ಎರಡೂವರೆ ವರ್ಷದ ಮಗುವಿನ ಪ್ರಾಣ ಉಳಿಸಿದ ಪಿಎಸ್ಐ

ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ.

Update: 2024-03-07 06:44 GMT
ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ.
Click the Play button to listen to article

ಬೆಂಗಳೂರು: ಹತ್ತು ಅಡಿ ಆಳದ ಸಂಪ್​ಗೆ ಬಿದ್ದಿದ್ದ ಮಗುವನ್ನು ಸಂಚಾರ ಠಾಣೆಯ ಪಿಎಸ್​​ಐ ಕಾಪಾಡಿದ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ.

ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ. ಬಿಇಎಲ್​ ಬಳಿಯ ಮನೆಯೊಂದರಲ್ಲಿ ಎರಡೂವರೆ ವರ್ಷದ ಮಗು ಆಟ ಆಡುತ್ತ ನೀರು ತುಂಬಿದ್ದ ಸಂಪ್ ಗೆ ಬಿದ್ದಿದೆ. ಇದನ್ನು ಗಮನಿಸಿದ ಮಹಿಳೆಯರು ಸಹಾಯಕ್ಕಾಗಿ ಜೋರಾಗಿ ಕೂಗಾಡಿದ್ದಾರೆ.

ಇದೇ ಸಮಯದಲ್ಲಿ ಪಿಎಸ್ಐ ನಾಗರಾಜ್ ಅವರು ಠಾಣೆಗೆ ಕರ್ತವ್ಯಕ್ಕಾಗಿ ತೆರಳುವಾಗ ಮಹಿಳೆಯ ಕೂಗು ಕೇಳಿ ಸ್ಥಳಕ್ಕೆ ಹೋಗಿದ್ದಾರೆ. ಕೂಡಲೇ ಸಂಪ್‌ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಸದ್ಯ ಚಿಕಿತ್ಸೆ ಮುಂದುವರೆದಿದ್ದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಪಿಎಸ್​ಐ ಅವರ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ಖಾತೆಯಲ್ಲೂ ವಿಚಾರವನ್ನು ಪೋಸ್ಟ್‌ ಮಾಡಿದ್ದು, ನಾಗರಾಜ್ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ. “ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯ ಪಿ.ಎಸ್.ಐ ನಾಗರಾಜ್ ರವರು ಬ್ಯಾಡರಹಳ್ಳಿ ಸಮೀಪದ 10 ಅಡಿ ಆಳದ ನೀರಿನ ಟ್ಯಾಂಕ್‌ ಗೆ ಬಿದ್ದ ಎರಡುವರೆ ವರ್ಷದ ಬಾಲಕನನ್ನು ತಕ್ಷಣವೇ ರಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದು, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಪೊಲೀಸ್‌ ಪಡೆಗೆ ಉತ್ತಮ ಆದರ್ಶಪ್ರಾಯವಾಗಿದ್ದಾರೆ. ಧನ್ಯವಾದಗಳು, ಪಿಎಸ್ಐ ನಾಗರಾಜ್! ನಮ್ಮ ನಗರವನ್ನು ಸುರಕ್ಷಿತವಾಗಿಡುವಲ್ಲಿನ ನಿಮ್ಮ ಈ ಅಚಲ ಬದ್ಧತೆಗಾಗಿ!” ಎಂದು ಬೆಂಗಳೂರು ಸಂಚಾರ ಪೊಲೀಸ್ ಮೆಚ್ಚುಗೆ ಸೂಚಿಸಿದೆ.

Tags:    

Similar News