
ಚುನಾವಣೆ ಸೋಲಿನ ಭಯಕ್ಕೆ ಕೇರಳ ಸಿಎಂ ಸಲ್ಲದ ರಾಜಕೀಯ: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
ಯಲಹಂಕದ ಕೋಗಿಲು ಬಡಾವಣೆಯಲ್ಲಿನ ತೆರವು ಕಾರ್ಯಾಚರಣೆಯು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಹೇಳಿಕೆ ವಿವಾದಕ್ಕೆ ಹೊಸ ಅಯಾಮ ಸಿಕ್ಕಂತಾಗಿದೆ.
ಬೆಂಗಳೂರು ನಗರದ ವೇಗದ ಬೆಳವಣಿಗೆಯೊಂದಿಗೆ ಸರ್ಕಾರಿ ಜಮೀನುಗಳ ರಕ್ಷಣೆ ಮತ್ತು ಅಕ್ರಮ ಒತ್ತುವರಿಗಳ ತೆರವು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಲಹಂಕದ ಕೋಗಿಲು ಬಡಾವಣೆಯಲ್ಲಿನ ತೆರವು ಕಾರ್ಯಾಚರಣೆಯು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿಗಳ ಹಸ್ತಕ್ಷೇಪವನ್ನು ಕುತಂತ್ರ ರಾಜಕೀಯ ಎಂದು ಹೇಳಿಕೆ ನೀಡಿರುವುದು ಇದೀಗ ವಿವಾದಕ್ಕೆ ಹೊಸ ಅಯಾಮ ಸಿಕ್ಕಂತಾಗಿದೆ.
ಯಲಹಂಕದ ಕೋಗಿಲು ಬಡಾವಣೆಯಲ್ಲಿರುವ ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ಸರ್ಕಾರವು ಘನತ್ಯಾಜ್ಯ ವಿಲೇವಾರಿಗಾಗಿ ಮೀಸಲಿಟ್ಟಿದ್ದ ಕ್ವಾರಿ ಜಾಗವಾಗಿದೆ. ಒಂದು ನಗರದ ಆರೋಗ್ಯಕರ ಬೆಳವಣಿಗೆಗೆ ವೈಜ್ಞಾನಿಕ ಕಸ ವಿಲೇವಾರಿ ಅತ್ಯಗತ್ಯ. ಆದರೆ, ಈ ಸರ್ಕಾರಿ ಜಾಗವನ್ನು ಇತ್ತೀಚಿನ ವರ್ಷಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಗುಡಿಸಲು ಮತ್ತು ಶೆಡ್ಗಳನ್ನು ನಿರ್ಮಿಸಲಾಗಿತ್ತು. ಇದನ್ನು ತೆರವುಗೊಳಿಸಿರುವುದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.
ಕೋಗಿಲು ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸರ್ಕಾರಿ ಜಾಗದಲ್ಲಿ ಅನಧಿಕೃತ ನಿರ್ಮಾಣಗಳ ತೆರವು ಜಾಗವನ್ನು ಡಿ.ಕೆ. ಶಿವಕುಮಾರ್ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ, ಮುಂಬರುವ ಕೇರಳ ವಿಧಾನಸಭಾ ಚುನಾವನಣೆಯಲ್ಲಿ ಸೋಲುವ ಭೀತಿಯಿಂದ ಕೇರಳ ಮುಖ್ಯಮಂತ್ರಿ ಅವರು ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕೋಗಿಲು ಬಡಾವಣೆಯಲ್ಲಿರುವ ಕ್ವಾರಿ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಮಾಡಲು ಸರ್ಕಾರ ಒಂಬತ್ತು ವರ್ಷಗಳ ಹಿಂದೆಯೇ ನೀಡಿತ್ತು. ಕೆಲವರು ಈಗ ಬಂದು ಇಲ್ಲಿನ ಜಾಗ ಒತ್ತುವರಿ ಮಾಡಿ ಗುಡಿಸಲು, ಶೆಡ್ ಹಾಕಿದ್ದಾರೆ. ಇದು ಸರ್ಕಾರಿ ಜಾಗವಾಗಿರುವ ಕಾರಣ ಮತದಾರರ ಚೀಟಿ ನೀಡಿಲ್ಲ. ಇಲ್ಲಿನ ಅಕ್ಕಪಕ್ಕ ಪ್ರದೇಶದವರಿಗೆ ಮತದಾರರ ಚೀಟಿ ನೀಡಲಾಗಿದೆ. ಈ ಪ್ರದೇಶವು ವಾಸಕ್ಕೆ ಯೋಗ್ಯವಾದುದಲ್ಲ. ಕಸ ವಿಲೇವಾರಿ ನಡೆಯುವ ಜಾಗದಲ್ಲಿ ವಾಸಿಸುವುದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕ ರೋಗಗಳ ಭೀತಿ ಇರುವುದರಿಂದ, ಮಾನವೀಯ ದೃಷ್ಟಿಯಿಂದ ಮತ್ತು ಸರ್ಕಾರದ ಜಾಗವನ್ನು ಕಾಪಾಡುವ ಉದ್ದೇಶದಿಂದ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಒತ್ತುವರಿ ತೆರವು ಮಾಡುವ ಮುನ್ನ ನೋಟಿಸ್ ನೀಡುವುದು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸುವುದು ಸೇರಿದಂತೆ ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಹೇಳಿದರು.
