ಅಂಗನವಾಡಿ ಸಿಬ್ಬಂದಿ ನೇಮಕದಲ್ಲಿ ಭ್ರಷ್ಟಾಚಾರ ಕಂಡರೆ ಕ್ರಮ: ಲಕ್ಷ್ಮೀ ಹೆಬ್ಬಾಳ್ಕರ್
ಮೆರಿಟ್ ಆಧಾರದ ಮೇಲೆ ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ನೇಮಕ ನಡೆಯುತ್ತದೆ. ಇದರಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.;
ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ನೇಮಕದಲ್ಲಿ ಒತ್ತಡ ಅಥವಾ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಇಲಾಖೆಯ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೆರಿಟ್ ಆಧಾರದ ಮೇಲೆ ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ನೇಮಕ ನಡೆಯುತ್ತದೆ. ಇದರಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಜೊತೆಗೆ ಯಾರ ಒತ್ತಡಕ್ಕೂ ಒಳಗಾಗುವುದು ಬೇಡ. ಅಲ್ಲದೆ ಒಂದು ರೂಪಾಯಿ ಕೂಡ ಭ್ರಷ್ಟಾಚಾರ ನಡೆಯುವುದನ್ನು ಸಹಿಸುವುದಿಲ್ಲ. ಹಾಗೇನಾದರೂ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಪೂರ್ಣ ಪಾರದರ್ಶಕವಾಗಿ ನೇಮಕ ನಡೆಸಿ ಎಂದು ಸೂಚಿಸಿದರು.
ಸುವರ್ಣ ಮಹೋತ್ಸವ ಆಚರಣೆ
ಅಂಗನವಾಡಿಗಳು ಆರಂಭವಾಗಿ 50 ವರ್ಷವಾಗಿದೆ. ಇಲಾಖೆಗೆ ಇತಿಹಾಸವಿದೆ. ಈ ವರ್ಷ ಸುವರ್ಣ ಮಹೋತ್ಸವ ಆಚರಿಸಲು ತಯಾರಿ ನಡೆಸುತ್ತಿದ್ದೇವೆ. ಶೇ.80 ರಷ್ಟು ಅಂಗನವಾಡಿಗಳು ಖಾಸಗಿ ನರ್ಸರಿಗಳಿಗಿಂತ ಚೆನ್ನಾಗಿ ನಡೆಯುತ್ತಿದೆ. ಮಕ್ಕಳಿಗೆ ಎಲ್ಲ ಸೌಲಭ್ಯ ಕೊಡುತ್ತಿದ್ದೇವೆ. ಬೀದಿ ಬೀದಿಗಳಲ್ಲಿ ಹೋಗಿ, ಪ್ರಚಾರ ಮಾಡಬೇಕು. ಮಕ್ಕಳ ಸಂಖ್ಯೆ ಕಡಿಮೆಯಾಗಲು ಬಿಡಬೇಡಿ. ಪಾಲಕರ ಮನವೊಲಿಸಿ ಮಕ್ಕಳನ್ನು ಹೆಚ್ಚು ಆಕರ್ಷಿಸಿ ಎಂದು ಕರೆ ನೀಡಿದರು.
ಅನುದಾನಕ್ಕೆ ಕೊರತೆ ಇಲ್ಲ
ಅಂಗನವಾಡಿ ಕಟ್ಟಡಗಳ ಬಾಡಿಗೆ, ಮಕ್ಕಳಿಗೆ ಹಂಚುವ ಮೊಟ್ಟೆಗಳಿಗೆ ಅನುದಾನ ಕೊರತೆ ಇಲ್ಲ. ಇವುಗಳನ್ನು ವಿಳಂಬವಿಲ್ಲದೆ ಪಾವತಿಸಿ. ಪ್ರತಿ ತಿಂಗಳು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಿ. ಇಲಾಖೆಯ ಕೆಲಸಗಳು ಸುಗಮವಾಗಿ ನಡೆಯಬೇಕು. ಅಗತ್ಯ ಸುಧಾರಣೆಯಾಗಬೇಕು. ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದರು.
ಕೇಂದ್ರದಿಂದ 17,500 ಅಂಗನವಾಡಿ ಮಂಜೂರು
ಸಕ್ಷಮ ಯೋಜನೆಯಲ್ಲಿ ವಿಶೇಷ ಪ್ರಯತ್ನ ಮಾಡಿ ರಾಜ್ಯಕ್ಕೆ 17,500 ಅಂಗನವಾಡಿ ತರಲಾಗಿದೆ. ದೊಡ್ಡ ರಾಜ್ಯಗಳಿಗೂ ಸಿಗದಷ್ಟು ನಮಗೆ ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಬೇರೆ ರಾಜ್ಯಗಳಿಗೆ ಮಾದರಿಯಾಗಿ ಉದಾಹರಣೆ ನೀಡುತ್ತಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಕೆಲಸ ಮಾಡಿ ಎಂದು ತಿಳಿಸಿದರು.