Bangalore Stampede |ಪೊಲೀಸರು ಬೇಡವೆಂದರೂ ವಿಧಾನಸೌಧ ಮೆಟ್ಟಿಲಲ್ಲೇ ಸಮಾರಂಭಕ್ಕೆ ಸರ್ಕಾರ ಅನುಮತಿ
ವಿಧಾನಸೌಧದ ಎದುರು ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈಗಾಗಲೇ ಸಿಬ್ಬಂದಿ ಕೊರತೆ ಇರುವುದರಿಂದ ಭದ್ರತೆ ಒದಗಿಸಲು ಹೊರಗಡೆಯಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ಜೂ.4 ರಂದು ಡಿಸಿಪಿ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.;
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ ಸಿಬಿ ಆಟಗಾರರಿಗೆ ಆಯೋಜಿಸಿದ್ದ ಸರ್ಕಾರಿ ಸನ್ಮಾನಕ್ಕೂ ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಏಕಪಕ್ಷಿಯವಾಗಿ ಸರ್ಕಾರವೇ ಕಾರ್ಯಕ್ರಮ ಆಯೋಜಿಸಿದ್ದ ಸಂಗತಿ ಬಹಿರಂಗವಾಗಿದೆ.
ಕಾರ್ಯಕ್ರಮ ಆಯೋಜನೆ ಕುರಿತ ಅಭಿಪ್ರಾಯ ತಿಳಿಸಿದ್ದ ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಕರಿಬಸನಗೌಡ ಅವರು ಈ ಸಂಬಂಧ ಡಿಪಿಎಆರ್ ಕಾರ್ಯದರ್ಶಿಗೆ ಬರೆದ ಪತ್ರ ವೈರಲ್ ಆಗಿದೆ.
ವಿಧಾನಸೌಧದ ಎದುರು ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈಗಾಗಲೇ ಸಿಬ್ಬಂದಿ ಕೊರತೆ ಇರುವುದರಿಂದ ಭದ್ರತೆ ಒದಗಿಸಲು ಹೊರಗಡೆಯಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ಜೂ.4 ರಂದು ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.
ವಿಧಾನಸೌಧ ಪ್ರವೇಶಿಸುವ ಸಾರ್ವಜನಿಕರಿಗೆ ಆನ್ ಲೈನ್ ಹಾಗೂ ಆಫ್ ಲೈನ್ ಪಾಸ್ ನಿರ್ಬಂಧಿಸಬೇಕು. ಸಚಿವಾಲಯದ ಸಿಬ್ಬಂದಿಯು ತಮ್ಮ ಸಂಬಂಧಿಕರನ್ನು ಕರೆತರದಂತೆ ಆದೇಶಿಸಬೇಕು. ಅಲ್ಲದೇ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಧ್ಯಾಹ್ನದ ಮೇಲೆ ರಜೆ ನೀಡಬೇಕು. ವೇದಿಕೆ ಮೇಲೆ ತಂಡದ ಅಟಗಾರರು, ಸಿಎಂ, ಡಿಸಿಎಂ ಅವರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ, ಪೊಲೀಸರ ಯಾವುದೇ ಅಭಿಪ್ರಾಯ ಪರಿಗಣಿಸದೇ ಡಿಪಿಎಆರ್ ಕಾರ್ಯಕ್ರಮಕ್ಕೆ ಅನುಮತಿ ನೀಡಿತ್ತು. ವಿಪರ್ಯಾಸವೆಂದರೆ ಪೊಲೀಸ್ ಇಲಾಖೆಯ ಯಾವ ಅಭಿಪ್ರಾಯವನ್ನೂ ಸ್ವೀಕರಿಸದೇ ತದ್ವಿರುದ್ದವಾಗಿ ನಡೆದುಕೊಂಡಿತ್ತು.
