AICC OBC Meeting: ಸಿದ್ದರಾಮಯ್ಯ ಅಧ್ಯಕ್ಷತೆಯ ಒಬಿಸಿ ಸಲಹಾ ಮಂಡಳಿ ಸಭೆ ಮುಕ್ತಾಯ; ಮೂರು ಪ್ರಮುಖ ನಿರ್ಣಯಕ್ಕೆ ಒಮ್ಮತ
ಸಲಹಾ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಪ್ರಮುಖವಾಗಿ 3 ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು ಹಾಗೂ ʼಬೆಂಗಳೂರು ಡಿಕ್ಲರೇಷನ್ʼ ಅನ್ನು ಸರ್ವಾನುಮತದಿಂದ ಮಾಡಲಾಯಿತು.;
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ)ನ ಮಹತ್ವಾಕಾಂಕ್ಷೆಯ ಎರಡು ದಿನಗಳ ಒಬಿಸಿ ಸಲಹಾ ಮಂಡಳಿ ಸಭೆ ಬುಧವಾರ ಮೂರು ಪ್ರಮುಖ ನಿರ್ಣಯಗಳೊಂದಿಗೆ ಮುಕ್ತಾಯವಾಯಿತು.
ಪ್ರಮುಖವಾಗಿ ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಗಣತಿ ಸಹಿತ ಜನಗಣತಿಯಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಗಣತಿ ಒಳಗೊಂಡಿರಬೇಕು. ತೆಲಂಗಾಣ ಮಾದರಿಯಲ್ಲಿ ಜನಗಣತಿ ನಡೆಯಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದರು. ಕಾಂಗ್ರೆಸ್ನ ರಾಷ್ಟ್ರ ಮಟ್ಟದ ಒಬಿಸಿ ಮುಖಂಡರು, ಮಾಜಿ ಮುಖ್ಯಮಂತ್ರಿಗಳಾದ ಭೂಪೇಶ್ ಬಗೇಲ್, ಅಶೋಕ್ ಗೆಹ್ಲೋಟ್, ವೀರಪ್ಪ ಮೊಯಿಲಿ, , ಮುಖಂಡರಾದ ಬಿ.ಕೆ.ಹರಿಪ್ರಸಾದ್ ಮತ್ತಿತರರು ಭಾಗಿಯಾಗಿದ್ದರು. ಎಐಸಿಸಿಯ ಒಬಿಸಿ ಸಲಹಾ ಸಮಿತಿಯ ಈ ಸಭೆ ಕರ್ನಾಟಕದಿಂದ ಮೊದಲ ಬಾರಿಗೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇತರ ಭಾಗಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಸಲಹಾ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಪ್ರಮುಖವಾಗಿ 3 ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು ಹಾಗೂ ʼಬೆಂಗಳೂರು ಡಿಕ್ಲರೇಷನ್ʼ ಅನ್ನು ಸರ್ವಾನುಮತದಿಂದ ಮಾಡಲಾಯಿತು.
ಸಭೆಯಲ್ಲಿ ತೆಗೆದುಕೊಂಡಿರುವ ಪ್ರಮುಖ ನಿರ್ಣಯಗಳು
1. ಭಾರತದ ಜನಗಣತಿ ಆಯೋಗದಿಂದ ರಾಷ್ಟ್ರೀಯ ಮಟ್ಟದ ಜಾತಿ ಜನಗಣತಿ, ಅಧಿಕೃತವಾಗಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ, ಭಾರತ (ORGI) ಎಂದು ಕರೆಯಲ್ಪಡುತ್ತದೆ. ಜನಗಣತಿಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಅಂಶಗಳನ್ನು ಒಳಗೊಳ್ಳಬೇಕು ಮತ್ತು ಜಾತಿಗಳನ್ನು ಮುಂಚೂಣಿಯಲ್ಲಿರಿಸಿಕೊಳ್ಳಬೇಕು, ತೆಲಂಗಾಣ ರಾಜ್ಯ (SEEEP CASTE SURVEY) ಅನ್ನು ಮಾದರಿಯಾಗಿ ಹೊಂದಿರಬೇಕು.
2. ಮೀಸಲಾತಿಗೆ ಇರುವ 50% ಮಿತಿಯನ್ನು ತೆಗೆದು ಹಾಕುವುದು. ಆ ಮೂಲಕ ಶಿಕ್ಷಣ, ಸೇವೆ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ OBC ಗಳಿಗೆ ಸೂಕ್ತವಾದ ಮೀಸಲಾತಿಯನ್ನು ಖಾತ್ರಿ ಪಡಿಸುವುದು.
3. ಸಂವಿಧಾನದ 15(5) ನೇ ವಿಧಿಯ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದು.
ಸಿದ್ದರಾಮಯ್ಯ ವಿವರಿಸಿದ್ದೇನು?
