ಸಚಿವ ಜಮೀರ್ ಅಹ್ಮದ್ ಬಂಧಿಸಿ: ಸಿಮೆಂಟ್ ಮಂಜು ಆಗ್ರಹ

ಘನತೆವೆತ್ತ ರಾಜ್ಯಪಾಲರಿಗೆ ಧಮ್ಕಿ ಹಾಕುವ ಕೆಲಸವನ್ನು ಸಚಿವ ಜಮೀರ್ ಅಹ್ಮದ್ ಅವರು ಮಾಡಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಆರೋಪಿಸಿದ್ದಾರೆ.

Update: 2024-08-20 13:52 GMT
ಶಾಸಕ ಸಿಮೆಂಟ್ ಮಂಜುನಾಥ್
Click the Play button to listen to article

"ಘನತೆವೆತ್ತ ರಾಜ್ಯಪಾಲರಿಗೆ ಧಮ್ಕಿ ಹಾಕುವ ಕೆಲಸವನ್ನು ಸಚಿವ ಜಮೀರ್ ಅಹ್ಮದ್ ಮಾಡಿದ್ದಾರೆ" ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಆರೋಪಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಇಂದು ಭೇಟಿ ನೀಡಿ ದೂರು ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಆಡಳಿತ ಪಕ್ಷವಾದ ಕಾಂಗ್ರೆಸ್ಸಿನವರು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲು ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. 3 ಜನ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ತನಿಖೆ ಮಾಡಲು ಅವರು ಅವಕಾಶ ಕೊಟ್ಟಿದ್ದಾರೆ. ರಾಜ್ಯಪಾಲರ ಭಿತ್ತಿಪತ್ರಕ್ಕೆ ಚಪ್ಪಲಿಯಲ್ಲಿ ಹೊಡೆದ ಇವರು ಸಂವಿಧಾನಕ್ಕೆ ಗೌರವ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಕಾರಣ ಎಂದು ಜಮೀರ್ ಅಹ್ಮದ್ ಅವರು ಹೇಳಿದ್ದು, ಅವರ ವಿರುದ್ಧ ದೂರು ಕೊಡಲಾಗಿದೆ ಎಂದರು. ಜಮೀರ್ ಅಹ್ಮದ್ ಅವರನ್ನು ಬಂಧಿಸಲು ಕೋರಿದ್ದಾಗಿ ಹೇಳಿದರು. ಐವಾನ್ ಡಿಸೋಜಾ, ರಕ್ಷಿತ್ ಶಿವರಾಂ ವಿರುದ್ಧವೂ ದೂರು ನೀಡಿದ್ದಾಗಿ ಅವರು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರದಲ್ಲಿ ಇದ್ದಂತಿದೆ ಎಂದು ಆಕ್ಷೇಪಿಸಿದರು. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಇದೇ ಮಾದರಿಯ ಹೇಳಿಕೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಇದೇ ಮಾತನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.

ಹತಾಶವಾದ ಕಾಂಗ್ರೆಸ್ ಪಕ್ಷವು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದೆ. ರಕ್ಷಿತ್ ಶಿವರಾಂ, ಐವಾನ್ ಡಿಸೋಜಾ ಅವರಿಬ್ಬರೂ ವಕೀಲರಾಗಿದ್ದಾರೆ. ಅವರೇನು ಜನಸಾಮಾನ್ಯರಲ್ಲ ಎಂದು ಗಮನಕ್ಕೆ ತಂದರು. ಅವರ ಮಾತುಗಳು ಜನಸಾಮಾನ್ಯರನ್ನು ದಂಗೆಗೆ ಪ್ರಚೋದಿಸುವಂತಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಬಸ್ಸಿಗೆ ಕಲ್ಲೆಸೆದು ಜನಸಾಮಾನ್ಯರಾದ ಮಹಿಳೆಗೆ ಗಾಯವಾಗಿದೆ ಎಂದು ತಿಳಿಸಿದರು.

ಎಸ್‍ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಹಾಗೂ ಪ್ರಮುಖರು ಇದ್ದರು.

Tags:    

Similar News