
ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದ ಶ್ರೀವಾರಿ ಲಡ್ಡು ಪ್ರಸಾದ
ತಿರುಪತಿ ಲಡ್ಡು ಮಾರಾಟದಲ್ಲಿ ದಾಖಲೆ: 14 ಕೋಟಿ ಲಡ್ಡುಗಳ ವಿತರಿಸಿದ ವಿಶ್ವದ ಶ್ರೀಮಂತ ದೇಗುಲ
ಕಳೆದ ವರ್ಷದ ಏಪ್ರಿಲ್ನಿಂದ ಈ ವರ್ಷದ ಮಾರ್ಚ್ವರೆಗಿನ ಅವಧಿಯಲ್ಲಿ ಬರೋಬ್ಬರಿ 13.95 ಕೋಟಿಗೂ ಅಧಿಕ ಲಡ್ಡುಗಳನ್ನು ಭಕ್ತರು ಖರೀದಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1.76 ಲಕ್ಷ ಹೆಚ್ಚುವರಿ ಲಡ್ಡುಗಳು ಮಾರಾಟವಾಗಿವೆ.
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಕಾತರದಿಂದ ಕಾಯುವ ಭಕ್ತರಿಗೆ, ದರ್ಶನದ ಬಳಿಕ ದೊರೆಯುವ ಶ್ರೀವಾರಿ ಲಡ್ಡು ಪ್ರಸಾದವೂ ಅಷ್ಟೇ ಪವಿತ್ರ ಹಾಗೂ ಮಹತ್ವದ್ದು. ಭಗವಂತನ ದರ್ಶನ ಪಡೆದು ಹಿಂದಿರುಗುವ ಪ್ರತಿಯೊಬ್ಬರೂ ಲಡ್ಡು ಪ್ರಸಾದವನ್ನು ಮನೆಗೆ ಕೊಂಡೊಯ್ಯಲು ಇಚ್ಛಿಸುತ್ತಾರೆ. ಇದೇ ಕಾರಣಕ್ಕೆ ತಿರುಮಲದಲ್ಲಿ ಲಡ್ಡುಗಳ ಮಾರಾಟ ಇದೀಗ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಕಳೆದ ವರ್ಷದ ಏಪ್ರಿಲ್ನಿಂದ ಈ ವರ್ಷದ ಮಾರ್ಚ್ವರೆಗಿನ ಅವಧಿಯಲ್ಲಿ ಬರೋಬ್ಬರಿ 13.95 ಕೋಟಿಗೂ ಅಧಿಕ ಲಡ್ಡುಗಳನ್ನು ಭಕ್ತರು ಖರೀದಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1.76 ಲಕ್ಷ ಹೆಚ್ಚುವರಿ ಲಡ್ಡುಗಳು ಮಾರಾಟವಾಗಿದ್ದು, ಇತ್ತೀಚಿನ ಏಪ್ರಿಲ್ ತಿಂಗಳ ಒಂದು ದಿನದ ಅಂಕಿಅಂಶದ ಪ್ರಕಾರ ಒಂದೇ ದಿನ 3.8 ಲಕ್ಷ ಲಡ್ಡುಗಳು ವಿತರಣೆಯಾಗಿರುವುದು ಪ್ರಸಾದಕ್ಕಿರುವ ಬೇಡಿಕೆಯನ್ನು ಸಾಬೀತುಪಡಿಸಿದೆ.
ಲಾಭ-ನಷ್ಟದ ಲೆಕ್ಕಾಚಾರವಿಲ್ಲದ ಸೇವೆ
ಭಕ್ತರ ಭಾವನೆಗಳಿಗೆ ಅಗ್ರಮಾನ್ಯ ಬೆಲೆ ಕೊಡುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಲಡ್ಡು ಮಾರಾಟದಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರ ಮಾಡುವುದಿಲ್ಲ. ವಾಸ್ತವವಾಗಿ, ಗುಣಮಟ್ಟದ ಕಚ್ಚಾವಸ್ತುಗಳನ್ನು ಬಳಸಿ ಒಂದು ಲಡ್ಡು ತಯಾರಿಸಲು ಟಿಟಿಡಿಗೆ ಕನಿಷ್ಠ 55 ರಿಂದ 60 ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯು ಸಾಮಾನ್ಯ ಭಕ್ತರಿಗೆ ಕೇವಲ 50 ರೂಪಾಯಿಗಳಿಗೆ ಈ ಲಡ್ಡುವನ್ನು ಮಾರಾಟ ಮಾಡುತ್ತಿದೆ. ಇದರ ಅರ್ಥ, ಮಾರಾಟವಾಗುವ ಪ್ರತಿಯೊಂದು ಲಡ್ಡುವಿನ ಮೇಲೂ ಟಿಟಿಡಿ 5 ರಿಂದ 10 ರೂಪಾಯಿಗಳಷ್ಟು ನಷ್ಟವನ್ನು ಅಥವಾ ಸಬ್ಸಿಡಿ ಹೊರೆಯನ್ನು ತಾನೇ ಭರಿಸುತ್ತಿದೆ. ದರ್ಶನ ಪಡೆದ ಪ್ರತಿದಿನ ಸುಮಾರು 65 ಸಾವಿರಕ್ಕೂ ಅಧಿಕ ಭಕ್ತರಿಗೆ ಸಂಪೂರ್ಣ ಉಚಿತವಾಗಿ ಲಡ್ಡು ವಿತರಿಸುವ ಬೃಹತ್ ಆರ್ಥಿಕ ಜವಾಬ್ದಾರಿಯನ್ನೂ ಮಂಡಳಿ ನಿರ್ವಹಿಸುತ್ತಿದೆ.
