ಚಿನ್ನಸ್ವಾಮಿ ಸ್ಟೇಡಿಯಮ್ ದುರಂತ: ಆರ್ಸಿಬಿ, ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲು
ಆರ್ಸಿಬಿ ತಂಡದ ವಿಜಯೋತ್ಸವದ ಆಯೋಜನೆಯನ್ನು ಡಿಎನ್ಎ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ವಹಿಸುತ್ತಿದ್ದರೆ, ಈ ಕಾರ್ಯಕ್ರಮವನ್ನು ಕೆಎಸ್ಸಿಎ ಆಯೋಜಿಸಿತ್ತು ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.;
ಐಪಿಎಲ್ ಚಾಂಪಿಯನ್ಶಿಪ್ ವಿಜಯೋತ್ಸವ ದುರಂತವಾಗಿ ಪರಿಣಮಿಸಿದ ಬೆನ್ನಲ್ಲೇ, ಬೆಂಗಳೂರು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ, ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಕಾರ್ಯಕ್ರಮ ನಿರ್ವಹಣಾ ಸಂಸ್ಥೆ ಡಿಎನ್ಎ ಎಂಟರ್ಟೈನ್ಮೆಂಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಆಡಳಿತ ಸಮಿತಿ ಹಾಗೂ ಇತರರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ಆರ್ಸಿಬಿ ತಂಡದ ವಿಜಯೋತ್ಸವದ ಆಯೋಜನೆಯನ್ನು ಡಿಎನ್ಎ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ವಹಿಸುತ್ತಿದ್ದರೆ, ಈ ಕಾರ್ಯಕ್ರಮವನ್ನು ಕೆಎಸ್ಸಿಎ ಆಯೋಜಿಸಿತ್ತು ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಏತನ್ಮಧೆ, ಸರ್ಕಾರರಿಂದ ನೇಮಕಗೊಂಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ. ಜಗದೀಶ ಅವರು ಕೆಎಸ್ಸಿಎ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಾಗೂ ಆರ್ಸಿಬಿ ತಂಡದಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಹಲವು ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
11 ಜನರ ಬಲಿ ಪಡೆದ ಆರ್ಸಿಬಿಯ ಮೊದಲ ವಿಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ವೇಳೆ ಈ ಭೀಕರ ಕಾಲ್ತುಳಿತ ಸಂಭವಿಸಿದ್ದು, ಆರ್ಸಿಬಿ ತಂಡದ ಮೊದಲ ಐಪಿಎಲ್ ಗೆಲುವಿನ ಸಂಭ್ರಮವು ದುರಂತಮಯವಾಗಿ ಅಂತ್ಯಗೊಂಡಿದೆ. ಈ ಘಟನೆಯಲ್ಲಿ ಕನಿಷ್ಠ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಫ್ಐಆರ್ ದಾಖಲಾಗಿರುವುದರಿಂದ, ದುರಂತಕ್ಕೆ ನಿಜವಾದ ಹೊಣೆಗಾರಿಕೆ ಯಾರ ಮೇಲೆ ಬೀಳುತ್ತದೆ ಮತ್ತು ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಯಾವ ಕಾನೂನು ಕ್ರಮಗಳು ಜಾರಿಯಾಗುತ್ತವೆ ಎಂಬ ಕೌತುಕ ಸೃಷ್ಟಿಯಾಗಿದೆ.