದೆ. ʼಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ವಿಧೇಯಕʼ ಅನುಷ್ಠಾನಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ವಿಧೇಯಕದ ಬಗ್ಗೆ ಪ್ರಸ್ತಾಪವಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಸಾಮಾಜಿಕ ಜಾಲತಾಣದಲ್ಲಿಸರ್ಕಾರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ತಲೆದೋರುವ ಘಟನೆಗಳು ನಡೆದಿವೆ. ಈ ಕಾರಣಕ್ಕಾಗಿ ಸರ್ಕಾರವು ಮುಂದಿನ ದಿನದಲ್ಲಿ ಇಂತಹ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಲು ವಿಧೇಯಕ ಜಾರಿಗೆ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಗಳ ಕುರಿತು ಪ್ರಸ್ತಾಪವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ವಿಧೇಯಕದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಸಾಬೀತಾದರೆ ಮೂರು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ದಂಡ ವಿಧಿಸುವ ಅಂಶವನ್ನು ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರವು ಕಾನೂನು ತಜ್ಞರು ಸೇರಿದಂತೆ ಇತರೆ ಕ್ಷೇತ್ರಗಳ ತಜ್ಞರ ಜತೆ ಸಮಾಲೋಚನೆ ನಡೆಸಿ ಅಂತಿಮ ರೂಪುರೇಷೆ ರೂಪಿಸಲು ಮುಂದಾಗಿದೆ. ಈಗಾಗಲೇ ಚರ್ಚೆಗಳು ಒಂದು ಹಂತಕ್ಕೆ ಬಂದಿವೆ. ಸಾಧಕ-ಬಾಧಕಗಳ ಸಮಾಲೋಚನೆ ನಡೆಸಿದ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ನಿರ್ದಿಷ್ಟವಾದ ಕಾಯ್ದೆ ಇರಲಿಲ್ಲ
ಸುಳ್ಳು ಸುದ್ದಿ ಹರಡುವಿಕೆಯ ವಿರುದ್ಧ ಯಾವುದೇ ನಿರ್ದಿಷ್ಟ ಕಾಯ್ದೆ ಇರಲಿಲ್ಲ. ಆದರೆ, ಸುಳ್ಳು ಸುದ್ದಿ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ಕೆಲವು ಕಾನೂನುಗಳನ್ನು ಬಳಕೆ ಮಾಡಲಾಗುತ್ತಿತ್ತು. ಐಟಿ ಕಾಯ್ದೆಯಡಿಯಲ್ಲಿ ಸುಳ್ಳು ಸುದ್ದಿ ಹರಡುವಿಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ಪ್ರತ್ಯೇಕ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ. ಇದಲ್ಲದೇ, ವಿಪತ್ತು ನಿರ್ವಹಣೆ ಕಾಯ್ದೆ- 2005 ಮತ್ತು ಐಪಿಸಿ ಸೆಕ್ಷನ್ ೧೫೩, 153 (ಎ) ಗಳನ್ನು ಕೆಲವು ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ದಂಡ ವಿಧಿಸಲು ಬಳಸಲಾಗುತ್ತಿತ್ತು ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
2021-2024 ಅವಧಿಯಲ್ಲಿ 247 ಪ್ರಕರಣ ದಾಖಲು
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಸುಳ್ಳು ಸುದ್ದಿ ಪ್ರಕರಣ ದಾಖಲಾಗಿದೆ.