ಕಳಪೆ ಆರೋಪಕ್ಕೆ ಬ್ರೇಕ್
ಕಳೆದ ಎರಡು ವರ್ಷಗಳಿಂದ ಲಡ್ಡು ತಯಾರಿಕೆಯಲ್ಲಿ ಕಳಪೆ ತುಪ್ಪ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ, ಟಿಡಿಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲಾಗಿದೆ. ಲಡ್ಡು ತಯಾರಿಕೆಯಲ್ಲಿ ಶೇಕಡಾ 100ರಷ್ಟು ಶುದ್ಧ ಹಸುವಿನ ತುಪ್ಪವನ್ನೇ ಬಳಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ತುಪ್ಪದ ಬಳಕೆಯ ಜೊತೆಗೆ ಪೋಟು (ಅಡುಗೆಮನೆ) ವಿಭಾಗದಲ್ಲಿ ಸಿಬ್ಬಂದಿ ಹೆಚ್ಚಳ ಹಾಗೂ ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಸ್ಪಷ್ಟಪಡಿಸಿದ್ದಾರೆ. ಗುಣಮಟ್ಟ, ರುಚಿ ಹಾಗೂ ಪರಿಮಳದಲ್ಲಿನ ಈ ಕಟ್ಟುನಿಟ್ಟಿನ ಕ್ರಮದಿಂದಾಗಿಯೇ ಪ್ರಸಾದದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ದಿನವೊಂದಕ್ಕೆ ಬೇಕಾಗುವ ಬೃಹತ್ ಪ್ರಮಾಣದ ಕಚ್ಚಾವಸ್ತುಗಳ ವಿವರ
ತಿರುಮಲದ ಪೋಟು ಕಾರ್ಮಿಕರು ನಿರಂತರವಾಗಿ ಶ್ರಮಿಸುವ ಮೂಲಕ ಪ್ರತಿದಿನ ಸರಾಸರಿ 3.5 ರಿಂದ 4 ಲಕ್ಷದಷ್ಟು ಲಡ್ಡುಗಳನ್ನು ಸಿದ್ಧಪಡಿಸುತ್ತಾರೆ. ಇಷ್ಟು ದೊಡ್ಡ ಪ್ರಮಾಣದ ಪ್ರಸಾದ ತಯಾರಿಕೆಗೆ ಪ್ರತಿದಿನ 10 ಟನ್ ಕಡಲೆ ಹಿಟ್ಟು, 10 ಟನ್ ಸಕ್ಕರೆ, 300 ರಿಂದ 400 ಲೀಟರ್ ಶುದ್ಧ ಹಸುವಿನ ತುಪ್ಪ, 700 ಕೆ.ಜಿ ಗೋಡಂಬಿ, 500 ಕೆ.ಜಿ ಕಲಾಕಂದ್ (ಸಕ್ಕರೆ ಅಚ್ಚು) ಹಾಗೂ 540 ಕೆ.ಜಿ ಒಣದ್ರಾಕ್ಷಿಯನ್ನು ಬಳಸಲಾಗುತ್ತದೆ. ಇದರ ಜೊತೆಗೆ ಪ್ರಸಾದದ ವಿಶಿಷ್ಟ ಪರಿಮಳಕ್ಕಾಗಿ ಏಲಕ್ಕಿ ಮತ್ತು ಹಸಿರು ಕರ್ಪೂರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಲಾಗುತ್ತದೆ.
