Bangalore Stampede | ಕಾಲ್ತುಳಿತ ದುರಂತ: ಸಿಎಂ ಪರಮಾಪ್ತ ಕೆ.ಗೋವಿಂದರಾಜು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆರವು
ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೆ. ಗೋವಿಂದರಾಜು ಅವರ ಹೆಸರನ್ನು ಪ್ರಸ್ತಾಪಿಸಿ ಗಂಭೀರ ಆರೋಪಗಳನ್ನು ಮಾಡಿದ್ದರು.;
ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತದ ಸುತ್ತ ನಡೆಯುತ್ತಿರುವ ರಾಜಕೀಯ ತಲ್ಲಣಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಅವರ ಮೇಲೆ ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಅವರನ್ನು ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.
ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೆ. ಗೋವಿಂದರಾಜು ಅವರ ಹೆಸರನ್ನು ಪ್ರಸ್ತಾಪಿಸಿ ಗಂಭೀರ ಆರೋಪಗಳನ್ನು ಮಾಡಿದ್ದರು. "ಸಿಎಂ ಜೊತೆಯಲ್ಲಿ 24 ಗಂಟೆ ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರ ಜೊತೆಗೆ 24 ಗಂಟೆ 'ಗೋವಿಂದಾ ಗೋವಿಂದಾ' ಎನ್ನುವ ವ್ಯಕ್ತಿ ಇರುತ್ತಾರೆ" ಎಂದು ಹೇಳುವ ಮೂಲಕ, ಗೋವಿಂದರಾಜು ಅವರ ಪ್ರಭಾವ ಮತ್ತು ಸಿಎಂ ಅವರೊಂದಿಗೆ ಇರುವ ನಿಕಟ ಸಂಬಂಧವನ್ನು ಪರೋಕ್ಷವಾಗಿ ಸೂಚಿಸಿದ್ದರು.
ವಿಧಾನಸೌಧದ ಮುಂದೆ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಅನುಮತಿ ನಿರಾಕರಿಸಿದಾಗ, ಗೋವಿಂದರಾಜು ಅವರು ಮುಖ್ಯಮಂತ್ರಿಗಳ ಮೂಲಕವೇ ಒತ್ತಡ ಹೇರಿ ಅನುಮತಿ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. "ಸಿಎಂ ಹೇಳುತ್ತಿದ್ದಾರೆ, ವಿಧಾನಸೌಧ ಮುಂದೆ ಮಾಡಿಸಿ" ಎಂದು ಮುಖ್ಯಮಂತ್ರಿಗಳ ಮೂಲಕವೇ ಕಮಿಷನರ್ಗೆ ಹೇಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಗೋವಿಂದರಾಜು ಸ್ಪಷ್ಟನೆ
ಈ ಆರೋಪಗಳ ಕುರಿತು ಕೆ. ಗೋವಿಂದರಾಜು ಪ್ರತಿಕ್ರಿಯಿಸಿದ್ದು, ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. "ನನ್ನ ಮಾತುಗಳನ್ನು ತಿರುಚಲಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗೆ ಸಲಹೆ ನೀಡಲು ನಾನಾರು?" ಎಂದು ಅವರು ಹೇಳಿದ್ದಾರೆ. ಕ್ರಿಕೆಟ್ ಆಚರಣೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ತಮಗೆ ಯಾವುದೇ ಪಾತ್ರವಿಲ್ಲ ಎಂದು ಗೋವಿಂದರಾಜು ಹೇಳಿದ್ದಾರೆ.
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ನ ಮುಖ್ಯಸ್ಥನಾಗಿರುವುದರಿಂದ, ಕ್ರಿಕೆಟ್ಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಸಲಹೆ ನೀಡುವ ಕೊನೆಯ ವ್ಯಕ್ತಿ ತಾನೇ ಆಗಿರುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ವಿರೋಧ ಪಕ್ಷಗಳ ತೀವ್ರ ಒತ್ತಡ ಮತ್ತು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ, ಸರ್ಕಾರವು ಗೋವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ.