ಕಮಲ್ ಹಾಸನ್ ಭಾಷಾ ಹೇಳಿಕೆ ವಿವಾದ: ಕ್ಷಮೆಯಾಚಿಸುವಂತೆ ಬಿ.ಎಸ್. ಯಡಿಯೂರಪ್ಪ ಆಗ್ರಹ
ನಟ ಕಮಲ್ ಹಾಸನ್ ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ, ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.;
ನಟ ಕಮಲ್ ಹಾಸನ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಹೇಳಿಕೆಯನ್ನು ಅತ್ಯಂತ ಖಂಡನಾರ್ಹ ಎಂದು ಹೇಳಿದ್ದಾರೆ.
ಇತಿಹಾಸ ಅಥವಾ ಭಾಷಾಶಾಸ್ತ್ರ ತಜ್ಞರಲ್ಲದ ಕಲಾವಿದರಾದ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಸರಿಯಲ್ಲ. ಅವರ ಈ ಅನಗತ್ಯ ವರ್ತನೆ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಭಂಗ ತರುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಸಿನಿಮಾದ ಪ್ರಚಾರದ ವೇಳೆ ನಟ ಕಮಲ್ ಹಾಸನ್, "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಮಂಗಳವಾರ (ಮೇ 3) ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ವೈ, "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಎಂಬುದು ಕನ್ನಡಿಗರ ಘೋಷವಾಕ್ಯ ಮಾತ್ರವಲ್ಲ, ಇದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಮೇಲಿರುವ ಕನ್ನಡಿಗರ ದೀಕ್ಷೆ ಎಂದಿದ್ದಾರೆ.
ಕನ್ನಡ ಯಾವುದೇ ನಿರ್ದಿಷ್ಟ ಭಾಷೆಯಿಂದ ಹುಟ್ಟಿಕೊಂಡಿಲ್ಲ ಎಂದು ಅನೇಕ ಹಿರಿಯ ಭಾಷಾ ಪರಿಣಿತರು ಅಧ್ಯಯನ ಮಾಡಿ ತೋರಿಸಿದ್ದಾರೆ. ನಟ ಕಮಲ್ ಹಾಸನ್ ಅಭಿಪ್ರಾಯ ಮಂಡನೆಯ ಭರದಲ್ಲಿ ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ, ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ನಟ ಕಮಲ್ ಹಾಸನ್ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಕನ್ನಡಪರ ಹೋರಾಟಗಾರರು, ಚಿತ್ರರಂಗದ ಹಲವು ನಿರ್ದೇಶಕರು, ನಟ, ನಟಿಯರು ವಿರೋಧ ವ್ಯಕ್ತಪಡಿಸಿದ್ದರು. ಕ್ಷಮೆ ಕೇಳದಿದ್ದರೆ ಜೂನ್ 5ರಂದು ಬಿಡುಗಡೆಯಾಗಬೇಕಿರುವ 'ಥಗ್ ಲೈಫ್' ಸಿನಿಮಾಗೆ ನಿರ್ಬಂಧ ಹೇರಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದರು.
ಆದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಕಮಲ್ ಹಾಸನ್, "ಇತಿಹಾಸಕಾರರು ಹೇಳಿದ ಮಾತನ್ನು ನಾನು ಹೇಳಿದ್ದೇನೆ, ನಾನು ತಪ್ಪು ಮಾತನಾಡಿಲ್ಲ ಹಾಗೂ ಕ್ಷಮೆ ಕೇಳುವುದಿಲ್ಲ" ಎಂದು ತಿಳಿಸಿದ್ದರು. ತಮಿಳುನಾಡಿನಲ್ಲಿ ತಮಗೆ ತೊಂದರೆಯಾದಾಗ ಕನ್ನಡಿಗರು ಅಪಾರ ಪ್ರೀತಿಯನ್ನು ನೀಡಿದ್ದಾರೆ ಎಂದೂ ಅವರು ಹೇಳಿದ್ದರು.