Elephant Attack | ಮಹಿಳೆಯನ್ನು ಕೊಂದ ಒಂಟಿ ಸಲಗ ಸೆರೆ ಹಿಡಿದ ಅರಣ್ಯ ಇಲಾಖೆ

ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಒಂಟಿಸಲಗವನ್ನು ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಎಸ್ಟೇಟ್​​ನಲ್ಲಿ ಸೆರೆ ಹಿಡಿಯಲಾಗಿದೆ. ಕ್ಯಾಪ್ಟನ್‌ ಪ್ರಶಾಂತ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅರವಳಿಕೆ ಮದ್ದು ನೀಡಿ ಕಾಡಾನೆ ಸೆರೆ ಹಿಡಿಯಲಾಗಿದೆ.;

Update: 2025-03-16 11:48 GMT

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆಯ ಸಾವಿಗೆ ಕಾರಣವಾದ ಹಾಗೂ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ಒಂದು ಪುಂಡಾನೆಯನ್ನು ಸೆರೆ ಹಿಡಿದಿದೆ. 

ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಒಂಟಿಸಲಗವನ್ನು ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಎಸ್ಟೇಟ್​​ನಲ್ಲಿ ಸೆರೆ ಹಿಡಿಯಲಾಗಿದೆ. ಕ್ಯಾಪ್ಟನ್‌ ಪ್ರಶಾಂತ್‌ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆಸಿದ್ದು, ಅರವಳಿಕೆ ಮದ್ದು ನೀಡಿ ಕಾಡಾನೆ ಸೆರೆ ಹಿಡಿಯಲಾಗಿದೆ.  

ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ಬಿಕ್ಕೋಡು, ಅರೆಹಳ್ಳಿ, ಕೋಗೋಡು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೂರು ಪುಂಡಾನೆಗಳನ್ನು ಅರಣ್ಯ ಇಲಾಖೆ ಗುರುತಿಸಿತ್ತು. ಕಾಡಾನೆಗಳನ್ನು ತಕ್ಷಣನ ಸೆರೆ ಹಿಡಿಯುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ಮೇರೆಗೆ ಭಾನುವಾರ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಯಿತು.

ಬೇಲೂರು ತಾಲ್ಲೂಕಿನ ಕೋಗೋಡಿನ ಕಾಫಿ ತೋಟದಲ್ಲಿ ಶುಕ್ರವಾರ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿ ಸುಶೀಲಮ್ಮ (63) ಎಂಬುವರನ್ನು ತುಳಿದು ಸಾಯಿಸಿತ್ತು. 

ಕಳೆದ 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಈ ಭಾಗದಲ್ಲಿ ನಾಲ್ವರು ಮೃತಪಟ್ಟಿದ್ದು, ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿತ್ತು. ಕಾಡಾನೆ ದಾಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕೋಗೋಡು ಹಾಗೂ ಬೊಮ್ಮನಹಳ್ಳಿ ಗ್ರಾಮಸ್ಥರು ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.

ಬೇಲೂರು ಭಾಗದಲ್ಲಿ ಆನೆ ಹಾವಳಿ ತಡೆಗೆ ಆನೆ ಕಾರ್ಯಪಡೆ ಕಚೇರಿ ಆರಂಭಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜಿಸುವುದಾಗಿ ಸಚಿವರು ಹೇಳಿದ್ದರು.  

ಹಾಸನ ವಲಯಕ್ಕೆ 2 ಥರ್ಮಲ್ ಕ್ಯಾಮೆರಾ ಹೊಂದಿರುವ ಡೋಣ್ ಖರೀದಿಸಿ ರಾತ್ರಿಯ ವೇಳೆಯೂ ಆನೆಗಳ ಸಂಚಾರದ ಬಗ್ಗೆ ನಿಗಾ ವಹಿಸಬೇಕು. ಸ್ಥಳೀಯರಿಗೆ ಸಕಾಲದಲ್ಲಿ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

Tags:    

Similar News