ಇರಾನ್‌ನಲ್ಲಿನ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆ ಕೋರಿ ಆರತಿ ಕೃಷ್ಣ ಕೇಂದ್ರಕ್ಕೆ ಪತ್ರ

ವಿದೇಶಾಂಗ ಸಚಿವಾಲಯವು ಇರಾನ್‌ನಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಉದ್ವಿಗ್ನ ಸ್ಥಳದಿಂದ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಕ್ರಮ ಕೈಗೊಂಡಿದೆ.;

Update: 2025-06-17 11:21 GMT

ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಇಸ್ರೇಲ್ ಹಾಗೂ ಇರಾನ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಇದಲ್ಲದೇ, ಎರಡು ದೇಶಗಳು ಕೂಡ ತಮ್ಮ ವಾಯುನೆಲೆಗಳನ್ನು ಬಂದ್ ಮಾಡಿವೆ. ಇದರಿಂದ ಅಲ್ಲಿಗೆ ಹೋಗಿದ್ದ ನಾಗರಿಕರು ಮತ್ತು ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಕರ್ನಾಟಕದ ಜನತೆಗೆ ರಕ್ಷಣೆಗೆ ಅನಿವಾಸಿ ಭಾರತೀಯ ಸಮಿತಿಯು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕನ್ನಡಿಗರ ರಕ್ಷಣೆಗೆ ಆಗ್ರಹಿಸಿದೆ. 

ಇರಾನ್ ದೇಶದ ರಾಜಧಾನಿ ತೆಹರಾನ್ ಸಮೀಪದಲ್ಲಿರುವ ಸಹಿದ್‌ ಬೆಹ್ಸ್ತಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ 9 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಪತ್ರ ಬರೆದಿದ್ದಾರೆ.  ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿದ್ದು, ಉದ್ವಿಗ್ನ ಪರಿಸ್ಥಿತಿಯಿಂದಾಗಿ ಆತಂಕಗೊಂಡಿದ್ದಾರೆ.  ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ನದೀಮ್ ಹುಸೇನ್ ಮತ್ತು ಬೆಂಗಳೂರಿನಲ್ಲಿನ ಆತನ ಪೋಷಕರು ಅನಿವಾಸಿ ಭಾರತೀಯ ಸಮಿತಿಗೆ ಕರೆ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಲ್ಲದೇ, ದೇಶಕ್ಕೆ ಹಿಂದಿರುಗಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದಾರೆ. 





ಆರತಿ ಕೃಷ್ಣ ಅವರ ಪತ್ರಕ್ಕೆ ಸ್ಪಂದಿಸಿದ ವಿದೇಶಾಂಗ ಸಚಿವಾಲಯವು ಅಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಉದ್ವಿಗ್ನ ಸ್ಥಳದಿಂದ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಕ್ರಮ ಕೈಗೊಂಡಿದೆ. ಅಲ್ಲದೇ, ಮತ್ತಷ್ಟು ವಿದ್ಯಾರ್ಥಿಗಳು ಮತ್ತು ನಾಗರಿಕರು ಅವರು ಸಹ ಆರತಿ ಕೃಷ್ಣ ಅವರ ಕಚೇರಿಯನ್ನು ಸಂಪರ್ಕಿಸಿ ರಕ್ಷಣೆಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಈ ಕುರಿತು ದ ಫೆಡರಲ್‌ ಕರ್ನಾಟಕ ಜೊತೆಗೆ ಮಾತನಾಡಿದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ, ಇರಾಕ್‌- ಇರಾನ್‌ ನಡುವಿನ ಯುದ್ಧದ ಭೀತಿಯಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ರಕ್ಷಣೆ ಕೋರಿ ನಮ್ಮನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗಿತ್ತು. ಪತ್ರಕ್ಕೆ ವಿದೇಶಾಂಗ ಸಚಿವಾಲಯ ಸ್ಪಂದಿಸಿದ್ದು, ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಮತ್ತಷ್ಟು ಮಂದಿ ರಕ್ಷಣೆಗೆ ಕೋರಿದ್ದು, ಅವರ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಜನತೆಯ ರಕ್ಷಣೆಗೆ ಅನಿವಾಸಿ ಭಾರತೀಯ ಸಮಿತಿಯು ಸದಾ ಸಿದ್ಧವಾಗಿರುತ್ತದೆ. ಸಮಿತಿಯು ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. 

Tags:    

Similar News