ಸಂವಿಧಾನಕ್ಕೆ ಅಗೌರವ' ಆರೋಪ; ಆರ್​ಎಸ್​​ಎಸ್​ ನಾಯಕ ದತ್ತಾತ್ರೇಯ ಹೊಸಬಾಳೆ ವಿರುದ್ಧ ಕಾಂಗ್ರೆಸ್ ದೂರು

ಹೊಸಬಾಳೆ ಅವರು ಭಾರತೀಯ ಸಂವಿಧಾನದ ಪೀಠಿಕೆಯಿಂದ 'ಸಮಾಜವಾದ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಕರೆ ನೀಡಿರುವುದು ದೂರಿಗೆ ಕಾರಣವಾಗಿದೆ.;

Update: 2025-06-30 04:45 GMT

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಇತ್ತೀಚಿನ ಹೇಳಿಕೆಗಳು ಸಂವಿಧಾನ ವಿರೋಧಿ, ಪ್ರಚೋದನಕಾರಿ ಮತ್ತು ಸಮಾಜ ಒಡೆಯುವಂತಿವೆ ಎಂದು ಭಾರತೀಯ ಯುವ ಕಾಂಗ್ರೆಸ್‌ನ ಕರ್ನಾಟಕ ಕಾನೂನು ಘಟಕದ ಸದಸ್ಯರು ಆರೋಪಿಸಿ ದೂರು ದಾಖಲಿಸಿದೆ. ಆದರೆ, ಇದುವರೆಗೆ ಎಫ್‌ಐಆರ್ ದಾಖಲಾಗಿಲ್ಲ.

ಹೊಸಬಾಳೆ ಅವರು ಭಾರತೀಯ ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಕರೆ ನೀಡಿರುವುದು ದೂರಿಗೆ ಕಾರಣವಾಗಿದೆ. ಯುವ ಕಾಂಗ್ರೆಸ್‌ನ ದೂರಿನಲ್ಲಿ, ಈ ಹೇಳಿಕೆಗಳು "ಸಾಂವಿಧಾನಿಕ ತತ್ವಗಳ ಮೇಲಿನ ನೇರ ದಾಳಿ" ಮತ್ತು "ರಾಷ್ಟ್ರದ ಮೂಲಭೂತ ಮೌಲ್ಯಗಳಿಗೆ ವಿರುದ್ಧವಾದ ಪ್ರಚೋದನೆ" ಎಂದು ಬಣ್ಣಿಸಲಾಗಿದೆ.

ಯುವ ಕಾಂಗ್ರೆಸ್ ಪ್ರತಿನಿಧಿ ಶ್ರೀಧರ್ ಎಂ.ಎಂ. ಅವರು ದೂರು ನೀಡಿದ್ದು, "ಭಾರತದ ಸಂವಿಧಾನದ ಪಾವಿತ್ರ್ಯವನ್ನು ರಕ್ಷಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಒಬ್ಬ ಕರ್ತವ್ಯಬದ್ಧ ನಾಗರಿಕನಾಗಿ ನಾನು ಈ ದೂರನ್ನು ಸಲ್ಲಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. "ಈ ಹೇಳಿಕೆಗಳು ಕೇವಲ ವೈಯಕ್ತಿಕ ವ್ಯಾಖ್ಯಾನಗಳಲ್ಲ, ಬದಲಿಗೆ ಅವು ಉದ್ದೇಶಪೂರ್ವಕ, ಪ್ರಚೋದನಕಾರಿ ಮತ್ತು ಅಪಾಯಕಾರಿಯಾಗಿವೆ. ಹೊಸಬಾಳೆ ಅವರ ಮಾತುಗಳು ಭಾರತೀಯ ನ್ಯಾಯ ಸಂಹಿತೆಯ ಹಲವಾರು ವಿಭಾಗಗಳನ್ನು ಉಲ್ಲಂಘಿಸಿವೆ" ಎಂದು ದೂರಿನಲ್ಲಿ ಹೇಳಲಾಗಿದೆ.  

Tags:    

Similar News