ಸರ್ಕಾರವು ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಕ್ರಮ ಕೈಗೊಂಡಿದೆ. ಈ ಮೊದಲು ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಘಟಕಗಳನ್ನು ಆರಂಭಿಸಿತ್ತು. ಈ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿತ್ತು. ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧಿಕಾರಿಗಳು ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ನಿಗಾ ವಹಿಸಿ, ಮಾಹಿತಿ ಸಂಗ್ರಹ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿತ್ತು. ಎಲ್ಲಾ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ನಿಗಾವಣೆ ಘಟನೆ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಸುಳ್ಳು ಸುದ್ದಿ ಹರಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ ಚಾನೆಲ್ಗಳಲ್ಲಿ ಹರಿದಾಡುತ್ತಿರುವ ಪ್ರಚೋದನಾಕಾರಿ ಸುಳ್ಳು ಸುದ್ದಿಗಳು, ಸಂದೇಶಗಳ ಮೇಲೆ ನಿಗಾ ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣ ಘಟಕದ ಮೂಲಕ ಕೆಲವು ನಕಲಿ ಖಾತೆಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ ಪ್ರಚಾರ ಮಾಡುವ ಖಾತೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಇದೇ ಅಂಶಗಳನ್ನು ವಿಧೇಯಕದಲ್ಲಿಯೂ ಸೇರಿಸುವ ನಿರೀಕ್ಷೆ ಇದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಸುಳ್ಳು ಸುದ್ದಿ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳು
ಸುಳ್ಳು ಸುದ್ದಿ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು, ಇವು ಸಂಜ್ಞೇಯ ಮತ್ತು ಜಾಮೀನು ರಹಿತವಾಗಿರುತ್ತವೆ. ಪ್ರತಿ ವಿಶೇಷ ನ್ಯಾಯಾಲಯಕ್ಕೆ ಮತ್ತು ಹೈಕೋರ್ಟ್ನ ಪೀಠಗಳಲ್ಲಿ ಒಬ್ಬ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಲು ಕಾನೂನು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ವಿಶೇಷ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಮಧ್ಯವರ್ತಿಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ (ಪ್ರಕಾಶಕರು ಮತ್ತು ಪ್ರಸಾರಕರು) 'ತಿದ್ದುಪಡಿ' ಮತ್ತು 'ನಿಷ್ಕ್ರಿಯಗೊಳಿಸುವ' ಬಗ್ಗೆ ನಿರ್ದೇಶಿಸುವ ಅಧಿಕಾರವನ್ನೂ ಹೊಂದಿರುತ್ತವೆ.
ಮಾನಹಾನಿಕರ ಸುದ್ದಿಗಳಿಗೂ ನಿರ್ಬಂಧ
ಪ್ರಾಸ್ತಾವಿತ ವಿಧೇಯಕದ ಮೂಲಕ ಸ್ತ್ರೀ ವಿರೋಧಿ ನಿಂದನೆಗಳು, ಅಶ್ಲೀಲ ವಿಷಯಗಳು ಹಾಗೂ ಇತರ ಸುಳ್ಳು ಸುದ್ದಿ ಮೂಲಕ ಮಾನಹಾನಿ ಮಾಡುವಂತಹ ಪ್ರಕಟಣೆಗಳನ್ನು ನಿಷೇಧಿಸಲು ಅವಕಾಶವಿದೆ. ಜತೆಗೆ, ಧಾರ್ಮಿಕ ಸಂಕೇತಗಳು, ನಂಬಿಕೆಗಳಿಗೆ ಅವಮಾನ ಮಾಡುವ ವಿಷಯಗಳನ್ನು ಪ್ರಕಟಿಸುವುದು ಹಾಗೂ ಅವೈಜ್ಞಾನಿಕ ಮಾಹಿತಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲೂ ಅವಕಾಶವಿದೆ ಎಂದು ಕಾನೂನು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಆದರೆ, ಇತಿಹಾಸ, ಧರ್ಮ, ಸಾಹಿತ್ಯ, ವಿಜ್ಞಾನ ಮತ್ತಿತರ ವಿಷಯಗಳ ಅಧಿಕೃತ ಅಧ್ಯಯನ ಅಥವಾ ಸಂಶೋಧನೆಯನ್ನು ಆದರಿಸಿದ ಮಾಹಿತಿಯನ್ನು ಪ್ರಕಟಿಸುವುದಕ್ಕೆ ಖಂಡಿತಾ ಅವಕಾಶವಿದೆ. ಅಂತಹ ವಿಷಯಗಳ ಬಗ್ಗೆ ಸುಳ್ಳು ಅಥವಾ ಅಪಾರ್ಥ ಕಲ್ಪಿಸುವ ಮಾಹಿತಿಯನ್ನು ಪ್ರಕಟಿಸಲು ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗುವುದಿಲ್ಲ," ಎಂದೂ ಆವರು ಹೇಳಿದ್ದಾರೆ.