ಜೂನ್ 3ರಂದು ಕೆಎಸ್ ಸಿಎ ಅನುಮತಿ ಕೋರಿ ಡಿಪಿಎಆರ್ ಗೆ ಬರೆದಿದ್ದ ಪತ್ರಕ್ಕೆ ಭದ್ರತಾ ವಿಚಾರವಾಗಿ ಅಭಿಪ್ರಾಯ ನೀಡುವಂತೆ ಭದ್ರತಾ ವಿಭಾಗದ ಡಿಸಿಪಿಗೆ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದರು. ಇದಕ್ಕೆ ಈ ಮೇಲಿನಂತೆ ಡಿಸಿಪಿ ಕರಿ ಬಸನಗೌಡ ಅವರು ಪ್ರತಿಕ್ರಿಯೆ ನೀಡಿದ್ದರು.
ಡಿಸಿಪಿ ಬರೆದ ಪತ್ರದಲ್ಲಿ ಏನಿದೆ?
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ ಅಭಿಮಾನಿ ಬಳಗ ದೇಶ್ಯಾದ್ಯಂತ ಇದೆ
- ಆತುರದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇದೆ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಒದಗಿಸುವುದು ಕಷ್ಟವಾಗಲಿದೆ.
-ವಿಧಾನಸೌಧದ ಸಚಿವಾಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕುಟುಂಬದವರನ್ನು ಕರೆತರುವ ಸಾಧ್ಯತೆಯಿದೆ. ಕರೆತರದಂತೆ ಸೂಚಿಸಿ, ಮಧ್ಯಾಹ್ನದ ನಂತರ ರಜೆ ನೀಡಲು ಆದೇಶಿಸಬೇಕು.
- ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಬೇಕು. ವಿಧಾನಸೌಧ ಕಟ್ಟಡವು ವೈಟಲ್ ಇನ್ಸ್ಟಾಲೇಶನ್ ಕಟ್ಟಡವಾಗಿದ್ದು, ಸಿಸಿಟಿವಿ ಅವಶ್ಯಕತೆ ಹೆಚ್ಚಾಗಿದೆ.
- ವೇದಿಕೆಯ ಮೇಲೆ ಆಟಗಾರರು ಹಾಗೂ ಮುಖ್ಯಮಂತ್ರಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಹಾಗಾಗಿ ಲೋಕೋಪಯೋಗಿ ಇಲಾಖೆಯಿಂದ ಮುಂಚಿತವಾಗಿಯೇ ವೇದಿಕೆ ಪರೀಕ್ಷಿಸಬೇಕು.
- ವಿದ್ಯುತ್ ಉಪಕರಣಗಳು ಉಪಯೋಗಿಸುತ್ತಿದ್ದು ಸಂಬಂಧಪಟ್ಟ ವಿದ್ಯುತ್ ವಿಭಾಗ ಫಿಟ್ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಮುಖ್ಯಮಂತ್ರಿ ಹಾಗೂ ರಾಜಕಾರಣಿಗಳು ಬರುವ ವೇದಿಕೆಯಾಗಿದ್ದರಿಂದ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ.
- ಕಾರ್ಯಕ್ರಮ ಆಯೋಜಿಸುತ್ತಿರುವ ಸಂಸ್ಥೆಯವರು ಕಾರ್ಯಕ್ರಮ ಜರುಗುವ 2 ಗಂಟೆ ಮೊದಲು ವೇದಿಕೆಯನ್ನು ಆಂಟಿ ಸಬೌಟೇಜ್ ಚೆಕ್ ಸಂಬಂಧ ಬಿಟ್ಟುಕೊಡುವಂತೆ ಆಯೋಜಕರಿಗೆ ಸೂಚಿಸಬೇಕು.
- ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಹಾಗೂ ಸಂಚಾರ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲು ಸಮಯಾವಕಾಶ ಬೇಕಾಗಿದೆ ಎಂದು ಪತ್ರದಲ್ಲಿ ಡಿಸಿಪಿ ಕರಿಬಸನಗೌಡ ಅವರು ಉಲ್ಲೇಖಿಸಿದ್ದರು.