ಕೆಲವರು ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷದವರು ಚುನಾವಣೆ ಸೋಲಿನ ಭಯದಿಂದ ಅಲ್ಪಸಂಖ್ಯಾತರ ಸಿಂಪತಿ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಬೇಕು. ಇದು ನಮ್ಮ ರಾಜ್ಯದ ಸ್ಥಳೀಯ ವಿಚಾರ. ಇಲ್ಲಿ ವಾಸ ಮಾಡಿದರೆ ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ನಾನು ಇಲ್ಲಿಗೆ ಬಂದಾಗ ಅಲ್ಪಸಂಖ್ಯಾತ ಸಮುದಾಯದವರು ಜೈಕಾರ ಹಾಕುತ್ತಿದ್ದಾರೆ. ನಾವು ತಪ್ಪು ಮಾಡಿದ್ದರೆ ಅವರು ಧಿಕ್ಕಾರ ಹಾಕುತ್ತಿದ್ದರು ಎಂದರು.
ಏಕಾಏಕಿ ಸ್ಲಂ ನಿರ್ಮಿಸಲು ಅವಕಾಶ ನೀಡುವುದಿಲ್ಲ
ಈ ತೆರವಿನಿಂದ ಸೂರು ಕಳೆದುಕೊಂಡ ಬಡವರಿಗೆ ಹಾಗೂ ಅರ್ಹರ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಕೆಲವರು ಇವರಿಂದ ಒಂದು ಲಕ್ಷ, ಒಂದೂವರೇ ಲಕ್ಷ ಹಣ ಪಡೆದು ಅಕ್ರಮವಾಗಿ ಗುಡಿಸಲು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಬೇರೆ ರಾಜ್ಯಗಳ ರೀತಿ ಏಕಾಏಕಿ ಸ್ಲಂ ಸೃಷ್ಟಿಸಲು ಬಿಡುವುದಿಲ್ಲ. ಬೆಂಗಳೂರಿನಲ್ಲಿ ಈ ರೀತಿ ಒತ್ತುವರಿ ತೆರವು ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿರುತ್ತದೆ. ಸರ್ಕಾರಿ ಜಾಗ ಕಾಪಾಡಿಕೊಳ್ಳಲು ಇದು ಸಹಜ ಪ್ರಕ್ರಿಯೆಯಾಗಿದೆ. ಈ ಕಸ ವಿಲೇವಾರಿ ಜಾಗದಲ್ಲಿ ಕಾಂಪೌಂಡ್ ಹಾಕುವ ಕಾರ್ಯ ಎರಡು ವರ್ಷದಿಂದ ನಡೆಯುತ್ತಿದೆ. ಇಲ್ಲಿ ಯಾರಿಗಾದರೂ ಅನ್ಯಾಯ ಆಗಿದ್ದರೆ, ಸರ್ಕಾರಿ ಯೋಜನೆಯಲ್ಲಿ ಮನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಣ ಪಡೆದವರ ವಿರುದ್ಧ ಕ್ರಮ
ಜನರಿಂದ ಹಣ ಪಡೆದುಕೊಳ್ಳಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕವಾಗಿ ಈ ಮಾಹಿತಿ ಹೇಳಲು ಆಗುವುದಿಲ್ಲ. ನಮ್ಮ ತನಿಖಾ ತಂಡ ಅದನ್ನು ಪರಿಶೀಲನೆ ಮಾಡಲಿದೆ. ಈ ಪ್ರದೇಶ ಹೇಗಿತ್ತು ಎಂಬುದರ ಬಗ್ಗೆ ಪ್ರತಿ ವರ್ಷದ ಗೂಗಲ್ ಮ್ಯಾಪ್ ಫೋಟೋಗಳು ನಮ್ಮ ಬಳಿ ಇವೆ. ಅವುಗಳನ್ನು ಬಿಡುಗಡೆ ಮಾಡಲಾಗುವುದು. ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಇಂತಹ ಭೂಗಳ್ಳರಿಗೆ ಬೆಂಗಳೂರಿನಲ್ಲಿ ಅವಕಾಶ ನೀಡುವುದಿಲ್ಲ. ಬಡವರಿಗೆ ನಾವು ಖಂಡಿತವಾಗಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

