
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ವಿಎಚ್ಪಿ ವಕ್ತಾರ ವಿನೋದ್ ಬನ್ಸಾಲ್
ಬಾಲಿವುಡ್ನಲ್ಲಿ ಕೆಲಸ ಬೇಕಿದ್ದರೆ 'ಘರ್ ವಾಪಸಿ' ಆಗಲಿ: ಎ.ಆರ್. ರೆಹಮಾನ್ಗೆ ವಿಎಚ್ಪಿ ಸಲಹೆ
ಇದೆಲ್ಲದರ ನಡುವೆ ರೆಹಮಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, "ನಾನು ಕೆಲಸಕ್ಕಾಗಿ ಯಾರನ್ನೂ ಹುಡುಕಿಕೊಂಡು ಹೋಗುವುದಿಲ್ಲ ಅಥವಾ ಕೆಲಸದ ಅಗತ್ಯ ನನಗಿಲ್ಲ" ಎಂದು ತಿಳಿಸಿದ್ದಾರೆ.
ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರು ಬಾಲಿವುಡ್ನಲ್ಲಿ ತಮಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿಕೊಂಡ ಬೆನ್ನಲ್ಲೇ, ವಿವಾದವೊಂದು ಸ್ಫೋಟಗೊಂಡಿದೆ. ರೆಹಮಾನ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), "ನಿಮಗೆ ಬಾಲಿವುಡ್ನಲ್ಲಿ ಮತ್ತೆ ಕೆಲಸ ಬೇಕಿದ್ದರೆ ಮೊದಲು 'ಘರ್ ವಾಪಸಿ' (ಹಿಂದೂ ಧರ್ಮಕ್ಕೆ ಮರಳಿ) ಮಾಡಿ," ಎಂದು ವಿವಾದಾತ್ಮಕ ಸಲಹೆ ನೀಡಿದೆ.
ರೆಹಮಾನ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಚಿತ್ರರಂಗದಲ್ಲಿನ "ಕೋಮುವಾದಿ ಮನಸ್ಥಿತಿ"ಯಿಂದಾಗಿ ತಮಗೆ ಕೆಲಸ ಕಡಿಮೆಯಾಗುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಈಗ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದಿಲೀಪ್ ಕುಮಾರ್ ಟು ರೆಹಮಾನ್
ರೆಹಮಾನ್ ಹೇಳಿಕೆಗೆ ಕೆಂಡಾಮಂಡಲವಾಗಿರುವ ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, "ರೆಹಮಾನ್ ಅವರು ಮೂಲತಃ ಹಿಂದೂ (ದಿಲೀಪ್ ಕುಮಾರ್). ಅವರು ಇಸ್ಲಾಂಗೆ ಏಕೆ ಮತಾಂತರಗೊಂಡರು? ಈಗ ಮತ್ತೆ ಮಾತೃಧರ್ಮಕ್ಕೆ ಮರಳಿ (ಘರ್ ವಾಪಸಿ), ಆಗ ಬಹುಶಃ ನಿಮಗೆ ಮತ್ತೆ ಕೆಲಸ ಸಿಗಲು ಪ್ರಾರಂಭವಾಗಬಹುದು," ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಅಲ್ಲದೆ, ರೆಹಮಾನ್ ಅವರು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಹಾದಿ ತುಳಿಯುತ್ತಿದ್ದು, ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಚಿತ್ರರಂಗಕ್ಕೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಷ್ಟಕ್ಕೂ ರೆಹಮಾನ್ ಹೇಳಿದ್ದೇನು?
ಬಿಬಿಸಿ ಏಷ್ಯನ್ ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರೆಹಮಾನ್, "ಕಳೆದ ಎಂಟು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ನನಗೆ ಅವಕಾಶಗಳು ಕಡಿಮೆಯಾಗಿವೆ. ಇದರ ಹಿಂದೆ ಕೋಮುವಾದಿ ಮನಸ್ಥಿತಿಯ ಜನರ ಕೈವಾಡವಿರಬಹುದು. ಕೆಲವು ಮ್ಯೂಸಿಕ್ ಕಂಪನಿಗಳು ಮತ್ತು ಸೃಜನಶೀಲರಲ್ಲದ ವ್ಯಕ್ತಿಗಳು ಈಗ ಅಧಿಕಾರದಲ್ಲಿದ್ದು, ಅವರು ಯೋಜನೆಗಳನ್ನು ತಡೆಹಿಡಿಯುತ್ತಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೆಲಸಕ್ಕಾಗಿ ಯಾರ ಕಾಲು ಹಿಡಿಯಲ್ಲ
ಇದೆಲ್ಲದರ ನಡುವೆ ರೆಹಮಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ನಾನು ಕೆಲಸಕ್ಕಾಗಿ ಯಾರನ್ನೂ ಹುಡುಕಿಕೊಂಡು ಹೋಗುವುದಿಲ್ಲ ಅಥವಾ ಕೆಲಸದ ಅಗತ್ಯ ನನಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ನನಗೆ ಸಲ್ಲಬೇಕಾದ್ದು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ಕೆಲಸ ಕಡಿಮೆಯಾದರೆ, ನನ್ನ ಕುಟುಂಬದೊಂದಿಗೆ ಕಳೆಯಲು ನನಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಭಾವಿಸುತ್ತೇನೆ," ಎಂದು ಶಾಂತವಾಗಿಯೇ ಉತ್ತರಿಸಿದ್ದಾರೆ.

