ಅಲ್ಖೈದಾ ಜೊತೆ ಬಾಂಗ್ಲಾ ವಲಸಿಗರ ನಂಟು; ಐದು ರಾಜ್ಯಗಳಲ್ಲಿ ಎನ್ಐಎ ಶೋಧ
ಭಾರತವನ್ನು ಅಸ್ಥಿರಗೊಳಿಸುವ ಅಲ್ ಖೈದಾ ಉಗ್ರ ಸಂಘಟನೆಯ ಸಂಚಿನ ಭಾಗವಾಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆಲ ಬಾಂಗ್ಲಾದೇಶಿ ಪ್ರಜೆಗಳು ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ 2023ರಲ್ಲಿ ಎನ್ಐಎ ಪ್ರಕರಣ ದಾಖಲಿಸಿತ್ತು.
ಸಾಂದರ್ಭಿಕ ಚಿತ್ರ
ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಅಲ್ ಖೈದಾ ಸಂಘಟನೆ ಜೊತೆ ನಂಟು ಹೊಂದಿರುವ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ದಳ ದೇಶದ ಐದು ರಾಜ್ಯಗಳ 10 ಕಡೆ ಶೋಧ ನಡೆಸಿದೆ.
ಬಾಂಗ್ಲಾದಿಂದ ವಲಸೆ ಬಂದವರು ಅಲ್ ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಸಂಗತಿಯನ್ನು
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) 2023ರ ಮೇ ತಿಂಗಳಲ್ಲಿ ಪತ್ತೆಹಚ್ಚಿತ್ತು. ಬಳಿಕ ಜೂನ್ ತಿಂಗಳಲ್ಲಿ ಪ್ರಕರಣವನ್ನು ಎನ್ಐಎ ವಹಿಸಿಕೊಂಡಿತ್ತು.
ಈಗ ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳ, ತ್ರಿಪುರ, ಮೇಘಾಲಯ, ಹರಿಯಾಣ ಹಾಗೂ ಗುಜರಾತ್ ರಾಜ್ಯಗಳಲ್ಲಿರುವ ಶಂಕಿತರು ಮತ್ತು ಅವರ ಸಹಚರರ ನಿವಾಸ ಹಾಗೂ ಸಂಪರ್ಕ ಕೇಂದ್ರಗಳಲ್ಲಿ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಶೋಧದ ವೇಳೆ ತನಿಖಾಧಿಕಾರಿಗಳು ಹಲವು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ
ಪ್ರಕರಣದ ಹಿನ್ನೆಲೆ
ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಅಲ್ ಖೈದಾ ಉಗ್ರ ಸಂಘಟನೆಯ ಸಂಚಿನ ಭಾಗವಾಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆಲವು ಬಾಂಗ್ಲಾದೇಶಿ ಪ್ರಜೆಗಳು ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ 2023ರ ಜೂನ್ನಲ್ಲಿ ಎನ್ಐಎ ಪ್ರಕರಣ ದಾಖಲಿಸಿತ್ತು.
ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ್ ಸೋಜಿಬ್ಬಿಯಾನ್, ಮುನ್ನಾ ಖಾಲಿದ್ ಅನ್ಸಾರಿ, ಅಜರುಲ್ ಇಸ್ಲಾಂ ಮತ್ತು ಅಬ್ದುಲ್ ಲತೀಫ್ ವಿರುದ್ಧ 2023ರ ನವೆಂಬರ್ 10ರಂದು ಅಹಮದಾಬಾದ್ನ ವಿಶೇಷ ನ್ಯಾಯಾಲಯದಲ್ಲಿ ಎನ್ಐಎ ಆರೋಪಪಟ್ಟಿ ಸಲ್ಲಿಸಿತ್ತು.
ನಿಷೇಧಿತ ಉಗ್ರ ಸಂಘಟನೆಯಾದ ಅಲ್ ಖೈದಾದೊಂದಿಗೆ ನಂಟು ಹೊಂದಿರುವ ಇವರ ಮೇಲೆ ನಕಲಿ ದಾಖಲೆಗಳನ್ನು ಬಳಸಿ ಭಾರತ ಪ್ರವೇಶಿಸಿದ ಆರೋಪವಿದೆ. ಜೊತೆಗೆ ಬಾಂಗ್ಲಾದೇಶದ ಅಲ್ ಖೈದಾ ಕಾರ್ಯಕರ್ತರಿಗಾಗಿ ಹಣ ಸಂಗ್ರಹಿಸಿ ವರ್ಗಾವಣೆ ಮಾಡುವ ಹಾಗೂ ಮುಸ್ಲಿಂ ಯುವಕರನ್ನು ಅಲ್ ಖೈದಾ ಸಿದ್ಧಾಂತದತ್ತ ಸೆಳೆಯುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಎನ್ಐಎ ಆರೋಪಿಸಿದೆ.