CM vs DCM | ಅಧಿಕಾರಿಗಳ ವರ್ಗಾವಣೆ; ಬಹಿರಂಗವಾದ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಶೀತಲ ಸಮರ
ಲೋಕೋಪಯೋಗಿ ಇಲಾಖೆಯಿಂದ (ಪಿಎಬ್ಲ್ಯುಡಿ) ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಎಂಜಿನಿಯರ್ಗಳ ಏಕಾಏಕಿ ವರ್ಗಾವಣೆ ಮಾಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಆ ಮೂಲಕ ಸಿಎಂ-ಡಿಸಿಎಂ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.;
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಈವರೆಗಿನ ತೆರೆಮರೆಯ ಗುದ್ದಾಟ ಇದೇ ಮೊದಲ ಬಾರಿಗೆ ಬಹಿರಂಗವಾಗಿದೆ.
ಲೋಕೋಪಯೋಗಿ ಇಲಾಖೆಯಿಂದ (ಪಿಎಬ್ಲ್ಯುಡಿ) ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಎಂಜಿನಿಯರ್ಗಳ ಏಕಾಏಕಿ ವರ್ಗಾವಣೆ ಮಾಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪೂರ್ವಾನುಮತಿ ಇಲ್ಲದೇ ಎಂಜಿನಿಯುರ್ಗಳ ವರ್ಗಾವಣೆ, ಸ್ಥಳ ನಿಗದಿ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಮುಖ್ಯಮಂತ್ರಿ ಅನುಮೋದನೆ ಬಳಿಕ ವರ್ಗಾವಣೆ ಆದೇಶ ಹೊರಡಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ. ಇದರಿಂದ ವರ್ಗಾವಣೆ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಸಂಘರ್ಷ ಏರ್ಪಟ್ಟಂತಾಗಿದೆ.
ವರ್ಗಾವಣೆಗೆ ಸಿಎಂ ಅನುಮೋದನೆ
ಮುಖ್ಯ ಎಂಜಿನಿಯರ್ಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಕಡತವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿತ್ತು.
ಮುಖ್ಯಮಂತ್ರಿ ಅನುಮೋದನೆ ಬಳಿಕ ಐವರು ಮುಖ್ಯ ಎಂಜಿನಿಯರ್ಗಳನ್ನು ಮೇ 9ರಂದು ವರ್ಗಾವಣೆ ಮಾಡಲಾಗಿತ್ತು. ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯು ಸಿಎಂ ಅಧೀನದಲ್ಲಿರುವ ಇಲಾಖೆ ಆಗಿರುವುದರಿಂದ ವರ್ಗಾವಣೆ ಮಾಡಲಾಗಿದೆ ಎಂಬ ವಿಚಾರ ಸಿಎಂ ಹಾಗೂ ಡಿಸಿಎಂ ಮಧ್ಯೆ ಭಿನ್ನಮತ ಸೃಷ್ಟಿಸಿದೆ.
ಸರ್ಕಾರ ರಚನೆ ಆರಂಭದಲ್ಲೇ ಡಿಕೆಶಿ ಸೂಚನೆ
ನನ್ನ ಇಲಾಖೆಗೆ(ಜಲ ಸಂಪನ್ಮೂಲ) ಸಂಬಂಧಿಸಿದ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸುವ ಮುನ್ನ ಪೂರ್ವಾನುಮತಿ ಪಡೆಯಲೇಬೇಕು ಎಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿಯ ಮೂಲಕ ಮುಖ್ಯ ಕಾರ್ಯದರ್ಶಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದರು. ಈಗ ಆ ಸೂಚನೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಿರುವುದಕ್ಕೆ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ತಿಂಗಳಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಐವರು ಮುಖ್ಯ ಎಂಜಿನಿಯರ್ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಹುದ್ದೆಗಳಿಗೆ ವರ್ಗಾವಣೆ ಮಾಡಿ ಮೇ 9ರಂದು ಡಿಪಿಎಆರ್ ಅಧಿಸೂಚನೆ ಹೊರಡಿಸಿತ್ತು.
ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಪ್ರಭಾರ ವರ್ಗಾವಣೆ ಪ್ರಮಾಣ ಪತ್ರವನ್ನು (ಸಿಟಿಸಿ) ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಡಿಪಿಎಆರ್ ನಿರ್ದೇಶನ ನೀಡಿತ್ತು. ಅದರಂತೆ ಎಲ್ಲ ಐವರು ಎಂಜಿನಿಯರ್ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ವರ್ಗಾವಣೆಯಾದ ಅಧಿಕಾರಿಗಳು ಯಾರು?
ಅಂತರ ರಾಜ್ಯ ಜಲವಿವಾದ, ನೀರಾವರಿ ಯೋಜನೆಗಳ ವಲಯ, ಎತ್ತಿನಹೊಳೆ ಯೋಜನಾ ವಲಯ, ಕಾಡಾ ನೀರಾವರಿ ಯೋಜನೆಗಳ ವಲಯ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಕ್ರಮವಾಗಿ ಎಚ್.ಸಿ.ರಮೇಂದ್ರ, ವಿನಾಯಕ ಜಿ.ಸುಗೂರ, ಜಿ.ಇ. ಯತೀಶ್ ಚಂದ್ರನ್, ಶಿವಾನಂದ ಆರ್.ನಾಯಕ್, ಪಿ.ಬಿ ಪ್ರಕಾಶ್ ಅವರನ್ನು ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿಗೊಳಿಸಲಾಗಿತ್ತು.
ಇವರ ಪೈಕಿ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಎಂಜಿನಿಯರ್ ಬಿ.ಎಚ್. ಮಂಜುನಾಥ್ ಅವರು ಮೇ 31ರಂದು ನಿವೃತ್ತಿ ಆಗಲಿದ್ದು, ತೆರವಾಗುವ ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಪಿ.ಬಿ.ಪ್ರಕಾಶ್ ಅವರಿಗೆ ಸೂಚಿಸಲಾಗಿದೆ.
ಸಿಎಸ್ಗೆ ಡಿಕೆಶಿ ಬರೆದ ಪತ್ರದಲ್ಲಿ ಏನಿದೆ?
ನನ್ನ ಗಮನಕ್ಕೆ ತಂದು ಅನುಮೋದನೆ ಪಡೆದ ನಂತರವೇ ಡಿಪಿಎಆರ್ನಿಂದ ಆದೇಶ ಹೊರಡಿಸಬೇಕು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಆದರೆ, ಮೇ 9ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೆ ಕೆಲವು ಮುಖ್ಯ ಎಂಜಿನಿಯರ್ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ಗಮನಕ್ಕೆ ಬಂದಿದೆ. ನನ್ನ ಸೂಚನೆ ಕಡೆಗಣಿಸಿ ಆದೇಶ ಹೊರಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಡಿ.ಕೆ ಶಿವಕುಮಾರ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು ಎಂದು ಮೇ 13 ರಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿಯಲ್ಲಿ ಸೂಚನೆ ನೀಡಿದ್ದಾರೆ.
ಸಿಎಂ-ಡಿಸಿಎಂ ಹಿಂದಿನಿಂದಲೂ ಮುಸುಕಿನ ಗುದ್ದಾಟ
ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯೆ ಈ ಹಿಂದೆ ಅಸಮಾಧಾನ ಮನೆ ಮಾಡಿತ್ತು.
ತದನಂತರ 2023 ರಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿ ಉಪಮುಖ್ಯಮಂತ್ರಿ ಹೊರಡಿಸಿದ್ದ ಟಿಪ್ಪಣಿಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
ಡಿಸಿಎಂ ಅವರ ಟಿಪ್ಪಣಿಯು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೂರಿ ಕೆಲ ಅಧಿಕಾರಿಗಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಉಪಮುಖ್ಯಮಂತ್ರಿ ಹೊರಡಿಸಿದ್ದ ವರ್ಗಾವಣೆ ಟಿಪ್ಪಣಿಗೆ ತಡೆ ನೀಡಿತ್ತು.