
ಬಾಂಗ್ಲಾದೇಶದ ಆಟಗಾರರು
ಟಿ20 ವಿಶ್ವಕಪ್: ಬಾಂಗ್ಲಾ ಪಟ್ಟು ತಿರಸ್ಕರಿಸಿದ ಐಸಿಸಿ; ಭಾರತದಲ್ಲೇ ಪಂದ್ಯಗಳು ನಿಶ್ಚಿತ
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಪಂದ್ಯಾವಳಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶ ತಂಡ ಆಡಉವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡಬೇಕು ಎಂಬ ಅಲ್ಲಿನ ಕ್ರಿಕೆಟ್ ಸಂಸ್ಥೆಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತಿರಸ್ಕರಿಸಿದೆ. ಭಾರತದಲ್ಲಿ ಬಾಂಗ್ಲಾ ಆಟಗಾರರಿಗೆ ಭದ್ರತಾ ಬೆದರಿಕೆ ಇದೆ ಎಂಬ ಬಿಸಿಬಿಯ ವಾದದಲ್ಲಿ ಹುರುಳಿಲ್ಲ ಮತ್ತು ಅದು 'ವಿಶ್ವಾಸಾರ್ಹವಲ್ಲ' ಎಂದು ಐಸಿಸಿ ಮಂಡಳಿ ಅಭಿಪ್ರಾಯಪಟ್ಟಿದೆ.
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಪಂದ್ಯಾವಳಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ನಿರ್ಧಾರದನ್ವಯ ಬಾಂಗ್ಲಾದೇಶ ತಂಡವು ಈ ಹಿಂದೆ ನಿಗದಿಯಾದಂತೆ ಕೋಲ್ಕತ್ತಾ ಮತ್ತು ಮುಂಬೈ ನಗರಗಳಲ್ಲೇ ತನ್ನ ಪಂದ್ಯಗಳನ್ನು ಆಡಬೇಕಿದೆ. ಭದ್ರತಾ ಮೌಲ್ಯಮಾಪನಕ್ಕಾಗಿ ನಡೆದ ಉನ್ನತ ಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆಯ ನಂತರ ಐಸಿಸಿ ಈ ಅಂತಿಮ ತೀರ್ಮಾನಕ್ಕೆ ಬಂದಿದೆ.
ಭದ್ರತಾ ವರದಿಗಳ ಆಧಾರ
ಸ್ವತಂತ್ರ ಭದ್ರತಾ ಸಂಸ್ಥೆಗಳು ಮತ್ತು ಭಾರತೀಯ ಭದ್ರತಾ ಸಲಹೆಗಾರರ ವರದಿಗಳನ್ನು ಉಲ್ಲೇಖಿಸಿರುವ ಐಸಿಸಿ, "ಭಾರತದ ಯಾವುದೇ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ಆಟಗಾರರಿಗೆ, ಅಧಿಕಾರಿಗಳಿಗೆ ಅಥವಾ ಅಭಿಮಾನಿಗಳಿಗೆ ಅಪಾಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.ಪರಿಶೀಲನಾ ಸಮಿತಿಗಳು ಇಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿವೆ," ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಆತಿಥೇಯ ರಾಷ್ಟ್ರಗಳ ಸರ್ಕಾರಗಳಿಂದ ನಮಗೆ ಸಂಪೂರ್ಣ ಭದ್ರತೆಯ ಭರವಸೆ ಲಭ್ಯವಾಗಿದೆ. ಕ್ರಿಕೆಟ್ನ ನೈತಿಕತೆ ಮತ್ತು ಪಾರದರ್ಶಕತೆ ಕಾಪಾಡಲು ಐಸಿಸಿ ಬದ್ಧವಾಗಿದೆ ಎಂದು ಐಸಿಸಿ ವಕ್ತಾರರು ಹೇಳಿದ್ದಾರೆ.
ಮಣಿಯದ ಮಂಡಳಿ
ಬಾಂಗ್ಲಾದೇಶದ ಕೆಲವು ಆಟಗಾರರ ವೈಯಕ್ತಿಕ ವಿಚಾರೆಗಳನ್ನು ಮುಂದಿಟ್ಟುಕೊಂಡು ಪಂದ್ಯಗಳ ಸ್ಥಳ ಬದಲಾವಣೆಗೆ ಬಿಸಿಬಿ ಮೇಲೆ ಒತ್ತಡ ಹೇರಿತ್ತು. ವೈಯಕ್ತಿಕ ಅಥವಾ ಸ್ಥಳೀಯ ವಿವಾದಗಳು ಜಾಗತಿಕ ಟೂರ್ನಿಯ ಭದ್ರತಾ ಮಾನದಂಡಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಟೂರ್ನಿ ಆರಂಭಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ ಇಂತಹ ತಿದ್ದುಪಡಿಗಳು ಸರಿಯಲ್ಲ ಎಂದು ಎಚ್ಚರಿಸಿದೆ.
ಸಂಘಟಕರಿಗೆ ನಿರಾಳ
ಐಸಿಸಿಯ ಈ ದೃಢ ನಿಲುವಿನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಸ್ಥಳೀಯ ಸಂಘಟಕರು ನಿರಾಳವಾಗಿದ್ದಾರೆ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಕ್ರಿಕೆಟ್ ಹಬ್ಬಕ್ಕೆ ಆತಿಥೇಯ ರಾಷ್ಟ್ರಗಳು ಈಗಾಗಲೇ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ.

