Reservation for Scheduled Castes: High Court Stays Government’s New Appointment Order
x

ಕರ್ನಾಟಕ ಹೈಕೋರ್ಟ್‌ 

ಪರಿಶಿಷ್ಟ ಜಾತಿ ಒಳಮೀಸಲಾತಿ: ಸರ್ಕಾರದ ನೂತನ ನೇಮಕ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಕರ್ನಾಟಕದ ಅಸ್ಪರ್ಶ್ಯ ಅಲೆಮಾರಿಗಳ ಒಕ್ಕೂಟ ಮತ್ತು ಇತರ ಸಮುದಾಯಗಳು, ಸರ್ಕಾರದ ಈ ಒಳಮೀಸಲಾತಿ ವರ್ಗೀಕರಣವು ಸ್ವೇಚ್ಛೆಯಿಂದ ಕೂಡಿದೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.


Click the Play button to hear this message in audio format

ಪರಿಶಿಷ್ಟ ಜಾತಿಗಳಿಗೆ (SC) ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. 6:6:5ರ ಅನುಪಾತದಲ್ಲಿ ಮೀಸಲಾತಿ ನಿಗದಿಪಡಿಸಿ ಸರ್ಕಾರವು ಆಗಸ್ಟ್‌ 25ರಂದು ಹೊರಡಿಸಿದ್ದ ಆದೇಶದ ಅನ್ವಯ ಯಾವುದೇ ನೇಮಕಾತಿಗಳನ್ನು ಮಾಡದಂತೆ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ, ಇದು ಒಳಮೀಸಲಾತಿ ಜಾರಿಯ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದೇಕೆ?

ಕರ್ನಾಟಕದ ಅಸ್ಪೃಶ್ಯ ಅಲೆಮಾರಿಗಳ ಒಕ್ಕೂಟ ಮತ್ತು ಇತರ ಸಮುದಾಯಗಳು, ಸರ್ಕಾರದ ಈ ಒಳಮೀಸಲಾತಿ ವರ್ಗೀಕರಣವು ಸ್ವೇಚ್ಛೆಯಿಂದ ಕೂಡಿದೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು, ಅರ್ಜಿದಾರರ ವಾದದಲ್ಲಿನ ಗಂಭೀರತೆಯನ್ನು ಪರಿಗಣಿಸಿ, ಈ ಮಧ್ಯಂತರ ಆದೇಶವನ್ನು ನೀಡಿದೆ.

ಅಸಮಾನತೆಯ ಆರೋಪ

ಅರ್ಜಿದಾರರು, ಸರ್ಕಾರದ ಈ ವರ್ಗೀಕರಣವು ಸಂವಿಧಾನದ ಸಮಾನತೆಯ ತತ್ವಕ್ಕೆ (ವಿಧಿ 14, 15(4) ಮತ್ತು 16) ವಿರುದ್ಧವಾಗಿದೆ ಎಂದು ಬಲವಾಗಿ ವಾದಿಸಿದ್ದಾರೆ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾ, ತಾವು ಅತ್ಯಂತ ಹಿಂದುಳಿದ ಮತ್ತು ಅಸ್ಪೃಶ್ಯತೆಗೆ ಒಳಗಾದ ಸಮುದಾಯಗಳಾಗಿದ್ದು, ನೂತನ ವರ್ಗೀಕರಣದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ.

"ಸಾಕಷ್ಟು ಸಾಮಾಜಿಕ ತಾರತಮ್ಯವಿದ್ದರೂ, ಅತೀ ಹಿಂದುಳಿದ ಸಮುದಾಯಗಳನ್ನು ಮತ್ತು ಕಡಿಮೆ ಹಿಂದುಳಿದ ಜಾತಿಗಳನ್ನು ಒಂದೇ 'ಸಿ' ಗುಂಪಿನಲ್ಲಿ ಸೇರಿಸಲಾಗಿದೆ. ಅಸಮಾನರನ್ನು ಸಮಾನವಾಗಿ ಪರಿಗಣಿಸುವುದು ನ್ಯಾಯವಲ್ಲ. ಈಗಾಗಲೇ ಮುಂದುವರಿದಿರುವ ಜಾತಿಗಳು 'ಎ' ಮತ್ತು 'ಬಿ' ಗುಂಪಿನಲ್ಲಿರುವುದರಿಂದ, ಮೀಸಲಾತಿಯ ಹೆಚ್ಚಿನ ಲಾಭ ಅವರಿಗೆ ಸಿಗಲಿದೆ," ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅತಾರ್ಕಿಕ ವಿಭಜನೆಯು ಒಳಮೀಸಲಾತಿಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂಬುದು ಅವರ ಪ್ರಮುಖ ಆಕ್ಷೇಪಣೆಯಾಗಿದೆ.

ನ್ಯಾಯಾಲಯದ ಆದೇಶವೇನು?

ವಾದ-ವಿವಾದಗಳನ್ನು ಆಲಿಸಿದ ನ್ಯಾಯಪೀಠವು, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿದ್ದರೂ, ಅಂತಿಮವಾಗಿ ಯಾವುದೇ ನೇಮಕಾತಿ ಆದೇಶವನ್ನು ಹೊರಡಿಸಬಾರದು ಎಂದು ಸ್ಪಷ್ಟಪಡಿಸಿದೆ. ಈ ಕುರಿತು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಗೆ ನವೆಂಬರ್ 5ರವರೆಗೆ ಕಾಲಾವಕಾಶ ನೀಡಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಲಾಗಿದೆ.

Read More
Next Story