ಶಾಸಕರ ಅಸಮಾಧಾನ | ಖುದ್ದು ಅಖಾಡಕ್ಕಿಳಿದ ಕಾಂಗ್ರೆಸ್‌ ಹೈಕಮಾಂಡ್; ಶಾಸಕರ ಸಭೆ ನಡೆಸಲು ನಿರ್ಧಾರ

ಅಸಮಾಧಾನಿತ ಶಾಸಕರೊಂದಿಗೆ ಹೈಕಮಾಂಡ್‌ ನಾಯಕರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ. ಜತೆಗೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.;

Update: 2025-06-26 07:59 GMT

ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

ಅನುದಾನದ ವಿಚಾರದಲ್ಲಿ ಈಗಾಗಲೇ ಐವರು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಈ ಅಸಮಾಧಾನ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಳ್ಳುವ ಮುನ್ಸೂಚನೆ ಅರಿತ ಹೈಕಮಾಂಡ್‌ ಖುದ್ದು ಅಖಾಡಕ್ಕೆ ಇಳಿಯಲು ನಿರ್ಧರಿಸಿದೆ.  

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಜೂ.30 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಶಾಸಕರ ಸಭೆ ನಡೆಸುವ ಸಾಧ್ಯತೆ

ಹೈಕಮಾಂಡ್‌ ನಾಯಕರು ಅಸಮಾಧಾನಿತ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುವ ಸಾಧ್ಯತೆ ಇದೆ. ಇದರ ಜತೆಗೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ. ಸಭೆ ನಡೆಸಿದರೆ ಶಾಸಕರ ಅಸಮಾಧಾನ ಸ್ಪೋಟಗೊಳ್ಳಬಹುದು. ಆದ್ದರಿಂದ, ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಜತೆ ಸುರ್ಜೆವಾಲಾ ಸಭೆ

ರಾಜ್ಯ ಸರ್ಕಾರದ ಸಚಿವರ ಜೊತೆ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಸಭೆ ನಡೆಸಲಿದ್ದಾರೆ. ಸಚಿವರು ನಮ್ಮ ಕೈಗೆ ಸಿಗುವುದಿಲ್ಲ ಎಂಬುದು ಬಹುತೇಕ ಶಾಸಕರ ಆರೋಪವಾಗಿದೆ. ಈ ನಿಟ್ಟಿನಲ್ಲಿ ಸಚಿವರೊಂದಿಗೆ ಸಭೆ ನಡೆಸಲಿದ್ದು, ಶಾಸಕರ ಬೇಡಿಕೆ ಈಡೇರಿಸುವ ಕುರಿತು ಕೆಲ ಸೂಚನೆಗಳನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಜತೆ ಚರ್ಚೆ ನಡೆಸಿದ್ದ ಹೈಕಮಾಂಡ್‌

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಬಗ್ಗೆ ವಿವರಣೆ ನೀಡಿದ್ದರು.

ಅಸಮಾಧಾನಿತ ಶಾಸಕರನ್ನು ಕರೆದು ಮಾತನಾಡುವುದಾಗಿ ವರಿಷ್ಠರಿಗೆ ಭರವಸೆ ನೀಡಿದ್ದರು. ಅಂತೆಯೇ ದೆಹಲಿಯಿಂದ ಹಿಂತಿರುಗಿದ ಸಿಎಂ ಅವರು ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.  

ಶಾಸಕರಾದ ಬಿ.ಆರ್‌. ಪಾಟೀಲ್‌ -ರಾಜು ಕಾಗೆ ಅಸಮಾಧಾನ

ʼಶಾಸಕರ ಗಮನಕ್ಕೆ ಬಾರದೇ ವಸತಿ ಇಲಾಖೆಯಿಂದ ಲಂಚ ಪಡೆದು 950 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ. ಆರ್‌. ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಾಗವಾಡ ಕ್ಷೇತ್ರದ ಶಾಸಕ ಹಾಗೂ ವಾಯವ್ಯ ಸಾರಿಗೆ ಇಲಾಖೆ ಅಧ್ಯಕ್ಷ ರಾಜು ಕಾಗೆ ಕೂಡ ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಯೋಜನೆಗಳನ್ನು ಘೋಷಿಸಿದರೂ ಅನುದಾನ ಬಿಡುಗಡೆ ಮಾಡಿಲ್ಲ. ಕೆಲವೇ ದಿನಗಳಲ್ಲಿ ನಾನು ರಾಜೀನಾಮೆ ನೀಡಿದರೂ ಆಶ್ಚರ್ಯಪಡಬೇಕಿಲ್ಲ. ಕೆಪಿಸಿಸಿ ಅಧ್ಯಕ್ಷರು ನಮಗೆ ಸಿಗುವುದೇ ಇಲ್ಲ ಎಂದು ದೂರಿದ್ದರು.

Tags:    

Similar News