KRS Dam| ಕೆಆರ್ಎಸ್ ಭರ್ತಿಗೆ ನಾಲ್ಕೇ ಅಡಿ ಬಾಕಿ ; ನಾಲ್ಕನೇ ಬಾರಿಗೆ ಸಿಎಂ ಬಾಗಿನ
ಕೆಆರ್ಎಸ್ ಅಣೆಕಟ್ಟಿನ ಕಳೆದ 85 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕನೇ ಬಾರಿಗೆ ಕೆಆರ್ಎಸ್ ಜಲಾಶಯದಲ್ಲಿ ಬಾಗಿನ ಅರ್ಪಿಸಲಿದ್ದಾರೆ.;
ಕೆಆರ್ಎಸ್ ಜಲಾಶಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯದಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟು ಭರ್ತಿಯಾಗಲು ಕೇವಲ ನಾಲ್ಕು ಅಡಿ ಬಾಕಿಯಿದೆ. ಕಳೆದ 85 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಬಾಗಿನ ಅರ್ಪಿಸುವ ಮೂಲಕ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಅವರು ಸಜ್ಜಾಗಿದ್ದಾರೆ.
ಸಾಮಾನ್ಯವಾಗಿ ಜಲಾಶಯಗಳಿಗೆ ಜುಲೈ, ಆಗಸ್ಟ್ ತಿಂಗಳಲ್ಲಿ ಬಾಗಿನ ಅರ್ಪಿಸಲಾಗುತ್ತಿತ್ತು. ಈಗ ಸಿದ್ದರಾಮಯ್ಯ ಅವರು ಜೂನ್ ತಿಂಗಳಿನಲ್ಲೇ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸೋಮವಾರ ಸಿಎಂ ಬಾಗಿನ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರುಗಳು ಸೋಮವಾರ(ಜೂ.30) ಜಲಾಶಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ 1979ರಿಂದ ಬಾಗಿನ ಅರ್ಪಿಸುವ ಪದ್ಧತಿಗೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಪ್ರಾರಂಭಿಸಿದ್ಧರು. ಅಲ್ಲಿಂದ ಇಲ್ಲಿಯವರೆಗೂ ಯಾವ ಮುಖ್ಯಮಂತ್ರಿಗೂ ಜೂನ್ನಲ್ಲಿ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಅವಕಾಶ ದೊರೆತಿದೆ.
22 ಸಾವಿರ ಕ್ಯೂಸೆಕ್ ಒಳ ಹರಿವು
ಈ ವರ್ಷ ಅವಧಿ ಪೂರ್ವ ಮುಂಗಾರು ಮಳೆಯ ಕಾರಣ ಜೂನ್ ಆರಂಭದಲ್ಲೇ ಡ್ಯಾಂ ನೀರಿನ ಮಟ್ಟ 100 ಅಡಿ ದಾಟುವ ಮೂಲಕ ದಾಖಲೆ ಬರೆದಿತ್ತು. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದ ನೀರಿನ ಮಟ್ಟ ಮೇ ಕೊನೆ ವಾರದಲ್ಲೇ 98 ಅಡಿ ಇತ್ತು. ಜೂನ್ 15 ರ ವೇಳೆಗೆ 115.78 ಅಡಿ ತಲುಪಿತ್ತು. ಇತ್ತೀಚೆಗೆ ಸುರಿಯುತ್ತಿರವ ಮಳೆಗೆ ಕೆಆರ್ಎಸ್ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು, ಅಣೆಕಟ್ಟಿನಿಂದ 630 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕಳೆದ ವರ್ಷ ಜು. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಕೆಆರ್ಎಸ್ ಜಲಾಶಯದಲ್ಲಿ ಬಾಗಿನ ಸಮರ್ಪಿಸಿದ್ದರು.
ಒಮ್ಮೆ ಬಾಗಿನ ಅರ್ಪಿಸಿದ್ದ ರಾಜ್ಯಪಾಲರು
ಕೆಆರ್ಎಸ್ ಅಣೆಕಟ್ಟಿಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ಸಾಮಾನ್ಯ. ಆದರೆ, ಕೆಆರ್ಎಸ್ ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ 1988 ರಲ್ಲಿ ರಾಜ್ಯಪಾಲ ವೆಂಕಟಸುಬ್ಬ ಅವರು ಕೆಆರ್ಎಸ್ಗೆ ಬಾಗಿನ ಅರ್ಪಿಸಿದ್ದರು. ಅದಾದ ನಂತರ ಇಲ್ಲಿಯವರೆಗೂ ಮುಖ್ಯಮಂತ್ರಿಗಳೇ ಬಾಗಿನ ಅರ್ಪಿಸುತ್ತಾ ಬಂದಿದ್ದಾರೆ.
13 ಬಾರಿ ಭರ್ತಿಯಾಗದ ಕೆಆರ್ಎಸ್
ಮುಂಗಾರು ಮಳೆ ದುರ್ಬಲವಾದ ಕಾರಣ 1979 ರಿಂದ 2025ರವರೆಗೆ ಒಟ್ಟು 13 ಬಾರಿ ಕೆಆರ್ಎಸ್ ಅಣೆಕಟ್ಟು ತುಂಬಿರಲಿಲ್ಲ. ಈ ವೇಳೆ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ. ಅಣೆಕಟ್ಟಿಗೆ ಇದುವರೆಗೂ ಒಟ್ಟು 15 ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅತಿ ಹೆಚ್ಚು ಬಾರಿ ಅಂದರೆ 5 ಬಾರಿ ಬಾಗಿನ ಅರ್ಪಿಸಿರುದ ದಾಖಲೆ ಹೊಂದಿದ್ದಾರೆ.
ಬಾಡೂಟ ಸೇವನೆ-ವಿವಾದ
ಕಳೆದ ವರ್ಷ ಕೆಆರ್ಎಸ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಿನ ಅರ್ಪಿಸಿ ಹೋಗಿದ್ದರು. ಕಾರ್ಯಕ್ರಮ ಮುಗಿದ ನಂತರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಆದರೆ, ಕೆಲ ಅಧಿಕಾರಿಗಳು ಜಲಾಶಯದ ಪಕ್ಕದಲ್ಲೇ ಮಾಂಸಹಾರದ ಹೋಟೆಲ್ಗೆ ಹೋಗಿ ಬಾಡೂಟ ಸೇವನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.