ಕರ್ನಾಟಕಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಂತರರಾಷ್ಟ್ರೀಯ ಗೌರವ
ಕರ್ನಾಟಕ ಸರ್ಕಾರವು ತಂಬಾಕು ನಿಯಂತ್ರಣಕ್ಕಾಗಿ ಹಲವಾರು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ -2003 (COTPA) ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ.;
ತಂಬಾಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಕೋಶವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದೆ. ವಿಶ್ವ ತಂಬಾಕು ರಹಿತ ದಿನಾಚರಣೆ (WNTD 2025) ಸಂದರ್ಭದಲ್ಲಿ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ವಲಯದ ಅತ್ಯುತ್ತಮ ತಂಬಾಕು ನಿಯಂತ್ರಣ ಪ್ರಶಸ್ತಿ ಕರ್ನಾಟಕಕ್ಕೆ ಸಂದಿದೆ. ಇದು ತಂಬಾಕು ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯದ ಅವಿರತ ಪ್ರಯತ್ನಗಳಿಗೆ ದೊರೆತ ಮಹತ್ವದ ಮನ್ನಣೆಯಾಗಿದೆ.
ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯವಾಕ್ಯ "ತಂಬಾಕು ಮತ್ತು ನಿಕೋಟಿನ್ ಉದ್ಯಮಗಳ ಜಾಹೀರಾತು ತಂತ್ರಗಾರಿಕೆಯ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸುವುದು" ಎಂಬುದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಜಗತ್ತಿನಾದ್ಯಂತ ಯುವಜನರಲ್ಲಿ ತಂಬಾಕು ಸೇವನೆಯು ವೇಗವಾಗಿ ಹೆಚ್ಚುತ್ತಿದ್ದು, ಅನೇಕರು 18 ವರ್ಷಕ್ಕಿಂತ ಮುಂಚೆಯೇ ತಂಬಾಕು ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುತ್ತಿದ್ದಾರೆ. ತಂಬಾಕು ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವುದರಿಂದ, ಯುವಜನರಿಗೆ ಅರಿವು ಮೂಡಿಸಿ ಅವರನ್ನು ತಂಬಾಕಿನ ದಾಸ್ಯದಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕರ್ನಾಟಕದ ದಿಟ್ಟ ಹೆಜ್ಜೆಗಳು
ಕರ್ನಾಟಕ ಸರ್ಕಾರವು ತಂಬಾಕು ನಿಯಂತ್ರಣಕ್ಕಾಗಿ ಹಲವಾರು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ -2003 (COTPA) ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಇದರ ಅಡಿಯಲ್ಲಿ, ಸಾರ್ವಜನಿಕವಾಗಿ ತಂಬಾಕು ಬಳಸುವವರಿಗೆ ವಿಧಿಸುವ ದಂಡವನ್ನು 200 ರಿಂದ 1000 ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಏರಿಸುವ ಮೂಲಕ ಯುವಕರು ತಂಬಾಕಿನಿಂದ ದೂರವಿರಲು ಪ್ರೋತ್ಸಾಹ ನೀಡಲಾಗಿದೆ. ರಾಜ್ಯದಲ್ಲಿ ಹುಕ್ಕಾ ಬಾರ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ, ಧೂಮಪಾನ ಹಾಗೂ ತಂಬಾಕು ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕ್ರಮಗಳು ತಂಬಾಕು ಬಳಕೆಯನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ರಾಷ್ಟ್ರೀಯ ಮನ್ನಣೆ
ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳಾದ ಡಾ. ಯುಟಾರೊ ಸೆಟೋಯಾ ಅವರು ಕರ್ನಾಟಕದ ಪ್ರಯತ್ನಗಳನ್ನು ಶ್ಲಾಘಿಸಿ, ತಂಬಾಕು ನಿಯಂತ್ರಣದಲ್ಲಿ ಗಮನಾರ್ಹ ಕೊಡುಗೆ ನೀಡಿದ ಸಂಸ್ಥೆಗಳನ್ನು ಡಬ್ಲ್ಯುಎಚ್ಒ ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತದೆ. ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯು 2025 ರ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ ಪಡೆದಿರುವುದು ಅಧಿಕಾರಿಗಳ ಉತ್ಸಾಹಭರಿತ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇವಲ ಡಬ್ಲ್ಯುಎಚ್ಒ ಮಾತ್ರವಲ್ಲ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2024 ರ ಅವಧಿಯಲ್ಲಿ ನಡೆಸಿದ 60 ದಿನಗಳ 'ತಂಬಾಕು ಮುಕ್ತ ಯುವ ಅಭಿಯಾನ 2.0' ರಲ್ಲಿ ಕರ್ನಾಟಕ ರಾಜ್ಯವು ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಈ ಅಭಿಯಾನದಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನೀಡಲಾದ ಪ್ರಶಂಸನಾ ಪತ್ರವನ್ನು ಸಹ ಸಚಿವರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಸೌಧದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಡಬ್ಲ್ಯುಎಚ್ಒ ಅಧಿಕಾರಿಗಳು ಪ್ರಶಸ್ತಿಯನ್ನು ಸಚಿವರಿಗೆ ಹಸ್ತಾಂತರಿಸಿದರು. ಇದೇ ವೇಳೆ, COTPA ಅಡಿಯಲ್ಲಿ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕಾದ ಎಚ್ಚರಿಕೆ ಫಲಕಗಳನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ, ಕರ್ನಾಟಕದಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದ ಕುರಿತಾದ ವೀಡಿಯೊವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಶಿವಕುಮಾರ್ ಕೆ.ಬಿ., ನಿಮಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾ ಮೂರ್ತಿ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ಉಮಾ ಬುಗ್ಗಿ, ಜಂಟಿ ನಿರ್ದೇಶಕರಾದ ಡಾ. ರಜಿನಿ ಎಂ., ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ ನಿರ್ಣಾಯಕವಾಗಿದ್ದು, ನಮ್ಮ ಯುವಕರ ಆರೋಗ್ಯವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸಚಿವರು ಕರೆ ನೀಡಿದರು.