Siddaramaiah vs Governor|ರಾಜ್ಯ ಸರ್ಕಾರ - ರಾಜಭವನದ ಸಂಘರ್ಷ ರಾಷ್ಟ್ರಪತಿಗಳ ಅಂಗಳಕ್ಕೆ

ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.;

Update: 2025-06-24 14:38 GMT

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಚರ್ಚಿಸಿದರು.

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜಭವನದ ಸಂಘರ್ಷ ಇದೀಗ ರಾಷ್ಟ್ರಪತಿಗಳ ಅಂಗಳ ತಲುಪಿದೆ.

ವಿಧಾನಮಂಡಲದಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಆಡಳಿತದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಇದು ಸರ್ಕಾರ ಹಾಗೂ ರಾಜಭವನದ ಮಧ್ಯೆ ಪದೇ ಪದೇ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಅಂಕಿತಕ್ಕೆ ಕಳುಹಿಸಿಕೊಟ್ಟ ಕೆಲ ಮಸೂದೆಗಳನ್ನು ರಾಜ್ಯಪಾಲರು ಎರಡು-ಮೂರು ಬಾರಿ ವಾಪಸ್ ಕಳುಹಿಸಿದ್ದರು. ಸೂಕ್ತ ತಿದ್ದುಪಡಿ ನಂತರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಷ್ಟ್ರಪತಿಗಳ ಭೇಟಿ ಕುತೂಹಲ ಮೂಡಿಸಿದೆ.

ಮಂಗಳವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಸೂದೆಗಳ ಅಂಕಿತ ಹಾಕುವ ವಿಚಾರವಾಗಿ ಚರ್ಚಿಸಿದರು. ಅಲ್ಲದೇ ರಾಜ್ಯಪಾಲರ ವಿಳಂಬ ಧೋರಣೆ ಕುರಿತು ಮೌಖಿಕ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ರಾಜ್ಯಪಾಲರು ಅಂಕಿತ ಹಾಕದ ಮಸೂದೆಗಳು

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ, 2015

ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ 2024

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024

ನೋಟರಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ, 2025

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ (ತಿದ್ದುಪಡಿ) ಕಾಯ್ದೆ, 2024 ಈ ಕಾಯ್ದೆಗಳನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ.

ರಾಜ್ಯಪಾಲರ ನಡೆಗೆ ಸುಪ್ರೀಂಕೋರ್ಟ್ ಅಸಮಾಧಾನ

ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾಗಿರುವ ವಿಧಾನ ಮಂಡಲದ ಸದಸ್ಯರು ರಾಜ್ಯದ ಜನರ ಒಳಿತನ್ನು ಖಾತರಿಪಡಿಸುತ್ತಾರೆ. ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಯಾವುದೇ ವಿವೇಚನಾ ಅಧಿಕಾರ ಹೊಂದಿರುವುದಿಲ್ಲ. ಅವರು ರಾಜ್ಯದ ಮಂತ್ರಿ ಪರಿಷತ್ತಿನ ಸಲಹೆ ಮತ್ತು ನೆರವಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರ ವರ್ಸಸ್‌ ರಾಜ್ಯಪಾಲರು ಪ್ರಕರಣದಲ್ಲಿ ಆದೇಶ ನೀಡಿತ್ತು. 

ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ಅಲ್ಲಿನ ಸರ್ಕಾರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದ 10 ಮಸೂದೆಗಳನ್ನು ತಡೆಹಿಡಿದು, ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದ್ದರು. ಈ ಕುರಿತು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಆಗ ರಾಜ್ಯಪಾಲರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ಮಸೂದೆಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸಿತ್ತು. 

ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಿಂದಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರ ವಿರುದ್ಧದ ಪ್ರಕರಣಗಳಲ್ಲಿ ಮೇಲುಗೈ ಸಾಧಿಸಿದಂತಾಗಿತ್ತು.    

ಸುಪ್ರೀಂಕೋರ್ಟ್ ಏನು ಹೇಳಿತ್ತು? 

