ಬೆಂಗಳೂರು ವಿವಿಯಲ್ಲಿ ಪರಿಶಿಷ್ಟರ ಪ್ರಾತಿನಿಧ್ಯ ಕುಗ್ಗಿಸುವ ಆರೋಪ; 67 ಅಧ್ಯಾಪಕರಿಂದ ಕುಲಪತಿಗೆ ಪತ್ರ
ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತು ಬೇರೆ ವಿಶ್ವ ವಿದ್ಯಾಲಯಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಂಡಿರುವುದರಿಂದ ಇಲ್ಲಿಯೇ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.;
ಬೆಂಗಳೂರು ವಿಶ್ವವಿದ್ಯಾನಿಲಯ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ʻಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯವನ್ನು ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಹಲವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಲಪತಿ ಅವರು 15 ದಿನಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಂಗಳೂರು ವಿಶ್ವವಿದ್ಯಾಲಯದ 67 ಅಧ್ಯಾಪಕರು ಕುಲಪತಿಗೆ ಪತ್ರ ಬರೆದಿದ್ದಾರೆ.
'ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಬ್ಯಾಕ್ಲಾಗ್ ಹುದ್ದೆಗಳು ಇವೆ. ಅವುಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾಲಯವು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ಬೇರೆ ವಿಶ್ವವಿದ್ಯಾಯಗಳಿಂದ ಅಧ್ಯಾಪಕರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಕುಗ್ಗಿಸುವ ಯತ್ನ ನಡೆಯುತ್ತಿದೆ' ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಪ್ರಾಧ್ಯಾಪಕರಾದ ಡಾ.ಎಂ.ಶಶಿಧರ್, ಪ್ರೊ.ಮುರಳೀಧರ ಬಿ.ಎಲ್., ಪ್ರೊ.ಆರ್.ಲಕ್ಷ್ಮೀನಾರಾಯಣ, ಡಾ.ಲಕ್ಷ್ಮೀಶ ಟಿ.ಆರ್., ಪ್ರೊ.ಡಿ.ಸಿ.ಮೋಹನ, ಡಾ.ಟಿ.ಜಿ.ಉಮೇಶ, ಡಾ.ವಾಣಿಶ್ರೀ ಕೊಪ್ಪದ, ಡಾ.ಮಂಜುನಾಥ ಎಚ್., ಡಾ.ಸುರೇಶ್ ಆರ್, ಡಾ.ಎಸ್.ನಾಗರತ್ನಮ್ಮ, ಡಾ.ವೀಣಾದೇವಿ, ಡಾ.ಆರ್.ಗೀತಾ, ಡಾ.ಎಸ್.ವೈ.ಸುರೇಂದ್ರ ಕುಮಾರ್, ಡಾ.ರಾಘವೇಂದ್ರ ಎಚ್.ಕೆ. ಡಾ.ಡಿ.ಕೆ.ಪ್ರಭಾಕರ್, ಡಾ.ರೇಣುಕಾ ಸಿ.ಜಿ. ಡಾ.ಶಿವಣ್ಣ ಎಸ್. ಪ್ರೊ.ಪಿ.ಸಿ.ನಾಗೇಶ್, ಪ್ರೊ.ಕೃಷ್ಣಸ್ವಾಮಿ, ಡಾ.ಕೆ.ರಾಮಕೃಷ್ಣಯ್ಯ ಡಾ.ಜಿ.ಕೃಷ್ಣಮೂರ್ತಿ ಸೇರಿದಂತೆ 67 ಪ್ರಾಧ್ಯಾಪಕರು ಪತ್ರದಲ್ಲಿ ಸಹಿ ಹಾಕಿದ್ದಾರೆ.
ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತು ಬೇರೆ ವಿಶ್ವ ವಿದ್ಯಾಲಯಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಂಡಿರುವುದರಿಂದ ಇಲ್ಲಿಯೇ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಹುದ್ದೆ ಇಲ್ಲದ ಹೊರತಾಗಿಯೂ ಶಿಕ್ಷಕರನ್ನು ವರ್ಗಾಯಿಸಿಕೊಂಡರೆ ಬೆಂವಿವಿಗೆ ಮುಂದಿನ ದಿನಗಳಲ್ಲಿ ನೇಮಕಕ್ಕೆ ತೊಂದರೆಯಾಗುತ್ತದೆ. ವರ್ಗಾವಣೆಯಾದ ಶಿಕ್ಷಕರಲ್ಲಿ ಯಾರೊಬ್ಬರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿಲ್ಲ ಎಂದು ತಿಳಿಸಿದ್ದಾರೆ.
ಈವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಯಾವ ರೋಸ್ಟರ್ ಬಿಂದುಗೆ ಸೇರಿಸಲಾಗಿದೆ ಎಂಬುದನ್ನು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿಲ್ಲ. ಇದು ಸರಕಾರದ ಮೀಸಲಾತಿ ನೀತಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ಬೆಂವಿವಿಯಲ್ಲಿ ಖಾಲಿಯಿರುವ 22 ಶಿಕ್ಷಕರ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲು ವಿವಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಹುಸಂಖ್ಯಾತ ದಲಿತರಿರುವ ವಿವಿಯಲ್ಲಿ ದಲಿತರ ಮಾನ್ಯತೆಯನ್ನು ಕುಗ್ಗಿಸಲು, ರೋಸ್ಟರ್ ಪದ್ಧತಿಯನ್ನು ಧಿಕ್ಕರಿಸಿ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ವಿವಿಯ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.