1,200 stray dogs die in a single month in Telangana; Are the dogs victims of election promises?
x

ಬೀದಿ ನಾಯಿಗಳು( ಸಾಂದರ್ಭಿಕ ಚಿತ್ರ)

ಒಂದೇ ತಿಂಗಳಿಗೆ 1,200 ಬೀದಿನಾಯಿಗಳ ಸಾವು; ಚುನಾವಣಾ 'ಭರವಸೆ'ಗೆ ಬಲಿಯಾದವೇ ಶ್ವಾನಗಳು?

ಚರಕೊಂಡ ಪೊಲೀಸರು ಗ್ರಾಮ ಪಂಚಾಯಿತಿ ಅಧ್ಯಕ್ಷರ (ಸರಪಂಚ್) ಮಗ, ಪಂಚಾಯಿತಿ ಕಾರ್ಯದರ್ಶಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.


Click the Play button to hear this message in audio format

ತೆಲಂಗಾಣದಲ್ಲಿ ಬೀದಿನಾಯಿಗಳ ಹತ್ಯಾಕಾಂಡ ಮುಂದುವರಿದಿದೆ. ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಇತ್ತೀಚೆಗೆ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಬರ್ಬರವಾಗಿ ಕೊಲ್ಲಲಾಗಿದ್ದು, ಕಳೆದ ಡಿಸೆಂಬರ್‌ನಿಂದ ಈವರೆಗೆ ರಾಜ್ಯಾದ್ಯಂತ ಹತ್ಯೆಯಾದ ನಾಯಿಗಳ ಸಂಖ್ಯೆ 1,200ಕ್ಕೆ ಏರಿಕೆಯಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ನಾಗರ್‌ಕರ್ನೂಲ್ ಜಿಲ್ಲೆಯ ತಿಮ್ಮಾಯಿಪಲ್ಲಿ ಗ್ರಾಮದಲ್ಲಿ ಕಳೆದ 10 ದಿನಗಳ ಹಿಂದೆ ಸುಮಾರು 100 ನಾಯಿಗಳನ್ನು ವಿಷದ ಇಂಜೆಕ್ಷನ್ ನೀಡಿ ಕೊಲ್ಲಲಾಗಿದೆ. ಈ ಕೃತ್ಯಕ್ಕೆ 18,000 ರೂ. ನೀಡಿ 'ಡಾಗ್ ಕಿಲ್ಲರ್‌'ಗಳನ್ನು ನೇಮಿಸಲಾಗಿತ್ತು ಎಂದು 'ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾ' ಎನ್‌ಜಿಒದ ಕಾರ್ಯಕರ್ತೆ ಎಂ. ಪ್ರೀತಿ ದೂರಿನಲ್ಲಿ ತಿಳಿಸಿದ್ದಾರೆ. ಹತ್ಯೆಯ ನಂತರ ಕಳೇಬರವನ್ನು ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿ ಹೂಳಲಾಗಿದೆ.

ಪ್ರೀತಿ ಅವರ ದೂರಿನ ಆಧಾರದ ಮೇಲೆ, ಚರಕೊಂಡ ಪೊಲೀಸರು ಗ್ರಾಮ ಪಂಚಾಯಿತಿ ಅಧ್ಯಕ್ಷರ (ಸರಪಂಚ್) ಮಗ, ಪಂಚಾಯಿತಿ ಕಾರ್ಯದರ್ಶಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯಕ್ಕೆ 12 ನಾಯಿಗಳ ಕಳೇಬರ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

ಚುನಾವಣಾ ಭರವಸೆಯೇ ಕಾರಣ?

ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ, ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವುದಾಗಿ ಸ್ಥಳೀಯ ಅಭ್ಯರ್ಥಿಗಳು ಮತದಾರರಿಗೆ ಭರವಸೆ ನೀಡಿದ್ದರು. ಈಗ ಗೆದ್ದ ನಂತರ ಆ ಭರವಸೆಯನ್ನು ಈಡೇರಿಸಲು ಈ ಅಮಾನವೀಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.

ಇತರೆ ಪ್ರಕರಣಗಳು

ಇತ್ತೀಚೆಗೆ ಜಗತ್ಯಾಲ್ ಜಿಲ್ಲೆಯಲ್ಲಿ 300 ನಾಯಿಗಳನ್ನು ವಿಷ ಹಾಕಿ ಕೊಲ್ಲಲಾಗಿತ್ತು ಎಂದು ಆರೋಪಿಸಲಾಗಿದೆ. ಅದೇ ರೀತಿ ಹನುಮಕೊಂಡ ಮತ್ತು ಕಾಮರೆಡ್ಡಿಯಲ್ಲಿ ಜನವರಿ ಮತ್ತು ಡಿಸೆಂಬರ್‌ನಲ್ಲಿ ಈ ಜಿಲ್ಲೆಗಳಲ್ಲೂ ನೂರಾರು ನಾಯಿಗಳ ಹತ್ಯೆಯಾಗಿದೆ ಎಂಬ ಆರೋಪಗಳಿವೆ. ಸಿದ್ಧಿಪೇಟ್​​ನ ಬೊಪ್ಪಾಪುರ ಗ್ರಾಮದಲ್ಲಿ 50 ನಾಯಿಗಳನ್ನು ಅಕ್ರಮವಾಗಿ ಹಿಡಿದು ಕಾಡಿಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಸ್ಥಳೀಯಾಡಳಿತಗಳು ನಾಯಿಗಳ ಸಂತಾನಹರಣ ಮತ್ತು ಲಸಿಕೆ ಕಾರ್ಯಕ್ರಮಗಳಂತಹ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಬದಲು, ಕ್ರೂರ ಹತ್ಯೆಯ ಮಾರ್ಗವನ್ನು ಹಿಡಿದಿರುವುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Read More
Next Story