ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ಅಮಾನತು: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ
ಕಮಿಷನರ್ ದಯಾನಂದ ಮತ್ತು ಅವರ ತಂಡವು ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿದ್ದರು. ಆದರೆ, ಈ ಡೆತ್ ಮಾರ್ಚ್ನ ಆಯೋಜನೆಯಲ್ಲಿ ನಿಯಂತ್ರಿಸಲಾಗದ ಉಪಮುಖ್ಯಮಂತ್ರಿಯೇ ಪ್ರಮುಖ ಅಪರಾಧಿ. ಇದು ಕರ್ನಾಟಕದ ಎಲ್ಲರಿಗೂ ತಿಳಿದಿದೆ" ಎಂದು ಕಿಡಿಕಾರಿದ್ದಾರೆ.;
ಆರ್ಸಿಬಿ ಐಪಿಎಲ್ ವಿಜಯೋತ್ಸವದ ಸಮಾರಂಭದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರ ಅಮಾನತುಗೊಳಿಸಿರುವುದಕ್ಕೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವನ್ನು ಅವರು "ಕರ್ನಾಟಕ ಪೊಲೀಸ್ ಇತಿಹಾಸದ ಅತ್ಯಂತ ಕರಾಳ ದಿನ" ಎಂದು ಬಣ್ಣಿಸಿದ್ದಾರೆ.
ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಆರ್ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 56 ಮಂದಿ ಗಾಯಗೊಂಡಿದ್ದರು. ಈ ಘಟನೆಯ ಹೊಣೆ ಹೊತ್ತು ಸರ್ಕಾರವು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಆದರೆ, ಈ ದುರಂತಕ್ಕೆ ಸರ್ಕಾರವೇ ನೇರವಾಗಿ ಹೊಣೆಗಾರ ಎಂದು ಭಾಸ್ಕರ್ ರಾವ್ ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಭಾಸ್ಕರ್ ರಾವ್, "ಸತ್ಯವನ್ನು ಹೇಳಿದ್ದಕ್ಕಾಗಿ ಇದು ಬಹುಮಾನವೇ? ಕಮಿಷನರ್ ದಯಾನಂದ ಮತ್ತು ಅವರ ತಂಡವು ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿದ್ದರು. ಆದರೆ, ಈ ಡೆತ್ ಮಾರ್ಚ್ನ ಆಯೋಜನೆಯಲ್ಲಿ ನಿಯಂತ್ರಿಸಲಾಗದ ಉಪಮುಖ್ಯಮಂತ್ರಿಯೇ ಪ್ರಮುಖ ಅಪರಾಧಿ. ಇದು ಕರ್ನಾಟಕದ ಎಲ್ಲರಿಗೂ ತಿಳಿದಿದೆ" ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿರುವ ರಾವ್, "ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕರಾಗಿ, ಹೇಡಿಯಾಗಿ ಮತ್ತು ಭಯಭೀತರಾಗಿ ಕಂಡಿಲ್ಲ. ಸರ್ಕಾರವು ತನ್ನ ಕೈಗಳ ಮೇಲೆ ರಕ್ತವನ್ನು ಮೆತ್ತಿಕೊಂಡಿದೆ. ಇದೀಗ ತನ್ನ ಮೆದುಳನ್ನೂ ಕಳೆದುಕೊಂಡಿದೆ. ಸರ್ಕಾರವು ಈಗ ವಿಪತ್ತಿನ ಸ್ಥಿತಿಯಲ್ಲಿದೆ" ಎಂದು ತೀವ್ರ ಆರೋಪ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಸಲಹೆಯನ್ನು ಮೀರಿ ಸರ್ಕಾರವು ಈ ಸಮಾರಂಭವನ್ನು ಆತುರದಲ್ಲಿ ಆಯೋಜಿಸಿತು ಎಂದು ಹಲವರು ದೂರಿದ್ದಾರೆ. ಈ ಘಟನೆಯ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದ್ದು, ಒಂದು ಸದಸ್ಯರ ತನಿಖಾ ಆಯೋಗವನ್ನೂ ರಚಿಸಲಾಗಿದೆ. ಆರ್ಸಿಬಿ, ಕೆಎಸ್ಸಿಎ ಮತ್ತು ಈವೆಂಟ್ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.