ದೆಹಲಿಯಲ್ಲೇ ಡಿಸಿಎಂ ಠಿಕಾಣಿ ; ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ?

ಡಿ.ಕೆ. ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ದೆಹಲಿಯಲ್ಲೇ ಬೀಡು ಬಿಟ್ಟಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಚರ್ಚೆ ಮುನ್ನೆಲೆಗೆ ಬಂದಿದೆ.;

Update: 2025-06-11 14:17 GMT

ನವದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಭೇಟಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಸಾದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಷ್ಟ್ರ ರಾಜಧಾನಿಯಲ್ಲೇ ಠಿಕಾಣಿ ಹೂಡಿರುವುದು ಕುತೂಹಲ ಮೂಡಿಸಿದೆ. 

ಮಂಗಳವಾರವಷ್ಟೇ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಕರೆಸಿಕೊಂಡು ಜಾತಿ ಜನಗಣತಿ ಮರು ಸಮೀಕ್ಷೆ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕಾಲ್ತುಳಿತ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕವಾಗಿ ವಿವರಿಸಿದ್ದರು. ಆರ್‌ಸಿಬಿ ವಿಜಯೋತ್ಸವದಲ್ಲಿ ಡಿ.ಕೆ.ಶಿವಕುಮಾರ್‌ ತೋರಿದ ಆತುರದ ಬಗ್ಗೆಯೂ ದೂರಿದ್ದರು.

ಇದಾದ ನಂತರ ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ವರಿಷ್ಠರು ನಡೆಸಿದ ಸಮಾಲೋಚನೆ ವೇಳೆ ಡಿ.ಕೆ ಶಿವಕುಮಾರ್‌ ನಡೆದುಕೊಂಡ ರೀತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆರ್‌ಸಿಬಿ ಆಟಗಾರರೇನು ರಾಯಭಾರಿಗಳೇ, ನೀವೇಕೆ ಅವರನ್ನು ಸ್ವಾಗತಿಸಲು ಹೋಗಿದ್ದಿರಿ ಎಂದು ಪ್ರಶ್ನಿಸಿದ್ದರು.

ಇದಾದ ಬಳಿಕ ಜಾತಿಗಣತಿ ಮರು ಸಮೀಕ್ಷೆ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು. ಜಾತಿ ಗಣತಿ ವರದಿಯು ಹತ್ತು ವರ್ಷಗಳ ಹಳೆಯ ವರದಿಯಾದ ಕಾರಣ ಅಂಕಿ ಅಂಶಗಳು ವ್ಯತ್ಯಾಸಗೊಂಡಿವೆ. ಹಾಗಾಗಿ ವರದಿ ಪರಿಷ್ಕರಿಸಬೇಕು ಎಂಬ ಪ್ರಬಲ ಸಮುದಾಯಗಳ ಆಗ್ರಹಕ್ಕೆ ಮಣಿದ ಹೈಕಮಾಂಡ್‌ ಮರು ಸಮೀಕ್ಷೆ ನಡೆಸಲು ನಿರ್ದೇಶನ ನೀಡಿತ್ತು. ಅದಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗಿದ್ದರು. 

ದೆಹಲಿಯಲ್ಲೇ ಉಳಿದ ಡಿಕೆಶಿ

ಕಾಲ್ತುಳಿತ ಘಟನೆಯಲ್ಲಿ ವರಿಷ್ಠರ ಆಕ್ರೋಶಕ್ಕೆ ಗುರಿಯಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯಲ್ಲೇ ಉಳಿದಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಹೈಕಮಾಂಡ್‌ ಪ್ರತ್ಯೇಕ ಮಾತುಕತೆ ನಡೆಸುವ ಸಾಧ್ಯತೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.  ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಆಪ್ತ ಬಳಗದ ಸಚಿವರು ಪಟ್ಟು ಹಿಡಿದಿದ್ದರು. ಮಂಗಳವಾರ ಹೈಕಮಾಂಡ್‌ ಭೇಟಿಯ ವೇಳೆ ಈ ಕುರಿತಂತೆ ಯಾವುದೇ ಚರ್ಚೆ ನಡೆಯದೇ ಹೋದರೂ ಡಿ.ಕೆ. ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ದೆಹಲಿಯಲ್ಲೇ ಬೀಡು ಬಿಟ್ಟಿರುವುದರಿಂದ ಇಂತದ್ದೊಂದು ಚರ್ಚೆಗೆ ಆಸ್ಪದ ನೀಡಿದೆ.   

ಪಕ್ಷಕ್ಕೆ ಮುಜುಗರ ತಂದ ಡಿಕೆಶಿ ನಡೆ 

ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ನಲ್ಲಿ ಉತ್ತಮ ಹೆಸರಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದಾಗಲೂ ಕಾಂಗ್ರೆಸ್‌ ಪಕ್ಷವು ಡಿ.ಕೆ. ಶಿವಕುಮಾರ್‌ ಬೆನ್ನಿಗೆ ನಿಂತಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸುವ ಸಂದರ್ಭದಲ್ಲೇ ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ತೆಗೆದ ತಗಾದೆಯು ಬಣ ಸೃಷ್ಟಿಗೆ ಕಾರಣವಾಗಿತ್ತು. ಸಿಎಂ ಅಧಿಕಾರ ಹಸ್ತಾಂತರದ ಮಾತುಗಳನ್ನಾಡಿದ್ದಕ್ಕೆ ಪ್ರತಿಯಾಗಿ ಸಿಎಂ ಆಪ್ತ ಬಳಗದ ಸಚಿವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇದು ಪರಸ್ಪರ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಇದಾದ ಬಳಿಕ ಕಾಂಗ್ರೆಸ್‌ ಸಚಿವರನ್ನೇ ಹನಿಟ್ರ್ಯಾಪ್‌ಗೆ ಬೀಳಿಸುವ ಪ್ರಯತ್ನದ ಹಿಂದೆಯೂ ಹೆಸರು ಥಳಕು ಹಾಕಿಕೊಂಡ ನಂತರ ವರಿಷ್ಠರಿಗೆ ದೂರು ನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್‌ಗೆ ಮುಜುಗರ ತಂದಿದ್ದವು.  

Tags:    

Similar News