Bangalore Stampade | ನೂರಾರು ಕನಸು ಹೊತ್ತವರು ಅಂದಾಭಿಮಾನಕ್ಕೆ ಪ್ರಾಣ ತೆತ್ತರು..!
ನೂರಾರು ಕನಸು ಹೊತ್ತಿದ್ದ ಯುವಕ-ಯುವತಿಯರು ಆರ್ಸಿಬಿ ವಿಜಯೋತ್ಸವದ ದುರಂತದಲ್ಲಿ ಸಾವಿನ ಮನೆ ಸೇರುವ ಮೂಲಕ ಪೋಷಕರಲ್ಲಿ ದುಃಖದಲ್ಲಿ ಮುಳುಗಿಸಿದ್ದಾರೆ. ಮೃತರಲ್ಲಿ ವೈದ್ಯೆ, ಸಾಫ್ಟ್ ವೇರ್ ಎಂಜಿನಿಯರ್, ಭರತನಾಟ್ಯ ಕಲಾವಿದೆ, ವಿದ್ಯಾರ್ಥಿಗಳೂ ಇದ್ದರು.;
ಐಪಿಎಲ್ 18ನೇ ಆವೃತ್ತಿಯ ಚುಟುಕು ಕ್ರಿಕೆಟ್ ಪಂದ್ಯಾವಳಿಯು ಅಭಿಮಾನಿಗಳನ್ನು ಉನ್ಮಾದಗೊಳಿಸಿ, ಅವರ ಹೃದಯ ಬಡಿತವೇ ನಿಲ್ಲುವಂತೆ ಮಾಡಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಸಾಧಿಸಿದ ಗೆಲುವು ಅಭಿಮಾನಿಗಳಿಗೆ ಸಾವಿನ ಉಡುಗೊರೆ ನೀಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರು ನೂರಾರು ಕನಸು ಹೊತ್ತಿದ್ದರು. ಆದರೆ, ಕ್ರಿಕೆಟ್ ಮಾಯೆ ಅವರನ್ನು ಸಾವಿನ ಮನೆಗೆ ದೂಡಿದ್ದು ಮಾತ್ರ ವಿಪರ್ಯಾಸ. ಮೃತರಲ್ಲಿ ವೈದ್ಯೆ, ಸಾಫ್ಟ್ ವೇರ್ ಎಂಜಿನಿಯರ್, ಭರತನಾಟ್ಯ ಕಲಾವಿದೆ, ವಿದ್ಯಾರ್ಥಿಗಳು ಇದ್ದಾರೆ. ಮೃತರ ಕುಟುಂಬಗಳ ಆಕ್ರಂಧನ, ಆರ್ತನಾದ ದೇವರಿಗೇ ಪ್ರೀತಿ ಎನ್ನುವಂತಿದೆ.
ದಂತ ವೈದ್ಯನಾಗುವ ಕನಸು ಕಂಡಿದ್ದ ಶ್ರವಣ್
ದಂತ ವೈದ್ಯನಾಗುವ ಕನಸಿನ ಜೊತೆ ಮುನ್ನಡೆಯುತ್ತಿದ್ದ ಎರಡನೇ ವರ್ಷದ ಡೆಂಟಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಕೆ.ಟಿ.ಶ್ರವಣ್ ಅಪ್ಪಟ ವಿರಾಟ್ ಕೊಹ್ಲಿಅಭಿಮಾನಿ. ಚಿಂತಾಮಣಿ ತಾಲೂಕಿನ ಕುರಟಹಳ್ಳಿ ಗ್ರಾಮದ ಶ್ರವಣ್ ಬೆಂಗಳೂರಿನ ಅಂಬೇಡ್ಕರ್ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಕ್ಸ್ ಟೌನ್ ಸಮೀಪದ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದರು.
ಜೂನ್ 4 ನೇ ಬುಧವಾರ ಕೆ.ಟಿ. ಶ್ರವಣ್ ಪಾಲಿಗೆ ಸಂಭ್ರಮದ ದಿನವಾಗಿದ್ದರೂ ಆ ಸಂಭ್ರಮ ಹೆಚ್ಚು ಹೊತ್ತು ಉಳಿದಿರಲಿಲ್ಲ. ಆರ್ಸಿಬಿ ತಂಡ ಹಾಗೂ ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ನೋಡುವ ಹೆಬ್ಬಯಕೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಗೆ ಬಂದ ಶ್ರವಣ್, ಅತಿಯಾದ ಜನದಟ್ಟಣೆಯಿಂದ ಉಂಟಾದ ಭೀಕರ ಕಾಲ್ತುಳಿತದಲ್ಲಿ ಬಾರದ ಲೋಕಕ್ಕೆ ಹೋಗಿದ್ದ ಕುಟುಂಬವನ್ನು ಇನ್ನಿಲ್ಲದಂತೆ ಭಾದಿಸಿದೆ.
ಶ್ರವಣ್ ಆಸ್ಪತ್ರೆಯಲ್ಲಿ ವಿಷಯ ತಿಳಿದು ಗಾಬರಿಯಿಂದ ಬಂದ ಆತನ ಸೋದರ ಶ್ರೀಧರ್ ಕೆ.ಟಿ. ಅವರು ಬೌರಿಂಗ್ ಆಸ್ಪತ್ರೆಗೆ ಬಂದಾಗ ಶ್ರವಣ್ ಅಗಲಿಗೆ ಸುದ್ದಿ ಬರಸಿಡಿಲು ಅಪ್ಪಳಿಸಿದಂತೆ ಭಾಸವಾಗಿತ್ತು.
ತನ್ನ ಸೋದರ ಸಾವಿನ ಕುರಿತು ʼದ ಫೆಡರಲ್ʼ ಜೊತೆ ಮಾತನಾಡುವಾಗ ಅವರ ಗಂಟಲು ಬಿಗಿಯುತ್ತಿತ್ತು. "ನನ್ನ ಸೋದರ ಅಗಲಿಕೆ ತುಂಬಾ ಕ್ರೂರವಾಗಿತ್ತು, ನನ್ನ ತಾಯಿ ಬುಧವಾರ ರಾತ್ರಿ ಶವಾಗಾರಕ್ಕೆ ಭೇಟಿ ನೀಡಿದಾಗ ಶ್ರವಣ್ ಮೃತದೇಹ ನೋಡುತ್ತಿದ್ದಂತೆ ಪ್ರಜ್ಞೆ ತಪ್ಪಿದರುʼ ಎಂದು ಹೇಳುತ್ತಲೇ ಗದ್ಗದಿತರಾದರು.
ಕಾಲ್ತುಳಿತದಲ್ಲಿ ಶ್ರವಣ್ ಕೆ.ಟಿ. ಮೃತಪಟ್ಟಿರುವ ಸುದ್ದು ಕುಟುಂಬವನ್ನಷ್ಟೇ ಅಲ್ಲ, ಸಹಪಾಠಿಗಳನ್ನೂ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಶ್ರವಣ್ ಸಾವಿಗೆ ಸಂತಾಪ ಸೂಚಿಸಿ, ಗುರುವಾರ ಕಾಲೇಜಿಗೆ ರಜೆ ಘೋಷಿಸಿ ಶೋಕ ವ್ಯಕ್ತಪಡಿಸಲಾಯಿತು.
ನನ್ನ ಸೋದರನ ಸಾವಿಗೆ ಸರ್ಕಾರ ಹಾಗೂ ಆರ್ಸಿಬಿ ನೀಡುವ ಪರಿಹಾರದ ಬಗ್ಗೆ ನಮಗೆ ಆಸಕ್ತಿ ಇಲ್ಲ. 10 ಲಕ್ಷ ರೂ. ಗಳು ನನ್ನ ಸಹೋದರನ ಜೀವವವನ್ನು ಮರಳಿ ತರುವುದೇ ಎಂದು ಪ್ರಶ್ನಿಸಿದ ಅವರು, ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ಕಾಲ್ತುಳಿತ ಸಂಭವಿಸಿದ್ದಕ್ಕೆ ಸರ್ಕಾರವನ್ನು ಶಪಿಸಿದರು.
ʼಮಗಳನ್ನು ಕಳೆದುಕೊಂಡ ದುರದೃಷ್ಟ ನಾನುʼ
ಕಾಲ್ತುಳಿತದಲ್ಲಿ ಮೃತಪಟ್ಟ 19 ವರ್ಷದ ಯುವತಿ ಚಿನ್ನಯಿ ಶೆಟ್ಟಿಅವರ ಕುಟುಂಬದ ನೋವು ಹೇಳ ತೀರದಾಗಿತ್ತು. ಚಿನ್ಮಯಿ ಶೆಟ್ಟಿ ತಂದೆ ಕರುಣಾಕರ್ ಶೆಟ್ಟಿ ಅವರ ದುಃಖದ ಕಟ್ಟೆ ಹೊಡೆದಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸದ ಕಾರಣ ಕಾಲ್ತುಳಿತದಲ್ಲಿ ಮಗಳ ಸಾವಾಗಿದೆ. ಇದರ ಜವಾಬ್ದಾರಿ ಹೊರುವವರು ಯಾರು ಎಂದು ನೋವಿನಿಂದಲೇ ಹೇಳಿಕೊಂಡರು.
ʼದ ಫೆಡರಲ್ʼ ಜೊತೆ ಮಾತನಾಡಿದ ಅವರು, ಐಪಿಎಲ್ ಟೂರ್ನಿ ಅಂತರರಾಷ್ಟ್ರೀಯ ಪಂದ್ಯವಲ್ಲ, ಕೇವಲ ಕ್ಲಬ್ ಪಂದ್ಯ. ಹೀಗಿರುವಾಗ ಆರ್ಸಿಬಿ ಗೆಲುವಿಗೆ ಹೆಚ್ಚು ಉನ್ಮಾದವಾಗುವ ಅಗತ್ಯ ಇರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದಿವೆ. ಇಂತಹ ಉನ್ಮಾದದ ಪ್ರತಿಕ್ರಿಯೆ ನೋಡಿರಲಿಲ್ಲ. ಈಗ ಆರ್ಸಿಬಿ ಮೇಲಿನ ಅಭಿಮಾನದ ಉನ್ಮಾನ ಹೆಚ್ಚಾದ ಕಾರಣ ನನ್ನ ಮಗಳನ್ನು ಕಳೆದುಕೊಂಡಿದ್ದು ದುರದೃಷ್ಟ ಎಂದು ಹೇಳಿದರು.
ಚಿನ್ಮಯಿ ಶೆಟ್ಟಿ ಕ್ರಿಕೆಟ್ ಅಭಿಮಾನಿಯೇನಲ್ಲ. ಆದರೆ, ಯಕ್ಷಗಾನ ತರಗತಿಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಳು. ಕನಕಪುರದಲ್ಲಿನ ಮಂಗಳೂರು ಅಸೋಸಿಯೇಷನ್ನಲ್ಲಿ ಪ್ರತಿ ವಾರ ಯಕ್ಷಗಾನ ತರಗತಿಗೆ ಹಾಜರಾಗುತ್ತಿದ್ದಳು. ಅಲ್ಲದೇ ಕನಕಪುರದ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.
ಜೂನ್ 4 ರಂದು ಅವಳ ಸ್ನೇಹಿತರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ಹೋಗಲು ಒತ್ತಾಯಿಸಿದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣವರೆಗೆ ಬಂದು ಪ್ರಾಣ ಕಳೆದುಕೊಳ್ಳಬೇಕಾಯಿತು.
ಕಾಲ್ತುಳಿತದಲ್ಲಿ ತೀವ್ರ ಗಾಯಗೊಂಡ ಚಿನ್ಮಯಿ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸ್ನೇಹಿತನಿಗೆ ತನ್ನ ತಂದೆಯ ಮೊಬೈಲ್ ಸಂಖ್ಯೆ ನೀಡಿದ್ದಳು. ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ವಿವರಿಸುವಾಗ ಆಕೆಯ ತಂದೆ ಕರುಣಾಕರ ಶೆಟ್ಟಿ ಭಾವುಕರಾದರು.
ಮನೆಗೆ ಆಧಾರವಾಗಿದ್ದ ಎಂಜಿನಿಯರ್
ಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿಯಾಗಿದ್ದ 24 ವರ್ಷದ ಸಹನಾ ಅವರು ಬಾಷ್ ಕಂಪೆನಿಯಲ್ಲಿಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೈ ತುಂಬಾ ಸಂಬಳ ಪಡೆಯುತ್ತಿದ್ದರು.
ತಮ್ಮ ಸ್ನೇಹಿತರೊಂದಿಗೆ ವಿರಾಟ್ ಕೊಹ್ಲಿಯನ್ನು ನೋಡಲು ಬಂದ ಸಹನಾ ಅವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದು ಕುಟುಂಬವನ್ನು ರೋಧನದಲ್ಲಿ ಮುಳುಗಿಸಿದೆ. ವಿಜಯೋತ್ಸವ ಆಚರಣೆಗೆ ಯಾವುದೇ ಸರಿಯಾದ ಬಿಗಿ ಕ್ರಮ ಕೈಗೊಳ್ಳದಿರುವ ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದರು.
ಕ್ರೀಡಾಂಗಣದಲ್ಲಿ ಕೇವಲ 30,000 ಜನರಿಗೆ ಆಸನ ಸಾಮರ್ಥ್ಯವಿದ್ದರೂ ಲಕ್ಷಾಂತರ ಅಭಿಮಾನಿಗಳು ಬರುವಂತೆ ಮಾಡಿದ್ದು ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಆಕ್ರೋಶ ಹೊರಹಾಕಿದರು.
ವಿರಾಟ್ ಕೊಹ್ಲಿ ಅಂದರೆ ಪಂಚ ಪ್ರಾಣ
ಚಿಕ್ಕಬಳ್ಳಾಪುರ ಜಿಲ್ಲೆ ಗೋಪಲ್ಲಿ ಗ್ರಾಮದ ಪ್ರಜ್ವಲ್ಗೆ ವಿರಾಟ್ ಕೊಹ್ಲಿ ಎಂದರೆ ಪಂಚಪ್ರಾಣ. ಆದರೆ, ಕೊಯ್ಲಿಯನ್ನು ನೋಡಲು ಹೋಗಿ ಪ್ರಾಣ ಕಳೆದುಕೊಂಡಿರುವುದು ಪೋಷಕರನ್ನು ಆಕ್ರಂಧನದಲ್ಲಿ ಮುಳುಗಿಸಿದೆ.
ನನ್ನ ಮಗ ಬಹಳ ಬುದ್ಧಿವಂತ. ಸಂಭ್ರಮಾಚರಣೆಯ ಸ್ಥಳಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದ, ಯಾರೋ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಕ್ರಿಕೆಟ್ ಅಂದರೆ ಆತನಿಗೆ ಇಷ್ಟ, ವಿರಾಟ್ ಕೊಹ್ಲಿ, ಆರ್ಸಿಬಿ ಅಂತ ಪ್ರಾಣ ಬಿಡುತ್ತಿದ್ದ ಎಂದು ಮೃತ ಪ್ರಜ್ವಲ್ ತಾಯಿ ಗೋಳಾಡಿದರು.
ಮನೆಯ ತುಂಬಾ ವಿರಾಟ್ ಕೊಹ್ಲಿ ಫೋಟೋಗಳನ್ನೇ ಹಾಕಿಕೊಂಡಿದ್ದಾನೆ. ಈಗ ವಿರಾಟ್ ಕೊಹ್ಲಿ ನನ್ನ ಮಗನಿಗೆ ಏನ್ ಕೊಟ್ಟ ಎಂದು ಆಕ್ರೋಶ ಹೊರಹಾಕಿದರು. ಹೊಟ್ಟೆಪಾಡಿಗಾಗಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಈ ಕುಟುಂಬವು ಸದ್ಯ ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ.
ಮಗನನ್ನು ಕಳೆದುಕೊಡು ಅಪ್ಪ ಕಣ್ಣೀರು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಪ್ಪಗೋಡಿನ 20 ವರ್ಷದ ಭೂಮಿಕ್ ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು, ತಂದೆಯ ಗೋಳು ಹೇಳ ತೀರದಾಗಿತ್ತು.
ಇಪ್ಪತ್ತು ವರ್ಷ ಕೈ ತುತ್ತು ಕೊಟ್ಟು ಮಗನನ್ನು ಸಾಕಿದ್ದೆ. ನನ್ನ ಮಗ ತುಂಬಾ ಒಳ್ಳೆಯವನು. ಆದರೆ, ಸರ್ಕಾರ ಮಾಡಿದ ಎಡವಟ್ಟಿನಿಂದ ಇಂದು ನನ್ನ ಮಗನನ್ನು ಕಳೆದುಕೊಳ್ಳುವಂತಾಯಿತು ಎಂದು ಭೂಮಿಕ್ ಅವರ ತಂದೆ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.