ಗುಜರಾತ್ನಲ್ಲಿ 'ಆಪರೇಷನ್ ಸಫಾಯಿ': ಬಾಂಗ್ಲಾದೇಶಿ ವಲಸಿಗರ ವಿರುದ್ಧ ಬೃಹತ್ ಕಾರ್ಯಾಚರಣೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತದಲ್ಲಿರುವ ಅಕ್ರಮ ಬಾಂಗ್ಲಾ ನಿವಾಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಹಮದಾಬಾದ್ನ ಚಂದೋಲಾ ಲೇಕ್ ಪ್ರದೇಶ ಸೇರಿದಂತೆ ಸೂರತ್ ಮತ್ತು ರಾಜ್ಕೋಟ್ನಲ್ಲಿ 890 ಮತ್ತು 134 ಶಂಕಿತರನ್ನು ಬಂಧಿಸಲಾಗಿದೆ.;
ಗುಜರಾತ್ ಸರ್ಕಾರವು ಬಾಂಗ್ಲಾದೇಶ ಅಕ್ರಮ ವಲಸಿಗರ ವಿರುದ್ಧ ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 6,500 ಜನರನ್ನು ಬಂಧಿಸಿದೆ. ಶುಕ್ರವಾರ ಆರಂಭಗೊಂಡಿರುವ 'ಆಪರೇಷನ್ ಸಫಾಯಿ' ಕಾರ್ಯಾಚರಣೆಯಲ್ಲಿ ಅವರು ಅಕ್ರಮವಾಗಿ ನೆಲೆಸಿರುವ ಮನೆಗಳನ್ನೂ ಧ್ವಂಸ ಮಾಡಲಾಗಿದೆ. ಇದು ಗುಜರಾತ್ ಗೃಹ ಸಚಿವಾಲಯ ಕೈಗೊಂಡಿರುವ ಬೃಹತ್ ಕಾರ್ಯಾಚರಣೆ ಎನ್ನಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತದಲ್ಲಿರುವ ಅಕ್ರಮ ಬಾಂಗ್ಲಾ ನಿವಾಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಹಮದಾಬಾದ್ನ ಚಂದೋಲಾ ಲೇಕ್ ಪ್ರದೇಶ ಸೇರಿದಂತೆ ಸೂರತ್ ಮತ್ತು ರಾಜ್ಕೋಟ್ನಲ್ಲಿ 890 ಮತ್ತು 134 ಶಂಕಿತರನ್ನು ಬಂಧಿಸಲಾಗಿದೆ. 450 ಅಕ್ರಮ ವಲಸಿಗರ ಗುರುತು ದೃಢೀಕರಣಗೊಂಡಿದ್ದು, 450 ಎಫ್ಐಆರ್ಗಳು ದಾಖಲಾಗಿವೆ. 74 ಬುಲ್ಡೋಜರ್ಗಳು, 200 ಟ್ರಕ್ಗಳು, 1,800 ಕಾರ್ಮಿಕರು ಮತ್ತು 3,000 ಪೊಲೀಸರನ್ನು ಬಳಸಿ 1,000ಕ್ಕೂ ಅಧಿಕ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ.
ಬಂಧಿತರಲ್ಲಿ ಹಲವರು ಪಶ್ಚಿಮ ಬಂಗಾಳದಿಂದ ಸುಳ್ಳು ದಾಖಲೆಗಳನ್ನು ಪಡೆದು ಭಾರತಕ್ಕೆ ನುಸುಳಿದ್ದರು. ಈ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಮತ್ತು ಚುನಾವಣಾ ಕಾರ್ಡ್ಗಳು ಸೇರಿಕೊಂಡಿವೆ.
ವಿದ್ಯುತ್ ಸಂಪರ್ಕ ಕಡಿತ
ಚಂದೋಲಾ ಲೇಕ್ನಲ್ಲಿ 143 ಬಾಂಗ್ಲಾದೇಶಿಗಳು ವಾಸವಿದ್ದ ಅಕ್ರಮ ಕಟ್ಟಡಗಳ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅಲ್ಲಿರುವವರನ್ನು ಬಂಧಿಸಿ, ಕಂಕರಿಯಾ ಫುಟ್ಬಾಲ್ ಮೈದಾನಕ್ಕೆ ಕರೆದುಕೊಂಡು ಬರಲಾಗಿದೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ
ಗೃಹ ಸಚಿವ ಹರ್ಷ್ ಸಂಘ್ವಿ ಪ್ರಕಾರ, ಬಂಧಿತರಲ್ಲಿ ಕೆಲವರು ಡ್ರಗ್ ದಂಧೆ, ಮಾನವ ಕಳ್ಳಸಾಗಣೆ ಮತ್ತು ಉಗ್ರಗಾಮಿ ಸಂಘಟನೆಗಳ ಜತೆ ನಂಟು ಹೊಂದಿದ್ದರು.
ಗುಜರಾತ್ ಸರ್ಕಾರ ಈಗಾಗಲೇ 77 ವಲಸಿಗರನ್ನು ಗಡೀಪಾರು ಮಾಡಿದ್ದು, ಗಡಿ ಭದ್ರತಾ ಪಡೆ (ಬಿಎಸ್ಎಫ್) ನೆರವು ಪಡೆಯಲಾಗಿದೆ. ಈ ಕಾರ್ಯಾಚರಣೆಯನ್ನು ಕೆಲವರು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪೂರಕ ಕ್ರಮ ಎಂದು ಹೊಗಳಿದ್ದಾರೆ.