ಮುಡಾ ಹಗರಣ| ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಇಂದು ತೆರೆ; ಮೈಸೂರಿನಲ್ಲಿ ಬೃಹತ್ ಸಮಾವೇಶ

Update: 2024-08-10 04:51 GMT

ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್‌ ಬೃಹತ್‌ ಜನಾಂದೋಲನ ಸಮಾವೇಶ ನಡೆಸಿದ್ದು, ಅದೇ ವೇದಿಕೆಯಲ್ಲಿ ಶನಿವಾರ (ಆ.10) ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಸಮಾರೋಪ ಸಮಾವೇಶದ ಮೂಲಕ ತೆರೆ ಬೀಳಲಿದೆ.

ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳಲ್ಲಿ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ʼಮೈಸೂರು ಚಲೋʼ ಪಾದಯಾತ್ರೆಯನ್ನು ಒಂದು ವಾರದಿಂದ ನಡೆಸುತ್ತಿರುವ ಬಿಜೆಪಿ- ಜೆಡಿಎಸ್, ಅಂತಿಮ ಘಟ್ಟ ತಲುಪಿವೆ. ಪಾದಯಾತ್ರೆ ಮೈಸೂರು ತಲುಪುವ ಮುನ್ನ ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದರೆ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆಗ್ರಹಿಸಿದ್ದರು.

ಶನಿವಾರ ಈ ಪಾದಯಾತ್ರೆ ಮೈಸೂರು ನಗರ ತಲುಪಿದೆ. ನಗರದ ಕೊಲಂಬಿಯಾ ಏಷಿಯಾ ಜಂಕ್ಷನ್‌‌ನಿಂದ ಪಾದಯಾತ್ರೆ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಿ, ಬೆಳಗ್ಗೆ 11.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಜಮಾವಣೆಯಾಗಲಿದೆ. ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ. ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಆಗಸ್ಟ್ 3ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ ನಡೆಯಿತು. 140 ಕಿ.ಮೀ.ಗೂ ಹೆಚ್ಚು ದೂರ ಹೆಜ್ಜೆ ಹಾಕಿರುವ ನಾಯಕರು, ದಣಿವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ. ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್‌ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಇಟ್ಟಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ.

ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಉದ್ದಕ್ಕೂ ಬರೀ ಸರ್ಕಾರದ ವಿರುದ್ಧದ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದರೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.

ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ. ಮೈಸೂರಿನ ಅಕ್ಕಪಕ್ಕದ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲಾಗುತ್ತಿದೆ.

ಈ ಬಗ್ಗೆ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಅವರು ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ʻʻವಾಲ್ಮೀಕಿ ಹಗರಣ ಮಾಡಿ ದಲಿತರ ಹಣ ಹೊಡೆದು ಗ್ಯಾರಂಟಿಗೆ ಹಣ ಹೊಂದಿಸಬೇಕಿತ್ತಾ? ಬೇರೆ ಜಾತಿಯ ಹಣ ಬೇಕಿಲ್ಲ ಇವರಿಗೆ ಎಂದು ಟೀಕಿಸಿರುವ ವಿಪಕ್ಷ ನಾಯಕ ಆರ್.‌ ಅಶೋಕ್‌, ನಿಮಗೆ ಧೈರ್ಯ ಇದ್ದಿದ್ರೆ ವಿರೋಧ ಪಕ್ಷದಲ್ಲಿದಾಗ ನಮ್ಮ ದಾಖಲೆ ಬಿಡುಗಡೆ ಮಾಡಬೇಕಿತ್ತುʼʼ ಎಂದು ಕಿಡಿಕಾರಿದ್ದಾರೆ.

ʻʻಕಾಂಗ್ರೆಸ್ 14 ತಿಂಗಳ ಕಾಲ ಮಾಡಿದ ಭ್ರಷ್ಟಾಚಾರದ ಪುಸ್ತಕ ನಾವು ಬಿಡುಗಡೆ ಮಾಡುತ್ತೇವೆ. 14 ಅವತಾರಗಳಿವೆ. ಬ್ರಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಮಾಡಿದ್ರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಸದನದಲ್ಲಿ ಮಾತಾಡಲು ನಮಗೆ ಅವಕಾಶ ಕೊಡಬೇಕಿತ್ತು. ಅದಕ್ಕೆ ನಮ್ಮ ಹೋರಾಟʼʼ ಎಂದು ಹೇಳಿದ್ದಾರೆ.

ʻʻಸಿದ್ದರಾಮಯ್ಯ 5 ಗ್ಯಾರಂಟಿ ಜೊತೆಗೆ 50 ಗ್ಯಾರಂಟಿ ತನ್ನಿ. ಎಲ್ಲರಿಗೂ ಕೊಡಿ ನಮ್ಮ ವಿರೋಧ ಇಲ್ಲ. ಸಿದ್ದರಾಮಯ್ಯ ಬಹಳ ಭಯಬೀತರಾಗಿದ್ದಾರೆ. ಪಾಪ ಎರಡೂ ದಿನ ಮನೆಯಲ್ಲೆ ಕುಳಿತಿದ್ರು. ದುಡ್ಡು ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರ ದಾರಿ ತಪ್ಪಿದೆ. ವಾಲ್ಮೀಕಿ ಹಗರಣದ ಇಡಿ, ಸಿಬಿಐ, ತನಿಖೆ ನಡೆಯುತ್ತಿದೆ. ಹಣ ಸೀಜ್ ಮಾಡಿ ಜೈಲಿಗೆ ಹಾಕಿದ್ದಾರೆ. ಮುಡಾ ಹಗರಣದಲ್ಲಿ ಇನ್ನೂ ಯಾರು ಜೈಲಿಗೆ ಹೋಗಿಲ್ಲʼʼ ಎಂದರು.

ಭ್ರಷ್ಟಾಚಾರದ ಬಗ್ಗೆ ತಿಳಿಸುವ ಕೆಲಸ ವಿರೋಧ ಪಕ್ಷದ ಹಕ್ಕು.. ಆದರೆ ಕಾಂಗ್ರೆಸ್ ಪಕ್ಷ ಬೀದಿಗಳಿದು ಹೋರಾಟ ಮಾಡುತ್ತಿದೆ. ಅವರು ವಿಧಾನ ಸಭೆ ಒಳಗೆ ಹೇಳುವುದು ಕರ್ತವ್ಯ. ಸರ್ಕಾರ ಬೀದಿಗಿಳಿದು ನಾನು ಕಳ್ಳ ಅಲ್ಲ ಕಳ್ಳ ಅಲ್ಲ ಎಂದು ಸಾರುತ್ತಿದೆ. ನಮ್ಮದು ಹೋರಾಟ, ಕಾಂಗ್ರೆಸ್ ಅವರದು ಹಾರಾಟ. ಮಂತ್ರಿಗೆ ಇನ್ ಚಾರ್ಜ್ ಕೊಟ್ಟು ಸಭೆ ಮಾಡ್ತಾರೆ. ಕಾಂಗ್ರೆಸ್ ನಾಟಕ ಆಡುತ್ತಿದೆ ಎಂದು ಟೀಕಿಸಿದ್ದಾರೆ.

Tags:    

Similar News