Bomb Threat Emails Target TN CM Stalin, Actors Ajith, Arvind Swami and Khushbu
x

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌, ನಟ ಅಜಿತ್‌ ಕುಮಾರ್‌ ಹಾಗೂ ನಟಿ ಖುಷ್ಬೂ ಸುಂದರ್

ತಮಿಳುನಾಡು ಸಿಎಂ ಸ್ಟಾಲಿನ್, ನಟರಾದ ಅಜಿತ್, ಖುಷ್ಬೂಗೆ ಬಾಂಬ್ ಬೆದರಿಕೆ

ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಚಿತ್ರರಂಗದ ಮೂವರು ಪ್ರಮುಖರ ಮನೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.


Click the Play button to hear this message in audio format

ತಮಿಳುನಾಡಿನಲ್ಲಿ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಹಾಕುವ ಸರಣಿ ಮುಂದುವರಿದಿದ್ದು, ಈ ಬಾರಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಖ್ಯಾತ ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ನಟಿ ಖುಷ್ಬೂ ಸುಂದರ್ ಅವರ ನಿವಾಸಗಳಿಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ನಗರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತೀವ್ರ ಶೋಧ ನಡೆಸಿದ್ದಾರೆ.

ಭಾನುವಾರ ರಾತ್ರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಚಿತ್ರರಂಗದ ಮೂವರು ಪ್ರಮುಖರ ಮನೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ತಕ್ಷಣವೇ ಸಂಬಂಧಪಟ್ಟವರ ನಿವಾಸಗಳಿಗೆ ಭದ್ರತೆ ಹೆಚ್ಚಿಸಿ, ಶೋಧ ಕಾರ್ಯಕ್ಕೆ ಆದೇಶಿಸಿದರು.

ಗಂಟೆಗಳ ಕಾಲ ಶೋಧ, ಹುಸಿ ಎಂದು ದೃಢ

ಬೆದರಿಕೆ ಸಂದೇಶ ಬಂದ ಕೂಡಲೇ, ಚೆನ್ನೈ ಪೊಲೀಸರ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ನಾಲ್ಕೂ ಗಣ್ಯರ ನಿವಾಸಗಳಿಗೆ ಧಾವಿಸಿದವು. ಸಿಎಂ ಸ್ಟಾಲಿನ್, ನಟ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ಖುಷ್ಬೂ ಅವರ ಮನೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಟೆಗಳ ಕಾಲ ಕೂಲಂಕಷವಾಗಿ ಶೋಧ ನಡೆಸಲಾಯಿತು. ಅಂತಿಮವಾಗಿ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದು ಹುಸಿ ಬೆದರಿಕೆ ಎಂದು ಪೊಲೀಸರು ಖಚಿತಪಡಿಸಿದರು. ಈ ಕೃತ್ಯ ಎಸಗಿದವರ ಪತ್ತೆಗಾಗಿ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗಣ್ಯರನ್ನೇ ಗುರಿಯಾಗಿಸಿದ ಬೆದರಿಕೆ

ತಮಿಳುನಾಡಿನಲ್ಲಿ ಇತ್ತೀಚೆಗೆ ಪ್ರಸಿದ್ಧ ವ್ಯಕ್ತಿಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕುವುದು ಒಂದು ಟ್ರೆಂಡ್‌ನಂತೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರವಷ್ಟೇ ನಟ ಅಜಿತ್ ಕುಮಾರ್ ಅವರ ಇಂಜಂಬಕ್ಕಂ ನಿವಾಸಕ್ಕೆ ಇದೇ ರೀತಿ ಬಾಂಬ್ ಬೆದರಿಕೆ ಬಂದಿತ್ತು. ಆಗಲೂ ಪೊಲೀಸರು ಶೋಧ ನಡೆಸಿ ಅದು ಹುಸಿ ಎಂದು ಖಚಿತಪಡಿಸಿದ್ದರು. ಇದಕ್ಕೂ ಮುನ್ನ, ನಟ ಅರುಣ್ ವಿಜಯ್ ಅವರ ಎಕ್ಕಟ್ಟುತಂಗಲ್‌ನಲ್ಲಿರುವ ಮನೆಗೂ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು. ಅಕ್ಟೋಬರ್ ತಿಂಗಳಲ್ಲಿ, ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರ ಟಿ. ನಗರದಲ್ಲಿರುವ ಸ್ಟುಡಿಯೋಗೂ ಹುಸಿ ಬಾಂಬ್ ಬೆದರಿಕೆ ಹಾಕಲಾಗಿತ್ತು.

Read More
Next Story