ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್: ಓಲಾ, ಊಬರ್, ರಾಪಿಡೊ ಸೇವೆಗಳಿಗೆ ಸದ್ಯಕ್ಕಿಲ್ಲ ಪರಿಹಾರ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಬೈಕ್ ಟ್ಯಾಕ್ಸಿ ಸೇವೆಗಳ ಕುರಿತು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.;
ಬೆಂಗಳೂರಿನ ರಸ್ತೆಗಳಲ್ಲಿ ಸಾಮಾನ್ಯವಾಗಿದ್ದ ಬೈಕ್ ಟ್ಯಾಕ್ಸಿ ಸೇವೆಗಳು ಶೀಘ್ರವೇ ಸ್ಥಗಿತಗೊಳ್ಳಲಿವೆ. ಮೋಟಾರು ವಾಹನ ಕಾಯ್ದೆಯಡಿ ರಾಜ್ಯ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸುವವರೆಗೆ ಓಲಾ, ಊಬರ್ ಮತ್ತು ರಾಪಿಡೊ ಕಂಪನಿಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠ ಶುಕ್ರವಾರ ಸ್ಪಷ್ಟಪಡಿಸಿದೆ. ಈ ಮೂಲಕ, ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಕೋರಿದ್ದ ಕಂಪನಿಗಳ ಮಧ್ಯಂತರ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಬೈಕ್ ಟ್ಯಾಕ್ಸಿ ಸೇವೆಗಳ ಕುರಿತು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.
ಏಕೆ ಈ ತಡೆ?
ಕಂಪನಿಗಳ ಪರ ವಕೀಲರು, ದೇಶದ ಇತರ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ದ್ವಿಚಕ್ರ ವಾಹನಗಳು ಪರಿಸರ ಸ್ನೇಹಿ ಎಂದು ವಾದಿಸಿದರು. ಆದರೆ, ನ್ಯಾಯಪೀಠ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ದ್ವಿಚಕ್ರ ವಾಹನಗಳನ್ನು ಬಾಡಿಗೆ ವಾಹನಗಳಾಗಿ ಬಳಸುವುದು ಮತ್ತು ದೊಡ್ಡ ವಾಹನಗಳನ್ನು ಸಂಚಾರ ದಟ್ಟಣೆಯಲ್ಲಿ ಚಲಾಯಿಸುವುದು ವಿಭಿನ್ನ ಎಂದಿತು. ದೇಶದ ಕೇವಲ 8 ರಾಜ್ಯಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿಗೆ ಅನುಮತಿ ಇದೆ ಎಂಬುದನ್ನು ಸಹ ಗಮನಕ್ಕೆ ತರಲಾಯಿತು.
ಸರಕಾರದ ನಿಲುವು ನಿರ್ಣಾಯಕ
"ಸರ್ಕಾರ ನಿಯಮಗಳನ್ನು ರೂಪಿಸಲು ಸಿದ್ಧವಿದ್ದರೆ, ನಾವು ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಆದೇಶ ನೀಡಬಹುದಿತ್ತು. ಆದರೆ, ಸರ್ಕಾರ ನಿಯಮಗಳನ್ನು ರೂಪಿಸುತ್ತಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಈ ಆದೇಶವು ಬೈಕ್ ಟ್ಯಾಕ್ಸಿಗಳ ಮೇಲೆ ಅವಲಂಬಿತರಾಗಿದ್ದ ಸಾವಿರಾರು ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ತಕ್ಷಣದ ಪರಿಣಾಮ ಬೀರಲಿದೆ. ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಎಷ್ಟು ಬೇಗನೆ ರೂಪಿಸುತ್ತದೆ ಎಂಬುದರ ಮೇಲೆ ಈ ಸೇವೆಗಳ ಪುನರಾರಂಭ ಅವಲಂಬಿತವಾಗಿದೆ. ಮುಂದಿನ ವಿಚಾರಣೆಯನ್ನು ಜೂನ್ 24 ಕ್ಕೆ ಮುಂದೂಡಲಾಗಿದೆ.