ರಾಜ್ಯಪಾಲರ ಅಂಕಿತಕ್ಕೆ ಸಲ್ಲಿಸುವ ಮಸೂದೆಯನ್ನು ಮೂರು ತಿಂಗಳೊಳಗೆ ವಿಧಾನಸಭೆಗೆ ಮರು ಪರಿಶೀಲನೆಗೆ ಕಳುಹಿಸಿ ಮತ್ತೆ ಒಂದು ತಿಂಗಳಲ್ಲಿ ಅಂಕಿತ ಹಾಕದಿದ್ದರೆ ಅದನ್ನು ಅನುಮತಿ ಪಡೆದಿದೆ ಎಂದು ಭಾವಿಸತಕ್ಕದ್ದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಸಂವಿಧಾನದ 142ನೇ ವಿಧಿಯಡಿ ತನಗೆ ಇರುವ ಅಸಾಮಾನ್ಯ ಅಧಿಕಾರ ಬಳಸಿಕೊಂಡಿರುವ ಸುಪ್ರೀಂಕೋರ್ಟ್, ತಮಿಳುನಾಡಿನ ರಾಜ್ಯಪಾಲರಿಗೆ ಮರು ಸಲ್ಲಿಕೆಯಾಗಿದ್ದ ಮಸೂದೆಗಳು ಅಂಕಿತ ಪಡೆದಿವೆ ಎಂದು ಭಾವಿಸಬೇಕು ಎಂದು ಆದೇಶ ನೀಡಿತ್ತು.

ವಿಧಾನಮಂಡಲದ ತೀರ್ಮಾನಕ್ಕೆ ಅಡ್ಡಿ ಮಾಡಬಾರದು, ಜನರ ಇಚ್ಛೆಗೆ ಅಡ್ಡಿ ಉಂಟು ಮಾಡಬಾರದು ಎಂಬ ಪ್ರಜ್ಞೆ ರಾಜ್ಯಪಾಲರಿಗೆ ಇರಬೇಕು ಎಂದು ಹೇಳಿತ್ತು.

ಕೋರ್ಟ್ ನಿಗದಿ ಮಾಡಿದ ಕಾಲಮಿತಿ

ಸಂವಿಧಾನದ 200ನೇ ವಿಧಿಯ ಪ್ರಕಾರ ರಾಜ್ಯಪಾಲರು ಯಾವುದಾದರೂ ಮಸೂದೆಗೆ ಸಹಿ ಹಾಕಬಹುದು, ಹಾಕದೆಯೂ ಇರಬಹುದು. ಇಲ್ಲವೇ ರಾಷ್ಟ್ರಪತಿಯವರ ಪರಿಶೀಲನೆಗೆ ಇರಿಸಬಹುದು. ಈ ವಿಧಿಯು ಮಸೂದೆ ಕುರಿತು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಯಾವುದೇ ಕಾಲಮಿತಿ ಸೂಚಿಸಿಲ್ಲ. ಮಸೂದೆಗಳ ಕುರಿತು ಕ್ರಮ ಕೈಗೊಳ್ಳದಿರಲು 200ನೇ ವಿಧಿ, ಅವಕಾಶ ಮಾಡಿಕೊಡುತ್ತದೆ ಎಂದು ಭಾವಿಸಬಾರದು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿತ್ತು.

ಮಸೂದೆಗೆ ಅಂಕಿತ ಹಾಕದೇ ರಾಷ್ಟ್ರಪತಿ ಯವರ ಪರಿಶೀಲನೆಗೆ ಕಳುಹಿಸುವುದಿದ್ದರೆ ಗರಿಷ್ಠ 1 ತಿಂಗಳಲ್ಲಿ ಮಾಡಬೇಕು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದೇ ತಡೆಹಿಡಿದರೆ, ಮೂರು ತಿಂಗಳ ಒಳಗೆ ವಿಧಾನಸಭೆಗೆ ಮರಳಿಸಬೇಕು. ಸಭೆಯು ಮಸೂದೆಯನ್ನು ಮತ್ತೊಮ್ಮೆ ಪರಿಶೀಲಿಸಿ ರಾಜ್ಯಪಾಲರಿಗೆ ಸಲ್ಲಿಸಿದಾಗ ಒಂದು ತಿಂಗಳಲ್ಲಿ ಅಂಕಿತ ಹಾಕಬೇಕು ಎಂದು ಕಾಲಮಿತಿ ನೀಡಿತ್ತು.

ಸುಪ್ರೀಂಕೋರ್ಟ್‌ಗೆ 14 ಪ್ರಶ್ನೆ ಹಾಕಿದ್ದ ರಾಷ್ಟ್ರಪತಿ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಸೂದೆಗಳ ಕುರಿತು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತೆಗೆದುಕೊಳ್ಳಲು ಗಡುವು ನಿಗದಿಪಡಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಪ್ರಶ್ನೆಗಳನ್ನು ಕೇಳಿದ್ದು, ಸಂವಿಧಾನದಲ್ಲಿ ಅಂತಹ ಯಾವುದೇ ಗಡುವು ಇಲ್ಲದಿರುವಾಗ ಸುಪ್ರೀಂಕೋರ್ಟ್ ತೀರ್ಪು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

Tags:    

Similar News