"ಕರ್ನಾಟಕದಲ್ಲಿ ಮೊದಲ ಬಾರಿಗೆ ಓಬಿಸಿ ನಾಯಕರ ಸಭೆ ನಡೆಯುತ್ತಿದೆ. ಮಂಗಳವಾರ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆಸಲಾಗಿತ್ತು. ಎರಡನೇ ಸಭೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು “ಬೆಂಗಳೂರು ಘೋಷಣೆ” ಎಂದು ತೀರ್ಮಾನ ಮಾಡಲಾಗಿದೆ. ಈ ಸಭೆಯಲ್ಲಿ ನಾನು ಮಂಡಿಸಿದ ನಿರ್ಣಯಗಳನ್ನು ಸರ್ವಾನುಮತದಿಂದ ಎಲ್ಲಾ ಸದಸ್ಯರು ಅಂಗೀಕರಿಸಿದರು," ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
"ನಮ್ಮ ದೇಶದಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸಾಮಾಜಿಕ ನ್ಯಾಯದ ಪರವಾಗಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಪರವಾಗಿ ನಿಂತಿದ್ದಕ್ಕಾಗಿ ನ್ಯಾಯ ಯೋಧ ರಾಹುಲ್ ಗಾಂಧಿ ಅವರಿಗೆ ಎಐಸಿಸಿಯ ಒಬಿಸಿ ಇಲಾಖೆಯ ಸಲಹಾ ಮಂಡಳಿಯು ಸರ್ವಾನುಮತದಿಂದ ಧನ್ಯವಾದಗಳನ್ನು ಅರ್ಪಿಸುತ್ತದೆ," ಎಂದರು.
ರಾಹುಲ್ ಗಾಂಧಿ ಪ್ರಶಂಶಿಸಿದ ಸಿದ್ದರಾಮಯ್ಯ
"ರಾಹುಲ್ ಗಾಂಧಿ ಅವರ ದೃಢವಾದ ಹೋರಾಟದ ಪರಿಣಾಮವಾಗಿ ಮನುವಾದಿ ಮೋದಿ ಸರ್ಕಾರ ದೇಶದಲ್ಲಿ ಜಾತಿ ಜನಗಣತಿ ನಡೆಸುತ್ತೇನೆ ಎಂದು ಘೋಷಣೆ ಮಾಡಿತು. ಈ ಮೂಲಕ ಕೇಂದ್ರ ಸರ್ಕಾರ ಶರಣಾಗುವಂತೆ ಮಾಡಿತು. ಭಾರತದ ಎಲ್ಲಾ ಹಿಂದುಳಿದ ವರ್ಗಗಳ ಪರವಾಗಿ, ಈ ಐತಿಹಾಸಿಕ ಸಾಧನೆಗೆ ಮಂಡಳಿಯು ತನ್ನ ಹೃತ್ಪೂರ್ವಕ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಇದು ಒಂದು ಮೈಲಿಗಲ್ಲು ಆಗಿದ್ದರೂ, ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ ಇದು ಒಂದು ಸಣ್ಣ ಹೆಜ್ಜೆಯಾಗಿದೆ. ನಮ್ಮ ನ್ಯಾಯಯೋಧ ರಾಹುಲ್ ಗಾಂಧಿಯವರ ಧೈರ್ಯಶಾಲಿ ಮತ್ತು ಅಚಲ ನಾಯಕತ್ವದಲ್ಲಿ, ಭಾರತವು ಸಮಾನತೆ ಮತ್ತು ಸಮಾನ ಸಮಾಜಕ್ಕೆ ಕಾರಣವಾಗುವ ಸಾಮಾಜಿಕ ಪರಿವರ್ತನೆಯ ಅಂತಿಮ ಸಾಂವಿಧಾನಿಕ ಉದ್ದೇಶವನ್ನು ಸಾಕಾರಗೊಳಿಸಲು ಮತ್ತು ಸಾಧಿಸಲು ಉದ್ದೇಶಿಸಲಾಗಿದೆ," ಎಂದವರು ಹೇಳಿದರು.
ಅಖಿಲ ಭಾರತ ಹಿಂದುಳಿದ ವರ್ಗಗಳ ವಿಭಾಗದ ಅನಿಲ್ ಜೈ ಹಿಂದ್ ಹೇಳಿದ್ದೇನು?
"ಕಳೆದ ವರ್ಷದ ಜುಲೈ 25 ರಂದು ನಡೆದಿದ್ದ ರಾಷ್ಟ್ರಮಟ್ಟದ ಓಬಿಸಿ ಸಮ್ಮೇಳನದಲ್ಲಿ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಅದರಂತೆ ಜಾತಿ ಗಣತಿಗೆ ಒತ್ತಾಯಿಸಿ ಪ್ರತಿ ರಾಜ್ಯದಲ್ಲಿಯೂ ಓಬಿಸಿ ನಾಯಕರ ಸಭೆ ನಡೆಸುವುದು ಹಾಗೂ ಬೃಹತ್ ಸಭೆಗಳನ್ನು ಆಯೋಜಿಸುವುದು, ಓಬಿಸಿ ನಾಯಕತ್ವವನ್ನು ಬೆಳೆಸುವುದು. ನಾಯಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದು ಈ ಸಭೆಯ ಊದ್ದೇಶವಾಗಿತ್ತು. ಕರ್ನಾಟಕದ ಸಭೆ ಉತ್ತಮವಾಗಿ ನೆರವೇರಿತು," ಎಂದು ಅನಿಲ್ ಜೈಹಿಂದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಈ ಲಿಂಕ್ನಲ್ಲಿ ಲಭ್ಯ