ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿ ಆರೋಪ, ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ
55 ಜನರ ಗುಂಪು ಒಟ್ಟುಗೂಡಿ ಬಾಲಕರನ್ನು ಧ್ವಜದ ಕಂಬಕ್ಕೆ ಕಟ್ಟಿ, ಹಗ್ಗ, ದೊಣ್ಣೆ, ಮತ್ತು ಚಪ್ಪಲಿಗಳಿಂದ ತೀವ್ರವಾಗಿ ಥಳಿಸಿದೆ. ಹಲ್ಲೆಯಿಂದ ಬಾಲಕರ ದೇಹದಾದ್ಯಂತ ಗಾಯಗಳಾಗಿದ್ದು, ಮೈ ತುಂಬಾ ಬಾಸುಂಡೆ ಬಂದಿರುವುದಾಗಿ ಆರೋಪಿಸಲಾಗಿದೆ.;
ಗದಗ ಜಿಲ್ಲೆಯ ನರಗುಂದ ತಾಲೂಕಿನ ಒಂದು ಗ್ರಾಮದಲ್ಲಿ ಮೇ 28ರಂದು ನಡೆದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ಮೂವರು ಬಾಲಕರನ್ನು 55 ಗ್ರಾಮಸ್ಥರ ಗುಂಪು ಧ್ವಜದ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದು ವರದಿಯಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಜಾತಿ ಸಂಘರ್ಷ ಆರಂಭಗೊಂಡಿದೆ.
ಮೂವರು ಅಪ್ರಾಪ್ತ ಬಾಲಕರು ಬಾಲಕಿಯೊಬ್ಬಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಅವಳನ್ನು ಚುಡಾಯಿಸಿದ್ದಾರೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಾಗ, 55 ಜನರ ಗುಂಪು ಒಟ್ಟುಗೂಡಿ ಬಾಲಕರನ್ನು ಧ್ವಜದ ಕಂಬಕ್ಕೆ ಕಟ್ಟಿ, ಹಗ್ಗ, ದೊಣ್ಣೆ, ಮತ್ತು ಚಪ್ಪಲಿಗಳಿಂದ ತೀವ್ರವಾಗಿ ಥಳಿಸಿದೆ. ಹಲ್ಲೆಯಿಂದ ಬಾಲಕರ ದೇಹದಾದ್ಯಂತ ಗಾಯಗಳಾಗಿದ್ದು, ಮೈ ತುಂಬಾ ಬಾಸುಂಡೆ ಬಂದಿರುವುದಾಗಿ ಆರೋಪಿಸಲಾಗಿದೆ.
ಮೂವರ ಪೈಕಿ ಒಬ್ಬ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಅವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಬಾಲಕರು ಘಟನೆಯ ನಂತರ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕರ ಪೋಷಕರು, ಒಬ್ಬ ಬಾಲಕ ವಿಷ ಸೇವಿಸಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಎರಡೂ ಕಡೆಯಿಂದ ದೂರುಗಳು
ಈ ಘಟನೆಯ ನಂತರ, ಎರಡೂ ಕಡೆಯಿಂದ ದೂರು ದಾಖಲಾಗಿದೆ. ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯದ ಆರೋಪದಡಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೊಕ್ಸೊ (Protection of Children from Sexual Offences) ಕಾಯ್ದೆಯಡಿ ದೂರು ದಾಖಲಿಸಿದ್ದಾರೆ,
ಈ ಪರಸ್ಪರ ದೂರುಗಳಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಜಾತಿ ಸಂಘರ್ಷದ ಸಾಧ್ಯತೆಯನ್ನು ತಪ್ಪಿಸಲು ಪೊಲೀಸರು ಗ್ರಾಮದಲ್ಲಿ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