ಕೋಗಿಲು ಬಂಡೆ ಒತ್ತುವರಿ ತೆರವು- ಇಂದು ಮಾನವ ಹಕ್ಕುಗಳ ಆಯೋಗ ಭೇಟಿ; ಉನ್ನತ ಅಧಿಕಾರಿಗಳಿಗೆ ಸಂಕಷ್ಟ!
x
ಕೋಗಿಲು ಬಂಡೆ ಬಡಾವಣೆ

ಕೋಗಿಲು ಬಂಡೆ ಒತ್ತುವರಿ ತೆರವು- ಇಂದು ಮಾನವ ಹಕ್ಕುಗಳ ಆಯೋಗ ಭೇಟಿ; ಉನ್ನತ ಅಧಿಕಾರಿಗಳಿಗೆ ಸಂಕಷ್ಟ!

ಯಲಹಂಕದ ಕೋಗಿಲು ಬಡಾವಣೆಯಲ್ಲಿ 300 ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ. ಅಧ್ಯಕ್ಷ ಶ್ಯಾಮ್ ಭಟ್ ನೇತೃತ್ವದ ತಂಡ ಇಂದು ಸ್ಥಳ ಪರಿಶೀಲನೆ ನಡೆಸಲಿದೆ


Click the Play button to hear this message in audio format

ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಂಡೆ (ಶ್ರೀನಿವಾಸಪುರ) ಪ್ರದೇಶದಲ್ಲಿ ನಡೆದ ಈ ಪ್ರಕರಣವು ಕೇವಲ ಒಂದು ಒತ್ತುವರಿ ತೆರವು ಕಾರ್ಯಾಚರಣೆಯಾಗಿ ಉಳಿಯದೆ, ಈಗ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಂತರರಾಜ್ಯ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ಸಾಮೂಹಿಕ ಒತ್ತುವರಿ ತೆರವು ಕಾರ್ಯಾಚರಣೆಯ ಕುರಿತು ಸಲ್ಲಿಕೆಯಾಗಿರುವ ದೂರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (SHRC) ಗಂಭೀರವಾಗಿ ಪರಿಗಣಿಸಿದೆ. ಮಾನವ ಹಕ್ಕುಗಳ ಹೋರಾಟಗಾರ ಟಿ. ನರಸಿಂಹಮೂರ್ತಿ ಅವರು ನೀಡಿದ ದೂರಿನ ಮೇರೆಗೆ ಆಯೋಗದ ಉನ್ನತ ಮಟ್ಟದ ನಿಯೋಗವು ಇಂದು ಸ್ಥಳ ಪರಿಶೀಲನೆ ನಡೆಸಲಿದೆ.

ಆಯೋಗದ ಅಧ್ಯಕ್ಷರಾದ ಶ್ಯಾಮ್ ಭಟ್, ನ್ಯಾಯಾಂಗ ಸದಸ್ಯರಾದ ವೆಂಕಟಿಕೋಟಿ, ಐಜಿಪಿ (ಮಾನವ ಹಕ್ಕುಗಳು), ಡಿವೈಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳ ತಂಡವು, ಸೋಮವಾರ ಮಧ್ಯಾಹ್ನ 12:00 ಗಂಟೆಗೆ ಶ್ರೀನಿವಾಸಪುರದ ಕೋಗಿಲು ಬಡಾವಣೆಯ (ಸರ್ವೆ ನಂ. 99) ತೆರವು ಪ್ರದೇಶಕ್ಕೆ ಭೇಟಿ ನೀಡಲಿದೆ.

ತನಿಖೆಯ ಉದ್ದೇಶ

ಮನೆ ಕಳೆದುಕೊಂಡು ತೆರೆದ ಆಕಾಶದಡಿ ವಾಸಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 1,000ಕ್ಕೂ ಹೆಚ್ಚು ಸಂತ್ರಸ್ತರೊಂದಿಗೆ ಆಯೋಗವು ಸಂವಾದ ನಡೆಸಲಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಗಾಳಿಗೆ ತೂರಿ ಈ ಕಾರ್ಯಾಚರಣೆ ನಡೆಸಲಾಗಿದೆಯೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.

ದೂರಿನಲ್ಲೇನಿದೆ?

ಡಿಸೆಂಬರ್ 21ರ ಬೆಳಗಿನ ಜಾವ 4:00 ಗಂಟೆಗೆ ಯಾವುದೇ ಮುನ್ಸೂಚನೆ ನೀಡದೆ ಸುಮಾರು 300 ಮನೆಗಳನ್ನು ನೆಲಸಮ ಮಾಡಲಾಗಿದೆ ಎಂದು ನರಸಿಂಹಮೂರ್ತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ (2024 INSC 866) ನೇರ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ, ಯಾವುದೇ ಕಟ್ಟಡ ತೆರವು ಮಾಡುವ ಮೊದಲು ಕನಿಷ್ಠ 15 ದಿನಗಳ ನೋಟಿಸ್ ನೀಡಬೇಕು ಮತ್ತು ವೈಯಕ್ತಿಕ ವಿಚಾರಣೆಗೆ ಅವಕಾಶ ನೀಡಬೇಕು.

ದೂರಿನಲ್ಲಿ ಹೆಸರಿಸಲಾದ ಪ್ರಮುಖ ಅಧಿಕಾರಿಗಳು:

ದೂರುದಾರರು ಈ ಕೆಳಗಿನ ಹಿರಿಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ. ಸಂತ್ರಸ್ತರಿಗೆ ಆಗಿರುವ ಆರ್ಥಿಕ ನಷ್ಟವನ್ನು ಈ ಅಧಿಕಾರಿಗಳ ವೈಯಕ್ತಿಕ ವೇತನದಿಂದ ಭರಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

1. ಮಹೇಶ್ವರ್ ರಾವ್ ಎಂ, IAS (ಮುಖ್ಯ ಆಯುಕ್ತರು, GBA)

2. ಪೊಮ್ಮಾಲ ಸುನಿಲ್ ಕುಮಾರ್, IAS (ಆಯುಕ್ತರು, BNCC)

3. ಕರೀಗೌಡ, IAS (CEO, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ)

4. ಜಗದೀಶ್, IAS (ಜಿಲ್ಲಾಧಿಕಾರಿ, ಬೆಂಗಳೂರು ನಗರ)

5. ಸೀಮಂತ್ ಕುಮಾರ್ ಸಿಂಗ್, IPS (ಬೆಂಗಳೂರು ನಗರ ಪೊಲೀಸ್ ಆಯುಕ್ತರು)


Read More
Next Story