Caste Census | ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗದ ಜಾತಿಗಣತಿ ವರದಿ ; ಸಚಿವರ ಅಭಿಪ್ರಾಯ ಸಂಗ್ರಹ ಬಾಕಿ ಹಿನ್ನೆಲೆ ಮುಂದೂಡಿಕೆ
ಭಾರತ ಹಾಗೂ ಪಾಕ್ ಮಧ್ಯೆ ಯುದ್ದದ ಕಾರ್ಮೋಡ ಹಾಗೂ ಇನ್ನೂ ಕೆಲ ಸಚಿವರು ಅಭಿಪ್ರಾಯ ನೀಡದ ಹಿನ್ನೆಲೆಯಲ್ಲಿ ಜಾತಿಗಣತಿ ಚರ್ಚೆ ಮುಂದೂಡಲು ತೀರ್ಮಾನಿಸಲಾಯಿತು.;
ಬಹು ನಿರೀಕ್ಷಿತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಭಾರತ ಹಾಗೂ ಪಾಕಿಸ್ತಾನದ ಯುದ್ಧದ ಕಾರ್ಮೋಡ ಹಿನ್ನೆಲೆಯಲ್ಲಿ ಚರ್ಚೆಯಾಗದೆ ಮುಂದೂಡಿಕೆಯಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಡಾವಳಿಯಲ್ಲಿ ಜನಗಣತಿ ವರದಿಯ ವಿಷಯ ಚರ್ಚೆಗೆ ನಿಗದಿಯಾಗಿತ್ತು.
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಭೀತಿ ಹಿನ್ನೆಲೆಯಲ್ಲಿ ವರದಿ ಕುರಿತು ಚರ್ಚೆಯನ್ನು ಮುಂದಿನ ಸಭೆಗೆ ಮುಂದೂಡಿಕೆ ಆಗುವ ಬಗ್ಗೆ ದ ಫೆಡರಲ್ ಕರ್ನಾಟಕ ಇಂದು ಬೆಳಿಗ್ಗೆ ವರದಿ ಪ್ರಕಟಿಸಿತ್ತು.
ಕೇಂದ್ರ ಸರ್ಕಾರದ ಸಂಪೂರ್ಣವಾಗಿ ಯುದ್ದದ ಪರಿಸ್ಥಿತಿ ನಿಭಾಯಿಸುತ್ತಿದ್ದು, ರಾಜ್ಯದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಪಾಕಿಸ್ತಾನ ಹಾಗೂ ಭಾರತ ಯುದ್ದದ ಮೇಲೆ ಎಲ್ಲರ ಚಿತ್ತವಿದೆ. ಹಾಗಾಗಿ ಆತುರದಲ್ಲಿ ವರದಿ ಜಾರಿ ಮಾಡದಿರಲು ನಿರ್ಧರಿಸಲಾಗಿದೆ ಎನ್ನಲಾಗಿದೆ ಎಂದು ವರದಿ ಮಾಡಿತ್ತು.
ಈಗ ಅದರಂತೆ ಜಾತಿಗಣತಿ ಚರ್ಚೆ ಮುಂದೂಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ವರದಿ ಕುರಿತು ವಿಸ್ತ್ರತ ಚರ್ಚೆ ಅಗತ್ಯವಾಗಿದೆ. ಹಾಗಾಗಿ ಎಲ್ಲ ಸಚಿವರ ಒಮ್ಮತ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ವರದಿ ಜಾರಿ ಕುರಿತು ತೀರ್ಮಾನಿಸಲು ಸಭೆ ನಿರ್ಧರಿಸಿತು.
ಕೇಂದ್ರಸರ್ಕಾರ ಜಾತಿಗಣತಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಅಂಗೀಕಾರ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರೀಕ್ಷಿಸಲಾಗಿತ್ತು.
ಏ. 11ರಂದು ವರದಿಯನ್ನು ಸ್ವೀಕರಿಸಿದ್ದ ರಾಜ್ಯ ಸರ್ಕಾರ ಏ. 17ರಂದು ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ, ಕೆಲ ಸಚಿವರ ಅಭಿಪ್ರಾಯ ಸಂಗ್ರಹಿಸಿತ್ತು.
ಸಂಪುಟ ಸಭೆಯಲ್ಲಿ ವರದಿ ಅಂಕಿ ಅಂಶಗಳಿಗೆ ಕೆಲ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಮೇ 2ರಂದು ಮತ್ತೊಂದು ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರಬಲ ಜಾತಿಗಳ ಒತ್ತಡ ಹಾಗೂ ಇತರೆ ಕಾರಣಗಳಿಂದ ಸಭೆ ಮುಂದೂಡಲಾಗಿತ್ತು.