ʼಕೈʼ ಶಾಸಕರೊಂದಿಗೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಪ್ರತ್ಯೇಕ ಚರ್ಚೆ; ಸಚಿವರ ವಿರುದ್ಧ ಶಾಸಕರ ದೂರಿನ ಸುರಿಮಳೆ

ʼಸಚಿವರು ನಮ್ಮ ಕೈಗೆ ಸಿಗುತ್ತಿಲ್ಲ, ಸಿಕ್ಕಿದರೂ ಮುಖ ಕೊಟ್ಟು ಮಾತನಾಡುತ್ತಿಲ್ಲ, ನಮ್ಮನ್ನ ಕ್ಯಾರೆ ಎನ್ನುತ್ತಿಲ್ಲ, ನಮ್ಮ ಪತ್ರಗಳಿಗೆ ಕಿಮ್ಮತ್ತು ಸಿಗುತ್ತಿಲ್ಲ. ಆಯಾ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಚಿವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.;

Update: 2025-06-30 15:24 GMT

ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ಸ್ವಪಕ್ಷಿಯ ಶಾಸಕರ ಅಸಮಾಧಾನ ತಣಿಸಲು ಬಂದಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ‌ ರಣದೀಪ್‌ ಸಿಂಗ್‌ ಸುರ್ಜೇವಾಲಾ ಎದುರೇ ಸಚಿವರ ಕಾರ್ಯವೈಖರಿಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 

ಸೋಮವಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಈ ವೇಳೆ ಸಚಿವರ ಧೋರಣೆಗೆ ಶಾಸಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಸೇರಿ ಹಲವು ಶಾಸಕರು ಸಚಿವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ʼಸಚಿವರು ನಮ್ಮ ಕೈಗೆ ಸಿಗುತ್ತಿಲ್ಲ, ಸಿಕ್ಕಿದರೂ ಮುಖ ಕೊಟ್ಟು ಮಾತನಾಡುತ್ತಿಲ್ಲ, ನಮ್ಮನ್ನ ಕ್ಯಾರೆ ಎನ್ನುತ್ತಿಲ್ಲ, ನಮ್ಮ ಪತ್ರಗಳಿಗೆ ಕಿಮ್ಮತ್ತು ಸಿಗುತ್ತಿಲ್ಲ. ಆಯಾ ಇಲಾಖೆಗಳ ಪ್ರಮುಖ ಅಧಿಕಾರಿಗಳ ಜೊತೆಗೆ ಸಚಿವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ತಮಗೆ ನೀಡಿರುವ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ದೂರಿದ್ದಾರೆ.

ಪ್ರತಿಯೊಂದನ್ನು ಮುಖ್ಯಮಂತ್ರಿ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಸಚಿವರಾಗಿರುವವರು ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು. ಅದು ಬಿಟ್ಟು ಹೊಂದಾಣಿಕೆ ಕೆಲಸ ಮಾಡುತ್ತಿರುವುದಾಗಿ ಆಕ್ಷೇಪಿಸಿದ್ದಾರೆ. 

ಅಸಮಾಧಾನ ದಾಖಲಿಸಿಕೊಂಡ ಸುರ್ಜೇವಾಲಾ 

ಶಾಸಕರಿಗೆ ಪ್ರಶ್ನೆಗಳನ್ನು ಕೇಳಿದ ಬಳಿಕ ಅವರು ನೀಡಿದ ಉತ್ತರಗಳನ್ನು ಸುರ್ಜೇವಾಲಾ ಅವರು ದಾಖಲಿಸಿಕೊಂಡಿದ್ದಾರೆ. ಶಾಸಕರ ಅಭಿಪ್ರಾಯಗಳನ್ನು ಲಿಖಿತವಾಗಿ ದಾಖಲಿಸಿಕೊಂಡ ಸುರ್ಜೇವಾಲಾ ಅವರು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ.

ನಿರ್ದಿಷ್ಟವಾಗಿ ಶಾಸಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿರುವ ಸುರ್ಜೇವಾಲಾ ಅವರು, ಶಾಸಕರು ನೀಡುವ ಸಂಪೂರ್ಣ ಅಭಿಪ್ರಾಯ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಸುರ್ಜೇವಾಲಾ ಅವರು ಕೇವಲ ಅಭಿಪ್ರಾಯ ಆಲಿಸಿ ಕಳುಹಿಸುತ್ತಿದ್ದರು. ಆದರೆ, ಈ ಬಾರಿ ಲಿಖಿತವಾಗಿ ಅಹವಾಲು ದಾಖಲಿಸಿಕೊಂಡಿದ್ದಾರೆ.

ಸುರ್ಜೆವಾಲಾ ಕೇಳಿದ ಪ್ರಶ್ನೆಗಳು ಏನು?

ಶಾಸಕರ ಜೊತೆಗಿನ ಒನ್ ಟು ಒನ್ ಮಾತುಕತೆಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.  

* ಎರಡೂವರೆ ವರ್ಷದಲ್ಲಿ ನಿಮ್ಮ ಸಾಧನೆ ಏನು ?

* ಕ್ಷೇತ್ರದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ

* ಇನ್ನೂ ಏನೆಲ್ಲಾ ಕೆಲಸಗಳು ಆಗಬೇಕಿದೆ

* ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯಾ? 

* ಹಾಗೆ ಆಗಿದೇ ಇದ್ದಲ್ಲಿ ಅದಕ್ಕೆ ಪರಿಹಾರ ಏನು ಮಾಡಬಹುದು ?

* ಜಿಲ್ಲಾ ಉಸ್ತುವಾರಿಗಳು ನಿಮ್ಮನ್ನ ಸರಿಯಾಗಿ ನಡೆಸಿಕೊಳ್ಳುತ್ತಿದ್ದಾರಾ? 

* ನಿಮ್ಮ ಕ್ಷೇತ್ರದಲ್ಲಿ ಪ್ರಮುಖವಾಗಿ ಏನು ಸಮಸ್ಯೆಗಳಿವೆ?

* ನಿಮ್ಮ ಜಿಲ್ಲೆಯ ಸಮಸ್ಯೆಗಳು ಏನು ?

* ಇಲಾಖಾವಾರು ಅನುದಾನ ತಾರತಮ್ಯ ಇದೆಯಾ ?

* ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿದೆಯಾ ?

* ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಅನುಕೂಲ ಆಗುತ್ತಿದೆಯಾ ?

* ಸಚಿವರಿಂದ ಇನ್ನೂ ಏನೇನು ಕೆಲಸಗಳನ್ನು ನಿರೀಕ್ಷಿಸುತ್ತೀರಿ ?

* ಸಚಿವರು ನಡವಳಿಕೆ ಬದಲಿಸಿಕೊಳ್ಳಬೇಕಾ ?

* ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕಾ ?

* ಮಾಡಬೇಕಾದಲ್ಲಿ ಯಾರಿಗೆ ಜವಾಬ್ದಾರಿ ನೀಡಿದರೆ ಸೂಕ್ತ ? ಎಂಬ ಹಲವು ಪ್ರಶ್ನೆಗಳನ್ನು ಸುರ್ಜೇವಾಲಾ ಅವರು ಕೇಳಿ ಉತ್ತರ ದಾಖಲಿಸಿಕೊಂಡಿದ್ದಾರೆ.

ಬಿ.ಆರ್. ಪಾಟೀಲ್, ರಾಜು ಕಾಗೆ, ಕೊತ್ತೂರು ಮಂಜುನಾಥ್, ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್ , ನಾರಾಯಣಸ್ವಾಮಿ ಸೇರಿದಂತೆ 15 ಶಾಸಕರೊಂದಿಗೆ ಮೊದಲ ದಿನ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿದ್ದಾರೆ. 

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಐವರು ಶಾಸಕರು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದರು. ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಹೈಕಮಾಂಡ್ ನಾಯಕರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಶಾಸಕರ ಜೊತೆ ಮಾತನಾಡುವಂತೆ ಸೂಚಿಸಿದ್ದರು.

Tags:    

Similar News