Bangalore Stampede | ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ ಸರ್ಕಾರ; ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಇವೆಂಟ್ಸ್‌ಗೆ ನೋಟಿಸ್‌ ಜಾರಿ

ಕಾಲ್ತುಳಿತ ಘಟನೆ ಕುರಿತಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತು.;

Update: 2025-06-17 11:21 GMT

ಹೈಕೋರ್ಟ್‌ ಮತ್ತು ಬೆಂಗಳೂರು ಕಾಲ್ತುಳಿತ ಘಟನೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ವಿಭಾಗೀಯ ಪೀಠವು ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಕಾಲ್ತುಳಿತ ಘಟನೆ ಕುರಿತಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತು.  

ತನಿಖೆ ಬಾಕಿಯಿರುವ ಕಾರಣ ಪೂರ್ವಾಗ್ರಹವಾಗಿರಬಾರದು. ಮೂರನೇ ವ್ಯಕ್ತಿಯ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುತ್ತಿದ್ದೇವೆ. ದಾಖಲೆ ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ, ನ್ಯಾಯಾಂಗ ತನಿಖೆ ಬಾಕಿ ಇರುವುದರಿಂದ ವರದಿ ಬಹಿರಂಗ ಮಾಡುತ್ತಿಲ್ಲ ಎಂದು ಸರ್ಕಾರದ ಅಡ್ವೋಕೇಟ್​ ಜನರಲ್​ ಶಶಿಕಿರಣ್‌ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು. 

ಕಾಲ್ತುಳಿತ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿ ಅಗತ್ಯವಿದೆಯೇ ಎಂದು ಹೈಕೋರ್ಟ್‌ ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರನ್ನು ಪ್ರಶ್ನಿಸಿತು. ಇದೇ ವೇಳೆ ಕೆಲ ಅರ್ಜಿದಾರರು ಮುಚ್ಚಿದ ಲಗೋಟೆಯಲ್ಲಿ ಸಲ್ಲಿಸಿರುವ ವರದಿ ಬಹಿರಂಗಪಡಿಸುವಂತೆ ಮನವಿ ಮಾಡಿದರು. ಸರ್ಕಾರ ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕು. ಮಾಹಿತಿಯ ಹಕ್ಕನ್ನು ಸರ್ಕಾರ ಗೌರವಿಸಬೇಕು. ಸರ್ಕಾರ ಯಾವುದೇ ಮಾಹಿತಿ ಮುಚ್ಚಿಡಬಾರದು. ಸರ್ಕಾರ ಸಂಪೂರ್ಣ ತಪ್ಪು ವರದಿ ನೀಡಿದರೂ ತಿಳಿಯುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ವರದಿ ಬಹಿರಂಗವಾಗಬೇಕು. ಇಲಿ, ಬೆಕ್ಕಿನ ಆಟ ಸರಿಯಲ್ಲ ಎಂದು ಅರ್ಜಿದಾರರು ವಾದ ಮಾಡಿದರು.

ಸರ್ಕಾರದ ವಾದ ಆಲಿಸಿದ ಬಳಿಕ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ನ್ಯಾಯಪೀಠವು ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿ ಆದೇಶಿಸಿತು.

Tags:    

Similar News