ಬೃಹತ್ ಬಜೆಟ್ ಹಂಚಿಕೆ ಹಾಗೂ ನಿರೀಕ್ಷಿತ ಆದಾಯ
ಟಿಟಿಡಿ ತನ್ನ ವಾರ್ಷಿಕ ಬಜೆಟ್ನಲ್ಲಿ ಪ್ರಸಾದ ತಯಾರಿಕೆಗಾಗಿಯೇ ಬಹುದೊಡ್ಡ ಮೊತ್ತವನ್ನು ಮೀಸಲಿಡುತ್ತದೆ. ಈ ವರ್ಷ ಪ್ರಸಾದ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳಾದ ತುಪ್ಪ ಮತ್ತು ಮಸಾಲೆ ಪದಾರ್ಥಗಳ ಖರೀದಿಗಾಗಿಯೇ ಬರೋಬ್ಬರಿ 974 ಕೋಟಿ ರೂಪಾಯಿಗಳನ್ನು ಟಿಟಿಡಿ ಹಂಚಿಕೆ ಮಾಡಿದೆ. ಈ ಬೃಹತ್ ವೆಚ್ಚದ ನಡುವೆಯೂ, 2025-26ರ ಹಣಕಾಸು ವರ್ಷದಲ್ಲಿ ಶ್ರೀವಾರಿ ಲಡ್ಡು ಪ್ರಸಾದಗಳ ಮಾರಾಟದಿಂದಲೇ ಸುಮಾರು 600 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯನ್ನು ಟಿಟಿಡಿ ಹೊಂದಿದೆ. ಮುಂಬರುವ 2026-27ನೇ ಸಾಲಿಗೆ ಈ ಆದಾಯ 650 ಕೋಟಿ ರೂಪಾಯಿಗಳನ್ನು ತಲುಪುವ ಅಂದಾಜನ್ನು ದೇವಸ್ಥಾನದ ಅಂಕಿಅಂಶ ಇಲಾಖೆ ವ್ಯಕ್ತಪಡಿಸಿದೆ.
ಭಕ್ತರಿಗೆ ಉಚಿತ ಪ್ರಸಾದ ವಿತರಣೆ
ತಿರುಮಲಕ್ಕೆ ನಿತ್ಯವೂ ಸರಾಸರಿ 75 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಸರ್ವ ದರ್ಶನ, ವಿವಿಐಪಿ, 300 ರೂಪಾಯಿಗಳ ವಿಶೇಷ ದರ್ಶನ ಸೇರಿದಂತೆ ಯಾವುದೇ ಮಾರ್ಗದಲ್ಲಿ ಸ್ವಾಮಿಯ ದರ್ಶನ ಪಡೆದು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಿಂದ ಹೊರಬರುವ ಪ್ರತಿಯೊಬ್ಬ ಭಕ್ತರಿಗೂ ಟಿಟಿಡಿ ವತಿಯಿಂದ ಒಂದು ಲಡ್ಡುವನ್ನು ಉಚಿತವಾಗಿ ನೀಡಲಾಗುತ್ತದೆ. ದರ್ಶನ ಮುಗಿದ ನಂತರ ನೀಡಲಾಗುವ ದರ್ಶನ ಟಿಕೆಟ್ ಟೋಕನ್ ಅನ್ನು ಪ್ರಸಾದದ ಕೌಂಟರ್ಗಳಲ್ಲಿ ತೋರಿಸಿ ಇದನ್ನು ಪಡೆಯಬಹುದು. ಒಂದು ವೇಳೆ ಭಕ್ತರು ಹೆಚ್ಚುವರಿ ಲಡ್ಡುಗಳನ್ನು ಬಯಸಿದರೆ, ಪ್ರತಿ ಲಡ್ಡುವಿಗೆ 50 ರೂಪಾಯಿ ಪಾವತಿಸಿ ತಮಗೆ ಬೇಕಾದಷ್ಟು ಲಡ್ಡುಗಳನ್ನು ಖರೀದಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದಟ್ಟಣೆ ಹೆಚ್ಚಾದಾಗ ಅಥವಾ ವಿಶೇಷ ದಿನಗಳಲ್ಲಿ ಪ್ರಸಾದದ ಕೊರತೆಯಾಗದಂತೆ ಎಚ್ಚರವಹಿಸುವ ಟಿಟಿಡಿ, ಮುಂಜಾಗ್ರತಾ ಕ್ರಮವಾಗಿ 7 ರಿಂದ 8 ಲಕ್ಷ ಲಡ್ಡುಗಳನ್ನು ಬಫರ್ ಸ್ಟಾಕ್ (ಮೀಸಲು) ಆಗಿ ಸದಾ ಕಾಯ್ದಿರಿಸಿಕೊಳ್ಳುತ್ತದೆ.

