PM Modi Celebrates Diwali with Soldiers on INS Vikrant; Recalls ‘Operation Sindhur’
x

ಐಎನ್‌ಎಸ್‌ ವಿಕ್ರಾಂತ್‌ ನೌಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದರು.

ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ: 'ಆಪರೇಷನ್‌ ಸಿಂಧೂರ' ಸ್ಮರಣೆ

ಹಡಗಿನಲ್ಲಿ ರಾತ್ರಿ ಕಳೆದ ಅನುಭವವನ್ನು ಹಂಚಿಕೊಂಡ ಅವರು, "ಸಮುದ್ರದ ಮೇಲಿನ ಈ ರಾತ್ರಿ ಮತ್ತು ಮುಂಜಾನೆಯ ಸೂರ್ಯೋದಯ ಈ ಬಾರಿಯ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಿದೆ" ಎಂದು ಬಣ್ಣಿಸಿದರು.​


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಶಕದ ಸಂಪ್ರದಾಯವನ್ನು ಮುಂದುವರಿಸುತ್ತಾ, ಈ ಬಾರಿಯ ದೀಪಾವಳಿ ಹಬ್ಬವನ್ನು ಗೋವಾ-ಕಾರವಾರ ಕರಾವಳಿಯಲ್ಲಿ ನಿಯೋಜಿಸಲಾದ, ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನೌಕಾಪಡೆಯ ಯೋಧರೊಂದಿಗೆ ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರವನ್ನು ಶ್ಲಾಘಿಸಿದರು.​

ಸೋಮವಾರ (ಅಕ್ಟೋಬರ್ 20) ಐಎನ್‌ಎಸ್‌ ವಿಕ್ರಾಂತ್‌ಗೆ ಆಗಮಿಸಿದ ಪ್ರಧಾನಿ ಮೋದಿ, ನೌಕೆಯಲ್ಲಿದ್ದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಹಡಗಿನಲ್ಲಿ ರಾತ್ರಿ ಕಳೆದ ಅನುಭವವನ್ನು ಹಂಚಿಕೊಂಡ ಅವರು, "ಸಮುದ್ರದ ಮೇಲಿನ ಈ ರಾತ್ರಿ ಮತ್ತು ಮುಂಜಾನೆಯ ಸೂರ್ಯೋದಯ ಈ ಬಾರಿಯ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಿದೆ" ಎಂದು ಬಣ್ಣಿಸಿದರು.​

'ಆಪರೇಷನ್‌ ಸಿಂಧೂರ' ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ

ತಮ್ಮ ಭಾಷಣದಲ್ಲಿ, ಇತ್ತೀಚೆಗೆ ನಡೆದ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯನ್ನು ಪ್ರಧಾನಿ ಮೋದಿ ವಿಶೇಷವಾಗಿ ಪ್ರಸ್ತಾಪಿಸಿದರು. "ಮೂರು ಸೇನಾಪಡೆಗಳ ಅಸಾಧಾರಣ ಸಮನ್ವಯದಿಂದಾಗಿ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಗೆಲುವು ಸಾಧಿಸಲು ಸಾಧ್ಯವಾಯಿತು. ಐಎನ್‌ಎಸ್‌ ವಿಕ್ರಾಂತ್‌ನ ನಿಯೋಜನೆಯು ಪಾಕಿಸ್ತಾನದಲ್ಲಿ ಆತಂಕದ ಅಲೆಗಳನ್ನು ಸೃಷ್ಟಿಸಿತ್ತು," ಎಂದು ಅವರು ಹೇಳಿದರು.​

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ನೌಕಾಪಡೆಯು ಕೈಗೊಂಡ ಪ್ರತಿದಾಳಿಯೇ 'ಆಪರೇಷನ್‌ ಸಿಂಧೂರ' ಆಗಿತ್ತು. ಈ ಸಂದರ್ಭದಲ್ಲಿ 8 ರಿಂದ 10 ಯುದ್ಧನೌಕೆಗಳೊಂದಿಗೆ ಐಎನ್‌ಎಸ್‌ ವಿಕ್ರಾಂತ್ ಅನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜಿಸಿದ್ದು, ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು.​

ಐಎನ್‌ಎಸ್‌ ವಿಕ್ರಾಂತ್: ಆತ್ಮನಿರ್ಭರ ಭಾರತದ ಸಂಕೇತ

ಐಎನ್‌ಎಸ್‌ ವಿಕ್ರಾಂತ್ ಕೇವಲ ಒಂದು ಯುದ್ಧನೌಕೆಯಲ್ಲ, ಅದು 21ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಬದ್ಧತೆಯ ದ್ಯೋತಕವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. "ವಿಕ್ರಾಂತ್ ಭವ್ಯ, ವಿಶಾಲ, ವಿಶಿಷ್ಟ ಮತ್ತು ವಿಶೇಷವಾದುದು. ಇದು 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಯಶಸ್ಸಿನ ಪ್ರತೀಕ," ಎಂದು ಅವರು ಹೇಳಿದರು. ಇದೇ ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ದಿನದಂದು, ಭಾರತೀಯ ನೌಕಾಪಡೆಯು ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಿತವಾದ ಹೊಸ ಧ್ವಜವನ್ನು ಅಳವಡಿಸಿಕೊಂಡು ವಸಾಹತುಶಾಹಿ ಚಿಹ್ನೆಯನ್ನು ಕೈಬಿಟ್ಟಿದ್ದನ್ನು ಅವರು ಸ್ಮರಿಸಿದರು.​

ಕಾರ್ಯಕ್ರಮದ ಅಂಗವಾಗಿ ನೌಕಾ ಸಿಬ್ಬಂದಿ ದೇಶಭಕ್ತಿ ಗೀತೆಗಳನ್ನು ಹಾಡಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಪ್ರಧಾನಿ ಮೋದಿ ಯೋಧರಿಗೆ ಸಿಹಿ ಹಂಚಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. 2014ರಲ್ಲಿ ಪ್ರಧಾನಿಯಾದಾಗಿನಿಂದ, ಪ್ರತಿ ವರ್ಷ ದೀಪಾವಳಿಯನ್ನು ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳೊಂದಿಗೆ ಆಚರಿಸುವುದನ್ನು ನರೇಂದ್ರ ಮೋದಿ ರೂಢಿಸಿಕೊಂಡಿದ್ದಾರೆ.​​

Read More
Next Story