ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಆತಂಕ: ಬೈಕ್ ಟ್ಯಾಕ್ಸಿ ನಿಷೇಧದ ನಡುವೆ ಹೊಸ ಸಮಸ್ಯೆ
ರಾಜ್ಯದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿಗಳ ನಿಷೇಧದಂತೆ, ಗಿಗ್ ಕಾರ್ಮಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುವಿಕೆ ಮೇಲೆ ನಿಯಂತ್ರಣ ವಿಧಿಸಿದರೆ, ಆಹಾರ, ದಿನಸಿ, ಪಾರ್ಸೆಲ್ ಸೇವೆಗಳ ವಿತರಣೆ ವ್ಯವಸ್ಥೆಯು ಅಸ್ತವ್ಯಸ್ತವಾಗಬಹುದು.;
ಸಾಂದರ್ಭಿಕ ಚಿತ್ರ
ಕರ್ನಾಟಕದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿಗಳ ನಿಷೇಧದ ತಲೆ ಬಿಸಿಯಿದ್ದು, ಈ ನಡುವೆ ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ, ಝೊಮ್ಯಾಟೊ ಮೊದಲಾದ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್ ಕಾರ್ಮಿಕರರಿಗೂ ಆತಂಕವೊಂದು ಶುರುವಾಗಿದೆ,. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಇತ್ತೀಚಿನ ಪ್ರಕಟಣೆಯೊಂದು ಈ ಆತಂಕಕ್ಕೆ ಕಾರಣವಾಗಿದೆ.
ಜೂನ್ 10 ರಂದು ಕೇಂದ್ರ ಸಚಿವಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ, ಖಾಸಗಿ ವಾಹನಗಳಲ್ಲಿ ಇ-ಕಾಮರ್ಸ್ ವಸ್ತುಗಳ ಸಾಗಣೆ, ಪ್ರಯಾಣಿಕರ ಸುರಕ್ಷತೆ, ಟ್ರಾಫಿಕ್ ಸಮಸ್ಯೆ, ವಿಮೆ ಹಾಗೂ ನೋಂದಣಿಯ ಕೊರತೆ ಮುಂತಾದ ಕಾರಣಗಳಿಂದ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇದರ ಜೊತೆಗೆ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಗಿಗ್ ಕಾರ್ಮಿಕರ ಭವಿಷ್ಯ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿಗಳ ನಿಷೇಧದಂತೆ, ಗಿಗ್ ಕಾರ್ಮಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುವುದರ ಮೇಲೆ ನಿಯಂತ್ರಣ ವಿಧಿಸಿದರೆ, ಆಹಾರ, ದಿನಸಿ, ಪಾರ್ಸೆಲ್ ಸೇವೆಗಳ ವಿತರಣಾ ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಗಬಹುದು ಎಂಬ ಆತಂಕ ಉಂಟಾಗಿದೆ. ಇದು ಲಕ್ಷಾಂತರ ಗಿಗ್ ಕಾರ್ಮಿಕರ ಉದ್ಯೋಗ ಮತ್ತು ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ಭೀತಿ ಹುಟ್ಟುಹಾಕಿದೆ. ಈ ನೀತಿಯು ಕ್ವಿಕ್ ಕಾಮರ್ಸ್ ಉದ್ಯಮ, ಬಂಡವಾಳ ಹೂಡಿಕೆ, ಸ್ಟಾರ್ಟ್ಅಪ್ಗಳ ಬೆಳವಣಿಗೆ ಮತ್ತು ಯುವ ಉದ್ಯೋಗಿಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಖಾಸಗಿ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಲಕ್ಷಾಂತರ ಗಿಗ್ ಕಾರ್ಮಿಕರು ಆದಾಯ ಕಳೆದುಕೊಳ್ಳುವ ಸ್ಥಿತಿಯನ್ನು ಎದುರಿಸಬೇಕಾಗಬಹುದು.
ಸಾರಿಗೆ ಸಚಿವರ ಸ್ಪಷ್ಟನೆ
ಗಿಗ್ ಕಾರ್ಮಿಕರ ಈ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, "ನಾವು ಬೈಕ್ನಲ್ಲಿ ಜನರನ್ನು ಪ್ರಯಾಣಿಸಲು ಮಾತ್ರ ನಿರ್ಬಂಧ ಹೇರಿದ್ದೇವೆ. ಆದರೆ, ಆಹಾರ ವಿತರಣೆಯಂತಹ ಸೇವೆಗಳಿಗಾಗಿ ಸ್ವಿಗ್ಗಿ, ಝೊಮ್ಯಾಟೊ, ಇತರೆ ಪ್ಲಾಟ್ಫಾರ್ಮ್ಗಳ ಕಾರ್ಯಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರ ಈ ಹೇಳಿಕೆಯು ಗಿಗ್ ಕಾರ್ಮಿಕರ ಮಧ್ಯೆ ಉಂಟಾಗಿರುವ ಆತಂಕವನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವ ಸಾಧ್ಯತೆಯಿದೆ. ಆದರೂ, ಕೇಂದ್ರದ ಅಧಿಸೂಚನೆಯಲ್ಲಿರುವ 'ಸಾರ್ವಜನಿಕರ ಜೀವಕ್ಕೆ ಅಪಾಯ' ಎಂಬ ಅಂಶ ಮತ್ತು 'ಕಠಿಣ ಕ್ರಮ'ದ ಸೂಚನೆ ಭವಿಷ್ಯದಲ್ಲಿ ಯಾವ ರೀತಿಯ ನೀತಿ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