ಕಾಯ್ದೆಯಲ್ಲಿ ಯಾವ ಅಂಶಗಳಿವೆ? ಹೆಚ್ಚು ಅಪರಾಧ ಸೆಕ್ಷನ್ಗಳ ಸೇರ್ಪಡೆ?
ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ಹೊಸ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ಕುರಿತು ದ ಫೆಡರಲ್ ಕರ್ನಾಟಕ ಜೊತೆ ಮಾತನಾಡಿದ ಹೈಕೋರ್ಟ್ ವಕೀಲರಾದ ಸ್ವಾಮಿನಿ ಗಣೇಶ್, ಇಂತಹದೊಂದು ಕಾನೂನು ಜಾರಿಗೊಳಿಸುವುದು ಉತ್ತಮ. ಇದು ಕೇವಲ ರಾಜಕಾರಣಿಗಳಾಗಲಿ, ಗಣ್ಯ ವ್ಯಕ್ತಿಗಳಿಗಾಗಲಿ ಮಾತ್ರವಲ್ಲದೇ ಜನಸಾಮಾನ್ಯರಿಗೂ ಅನುಕೂಲವಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ಜನರ ಬಗ್ಗೆಯೂ ಅವಹೇಳನಕಾರಿ ಮಾಡಿ ನಿಂದಿಸಲಾಗುತ್ತದೆ. ಆಗ ಈ ಕಾಯ್ದೆ ಬಳಕೆ ಮಾಡಬಹುದು. ಈಗಾಗಲೇ ಐಟಿ ಕಾಯ್ದೆ ಇದ್ದರೂ ಹೊಸ ಕಾನೂನು ಸಾಮಾನ್ಯ ಜನರಿಗೆ ಬಲ ತರಲಿದೆ. ಆದರೆ ಕಾಯ್ದೆಯಲ್ಲಿ ಯಾವ ರೀತಿಯ ಅಂಶಗಳನ್ನು ತರಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ ಎಂದು ಹೇಳಿದರು.
ಸುಳ್ಳು ಸುದ್ದಿ ಹರಡುವಿಕೆಯು ಸಮಾಜದ ಮೇಲೆ ಹಲವಾರು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡುತ್ತದೆ. ಸಮಾಜದಲ್ಲಿ ಸಾಮರಸ್ಯವನ್ನು ಕದಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಲಭೆಗಳಿಗೆ ಕಾರಣವಾಗಬಹುದು. ಸುಳ್ಳು ಸುದ್ದಿಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಸಹ ಮುಖ್ಯವಾಗಿದೆ ಎಂದರು.
'ಕ್ಲೂ4 ಎವಿಡೆನ್ಸ್' ನಿರ್ದೇಶಕ ಬಿ.ಎನ್.ಫಣೀಂದ್ರ ಮಾತನಾಡಿ, ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಈಗಾಗಲೇ ಐಟಿ ಕಾಯ್ದೆಯಲ್ಲಿದೆ. ಈಗ ಸರ್ಕಾರ ಪ್ರತ್ಯೇಕವಾಗಿ ಕಾಯ್ದೆ ತರಲು ಮುಂದಾಗಿದೆ. ಆದರೆ, ಕಾಯ್ದೆಯಲ್ಲಿ ಯಾವ ಅಂಶಗಳನ್ನು ಅಡಕ ಮಾಡಲಾಗುತ್ತದೆ ಎಂಬುದರ ವಿವರಣೆ ಯಾರಿಗೂ ಗೊತ್ತಿಲ್ಲ. ಕಾಯ್ದೆಯ ಕರಡು ಲಭ್ಯವಾದ ಬಳಿಕವೇ ಸಂಪೂರ್ಣವಾದ ಚಿತ್ರಣ ಹೊರಬೀಳಲಿದೆ. ಆದರೆ, ಕಾಯ್ದೆ ಜಾರಿಯಾದ ಬಳಿಕ ಕೆಲವೊಂದು ಸೆಕ್ಷನ್ಗಳು ಹೊಸದಾಗಿ ಸೇರ್ಪಡೆಯಾಗಲಿದೆ ಎಂದು ಮಾಹಿತಿ ನೀಡಿದರು.